- ಕೋಲಾರ ಜಿಲ್ಲೆಯ ತರಕಾರಿಗಳಲ್ಲಿ ಮಾರಕ ರಾಸಾಯನಿಕ ಅಂಶದ ಆತಂಕ!
- ಜಿಲ್ಲೆಯ ಕೆರೆಗಳಲ್ಲಿನ ನೀರಲ್ಲಿ ಮಾರಕ ದ್ರಾವಣಗಳು ಬೆರೆತಿರುವ ಅನುಮಾನ
- 3ನೆ ಹಂತದ ಶುದ್ದೀಕರಣದ ನಂತರ ಕೆ.ಸಿ. ವ್ಯಾಲಿ ನೀರು ಹರಿಸಲು ಒತ್ತಾಯ
ಕೋಲಾರ (ಅ. 08): ಇಲ್ಲಿನ ಕೃಷಿಕರಲ್ಲಿ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಬೆಳೆದ ಹಣ್ಣು-ತರಕಾರಿಗಳಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಇಲ್ಲಿನ ಹಣ್ಣು-ತರಕಾರಿಗಳಲ್ಲಿ ಮಾರಕವಾದ ರಾಸಾಯನಿಕಗಳು ಬೆರೆತಿರುವ ಅನುಮಾನವೇ ಇದಕ್ಕೆ ಕಾರಣವಾಗಿದೆ. ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಜಿಲ್ಲೆಯಲ್ಲಿ ಬೇಸಾಯಕ್ಕೆ ಬಳಸುತ್ತಿರುವುದೇ ಇದಕ್ಕೆ ಮೂಲವಾಗಿದೆ.
ಕೆಸಿ ವ್ಯಾಲಿಯ ನೀರನ್ನು ಉಪಯೋಗಿಸಿಕೊಂಡು ತೆಗೆಯುತ್ತಿರುವ ಬೆಳೆಗಳು ಆಹಾರದಲ್ಲಿ ಬಳಸಲು ಯೋಗ್ಯವಲ್ಲ ಎಂದು ಸಣ್ಣದಾಗಿ ಪ್ರಚಾರ ಆರಂಭವಾಗಿದೆ. ಇದರಿಂದಾಗಿ ಜಿಲ್ಲೆಯ ಕೃಷಿ ಉತ್ಪನ್ನಗಳನ್ನು ಖರೀದಿಸಲು ಹೊರ ರಾಜ್ಯಗಳ ವ್ಯಾಪಾರಸ್ಥರು ಆಸಕ್ತಿಯನ್ನು ತೋರಿಸುತ್ತಿಲ್ಲ. ಬೆಂಗಳೂರಿನ ಒಳಚರಂಡಿ ನೀರು ಮತ್ತು ಕೈಗಾರಿಕೆಗಳಿಂದ ಹೊರ ಬರುವ ನೀರಿನಲ್ಲಿ ಮಾರಕ ರಾಸಾಯನಿಕಗಳು ಬೆರೆತಿರುತ್ತದೆ. ಇಂಥಹ ತ್ಯಾಜ್ಯ ನೀರನ್ನು ಮೂರು ಸಲ ಸಂಸ್ಕರಣೆ ಮಾಡಿದಲ್ಲಿ ಮಾತ್ರ ಶುದ್ದವಾಗುತ್ತದೆ. ಈ ಬಗ್ಗೆ ಸರ್ಕಾರವು ಗಮನ ಹರಿಸಿದರೆ ಕೃಷಿ ಉತ್ಪನ್ನಗಳಿಗೂ ಮೊದಲಿನ ಬೇಡಿಕೆ ಸಿಗುತ್ತದ ಅಂತಾರೆ ಕೃಷಿಕರು.