ಕಳೆದ ಬಾರಿ ಉತ್ತರಕನ್ನಡ ಜಿಲ್ಲೆಯ ಜನರನ್ನು ಹೈರಾಣಾಗಿಸಿದ ಗುಡ್ಡ ಕುಸಿತಗಳು ಈ ಬಾರಿ ಮತ್ತೆ ಜನರನ್ನು ಕಾಡಲಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಈಗಾಗಲೇ ತನ್ನ ವರದಿ ಸಲ್ಲಿಸಿ 3 ಜನವಸತಿ, 2 ರಸ್ತೆ ಭಾಗವಿರುವ ಯಲ್ಲಾಪುರದ ಅರಬೈಲ್ ಘಾಟ್, ಕಳಚೆ, ಜೊಯಿಡಾದ ಅಣಶಿ ಘಾಟ್, ಶಿರಸಿಯ ಜಾಜಿಗುಡ್ಡ, ಸಿದ್ಧಾಪುರದ ವಿವೇಕಾನಂದ ನಗರದಲ್ಲಿ ಭೂ ಕುಸಿತ ಹಾಗೂ ಗುಡ್ಡ ಕುಸಿತದ ಸಾಧ್ಯತೆಗಳ ಬಗ್ಗೆ ತಿಳಿಸಿದೆ.
ಕಳೆದ ಬಾರಿ ಉತ್ತರಕನ್ನಡ ಜಿಲ್ಲೆಯ ಜನರನ್ನು ಹೈರಾಣಾಗಿಸಿದ ಗುಡ್ಡ ಕುಸಿತಗಳು ಈ ಬಾರಿ ಮತ್ತೆ ಜನರನ್ನು ಕಾಡಲಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಈಗಾಗಲೇ ತನ್ನ ವರದಿ ಸಲ್ಲಿಸಿ 3 ಜನವಸತಿ, 2 ರಸ್ತೆ ಭಾಗವಿರುವ ಯಲ್ಲಾಪುರದ ಅರಬೈಲ್ ಘಾಟ್, ಕಳಚೆ, ಜೊಯಿಡಾದ ಅಣಶಿ ಘಾಟ್, ಶಿರಸಿಯ ಜಾಜಿಗುಡ್ಡ, ಸಿದ್ಧಾಪುರದ ವಿವೇಕಾನಂದ ನಗರದಲ್ಲಿ ಭೂ ಕುಸಿತ ಹಾಗೂ ಗುಡ್ಡ ಕುಸಿತದ ಸಾಧ್ಯತೆಗಳ ಬಗ್ಗೆ ತಿಳಿಸಿದೆ.
ಇದರಿಂದಾಗಿ ಸಮಸ್ಯೆ ಎದುರಾಗುವ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆಯಾದ್ರೂ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಂಡಿದೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಯಾಕಂದ್ರೆ, ಕಾರವಾರ- ಜೊಯಿಡಾ ಸಂಪರ್ಕಿಸುವ ಅಣಶಿ ಘಾಟ್ ಒಂದರಲ್ಲೇ ಕಳೆದ ಬಾರಿ ಮೂರು ಕಡೆಗಳಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿತ್ತು. ಇವುಗಳ ಪೈಕಿ ಎರಡು ಕಡೆಗಳಲ್ಲಿ ಕಲ್ಲುಗಳು, ಮಣ್ಣುಗಳನ್ನು ಹಾಕಿ ಮತ್ತೆ ಕುಸಿಯದಂತೆ ಭದ್ರ ಪಡಿಸಲಾಗಿದೆ.
ಈಗಾಗಲೇ ಜೂನ್ ತಿಂಗಳು ಪ್ರಾರಂಭವಾಗಿದ್ದು, ಯಾವ ಕ್ಷಣದಲ್ಲೂ ರಾಜ್ಯದಲ್ಲಿ ಭಾರೀ ಗಾಳಿ ಮಳೆಗಳು ಪ್ರಾರಂಭವಾಗಬಹುದು. ಇದರೊಂದಿಗೆ ಅಣಶಿ ಘಾಟ್ನಲ್ಲಿ ಈ ಬಾರಿಗೂ ಗುಡ್ಡ ಕುಸಿತವಾಗುತ್ತಾದ್ರೂ, ಜಿಲ್ಲಾಡಳಿತ ಮಾತ್ರ ನಡೆಯೋದು ನಡೆಯಲಿ ಮತ್ತೆ ನೋಡುವ ಅನ್ನುವಂತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಿದರೆ, ಎಲ್ಲೆಲ್ಲಿ ಗುಡ್ಡ ಹಾಗೂ ಮಣ್ಣು ಕುಸಿತಗಳು ನಡೆಯುತ್ತವೆಯೋ ಅಲ್ಲಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ, ಮುಂದಕ್ಕೂ ಕೈಗೊಳ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಕಳೆದ ಬಾರಿ ಅಣಶಿಯಲ್ಲಿ ಭೀಕರ ಪ್ರಮಾಣದಲ್ಲಿ ಕುಸಿತವಾದ ಸ್ಥಳದಲ್ಲೇ ಈ ಬಾರಿ ಮುಂಜಾಗ್ರತಾ ಕ್ರಮವನ್ನು ಕೂಡಾ ಜಿಲ್ಲಾಡಳಿತ ಕೈಗೊಂಡಿಲ್ಲ. ಇದರಿಂದಾಗಿ ಜನರ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆಯೇ ಅನ್ನೋ ಪ್ರಶ್ನೆ ಮೂಡುತ್ತಿದೆ.
ಅಂದಹಾಗೆ, ಕಳೆದ ಬಾರಿ ಮೇಲಿಂದ ಗುಡ್ಡ ಮಾತ್ರವಲ್ಲದೇ, ಕೆಳಭಾಗದಲ್ಲಿ ರಸ್ತೆಯೂ ಬಿರುಕು ಬಿಟ್ಟು ಎಲ್ಲವೂ ಏಕಾಏಕಿ ಒಟ್ಟಿಗೆ ಪ್ರಪಾತದತ್ತ ಉರುಳಿತ್ತು. ಅಲ್ಲಿ ರಸ್ತೆಯೇ ಇರಲಿಲ್ಲವೇನೋ... ಅನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಜಿಲ್ಲಾಡಳಿತ ಹಾಗೂ ಸ್ಥಳೀಯರು ಕುಸಿತ ಮಣ್ಣನ್ನೇ ಸಮತಟ್ಟುಗೊಳಿಸಿ ರಸ್ತೆಯನ್ನಾಗಿ ಪರಿವರ್ತಿಸಿದ್ದರು. ಆದರೆ, ಈ ವ್ಯಾಪ್ತಿಯಲ್ಲಿ ಅಪಾಯ ಮಾತ್ರ ತಪ್ಪಿದಂತಿಲ್ಲ.
ಗುಡ್ಡದ ಮೇಲ್ಭಾಗದಲ್ಲಿ ಈ ಹಿಂದೆ ಕುಸಿತವಾದ ಭಾಗದ ಬದಿಯಲ್ಲೇ ಬೃಹತ್ ಮರಗಳಿವೆ. ಈ ಬಾರಿಯ ಗಾಳಿ ಮಳೆಗೆ ಈ ಮರಗಳ ಅಡಿ ಭಾಗದಿಂದ ಆಧಾರ ತಪ್ಪಿ ಮತ್ತೆ ಬೃಹತ್ ಪ್ರಮಾಣದ ಮಣ್ಣಿನೊಂದಿಗೆ ದೊಡ್ಡ ದೊಡ್ಡ ಮರಗಳು ಉರುಳಿ ಬೀಳಲಿವೆ. ಸಾಕಷ್ಟು ವಾಹನಗಳು ಇದೇ ರಸ್ತೆಗಳ ಮೂಲಕ ಸಾಗುವುದರಿಂದ ಜನರಿಗೂ ಪ್ರಾಣಾಪಾಯ ತಪ್ಪಿದ್ದಲ್ಲ. ಈ ಕಾರಣದಿಂದ ಮಳೆ ಪ್ರಾರಂಭವಾಗೋ ಮುನ್ನವೇ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾರೆ ಸ್ಥಳೀಯರು.