Deepavali;  ಉಡುಪಿಯಲ್ಲಿ ದೀಪಗಳ ಹಬ್ಬದ ಸಂಭ್ರಮ, ತೈಲಾಭ್ಯಂಜನ

Nov 5, 2021, 7:35 PM IST

ಉಡುಪಿ(ನ. 05)   ಕೃಷ್ಣನ ಉಡುಪಿಯಲ್ಲಿ (Udupi) ದೀಪಾವಳಿ (Deepavali) ಸಂಭ್ರಮ ಮನೆಮಾಡಿದೆ. ನರಕಚತುರ್ದಶಿಯ ಪ್ರಯುಕ್ತ ಕೃಷ್ಣ ಮಠದಲ್ಲಿ (Krishna Mutt) ವಿಶೇಷ ಪೂಜೆಗಳು ನಡೆದವು. ಕಾರ್ತಿಕ ಮಾಸದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ, ಈ ದೀಪಾವಳಿಯ ವಿಶೇಷ. ಕೃಷ್ಣ ಮಠದಲ್ಲಿ ನಡೆಯುವ ತೈಲಾಭ್ಯಂಜನದಲ್ಲೂ ಭಕ್ತರು ಭಾಗಿಯಾದರು.

ನರಕ ಚತುರ್ದಶಿ, ಕೃಷ್ಣ ದೇವರು ನರಕಾಸುರನ್ನು ಕೊಂದ ಬಳಿಕ ದೇಹದ ಉಲ್ಲಾಸಕ್ಕೆ ತೈಲಾಭ್ಯಂಜನ ಮಾಡಿಕೊಂಡ ದಿನ. ಹಾಗಾಗಿ ದೀಪಾವಳಿಯ ಮೊದಲ ದಿನ ತೈಲಾಭ್ಯಂಜನ ಮಾಡಿಕೊಳ್ಳೋದು ಪ್ರತೀತಿ. ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಮಠಾಧೀಶರು ಭಕ್ತರೊಂದಿಗೆ ಬೆರೆತು ಅಭ್ಯಂಜನ ಮಾಡಿಕೊಳ್ಳುತ್ತಾರೆ. ಕೃಷ್ಣಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಕೃಷ್ಣ ದೇವರ ಗರ್ಭಗುಡಿಯ ಸುತ್ತಲೂ ಸಾವಿರಾರು ದೀಪಗಳನ್ನು ಬೆಳಗಾಯಿತು. ಕಾರ್ತಿಕ ಮಾಸದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ, ಈ ದೀಪಾವಳಿಯ ವಿಶೇಷ. ಮುಂಜಾನೆಯ ವೇಳೆ ಪಕ್ಷಿಗಳು, ಕಲರವ ಮಾಡುವ ಹೊತ್ತಲ್ಲಿ ಕೃಷ್ಣ ದೇವರನ್ನು ಪರ್ಯಾಯ ಅದಮಾರು ಮಠಾಧೀಶರು, ಬಹು ಬಗೆಯಿಂದ ಪೂಜಿಸಿದರು. ನಸುಕಿನ ವೇಳೆ ಈ ವಿಶೇಷ ಪೂಜೆಯನ್ನು ನೋಡುವುದೇ ಒಂದು ಸಂಭ್ರಮ.

ಉಡುಪಿಯಲ್ಲಿ ಬಲೀಂದ್ರ ಪೂಜೆ, ದೀಪಾವಳಿ..ಪೋಟೋಗಳು

ನರಕ ಚತುರ್ದಶಿಯಂದು ಕೈಗೊಳ್ಳುವ ತೈಲಾಭ್ಯಂಜನಕ್ಕೆ ವಿಶೇಷ ಮಹತ್ವವಿದೆ. ಕೃಷ್ಣಮಠದ ಹೊರ ಸುತ್ತಿನಲ್ಲಿ ಬೃಹತ್ ಗಾತ್ರದ ಒಲೆಗಳನ್ನು ಇಟ್ಟು, ಪೂಜಿಸಲಾಗುತ್ತದೆ. ಸ್ವತಹ ಪರ್ಯಾಯ ಮಠಾಧೀಶರ ಉಪಸ್ಥಿತಿಯಲ್ಲಿ ಈ ಪೂಜೆ ನಡೆಯುತ್ತದೆ. ಕಟ್ಟಿಗೆಯ ಒಲೆಯಿಂದ ಕುದಿಸಿದ ನೀರಿನಲ್ಲಿ ಸಾಂಪ್ರದಾಯಿಕ ರೀತಿಯ ತೈಲಾಭ್ಯಂಜನ ನಡೆಸಲಾಗುತ್ತದೆ. ಕೃಷ್ಣ ದೇವರ ಸನ್ನಿಧಾನದಲ್ಲಿ ಈ ಎಲ್ಲಾ ಆಚರಣೆಗಳು ನಡೆಯುವುದರಿಂದ ವಿಶೇಷ ಮಹತ್ವವನ್ನು ಪಡೆದಿದೆ.

ದೀಪಾವಳಿಯುದ್ದಕ್ಕೂ ವಿವಿಧ ಆಚರಣೆಗಳು ಕೃಷ್ಣಮಠದಲ್ಲಿ ನಡೆಯುತ್ತೆ. ಲಕ್ಷದೀಪೋತ್ಸವದವರೆಗೆ ಪ್ರತಿದಿನವೂ ತುಳಸೀ ಸಂಕೀರ್ತನೆ ನಡೆಸಲಾಗುತ್ತೆ. ಕೃಷ್ಣಮಠದ ದೀಪಾವಳಿ ಆಚರಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ.