ಸ್ವಪಕ್ಷೀಯರಿಂದಲೇ ಅಸಮಾಧಾನ, ಆರಗ ಜ್ಞಾನೇಂದ್ರ ಖಾತೆ ಬದಲಾವಣೆ ಪಕ್ಕಾ?

Apr 20, 2022, 1:21 PM IST

ಬೆಂಗಳೂರು (ಏ. 20): ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯನಿರ್ವಹಣೆ ಬಗ್ಗೆ ಸ್ವಪಕ್ಷೀಯರಿಂದ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿರುವ ಮಧ್ಯೆಯೇ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಅವರ ಖಾತೆ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗುಸುಗುಸು ಕೇಳಿಬರುತ್ತಿದೆ. ಪಕ್ಷದಲ್ಲಿ ಹಿರಿಯರಾಗಿದ್ದರೂ ಮೊದಲ ಬಾರಿಗೆ ಸಚಿವ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದಲೋ ಏನೋ ಎಂಬಂತೆ ಆರಗ ಜ್ಞಾನೇಂದ್ರ ಅವರು ತಮಗೆ ನೀಡಿದ ಗೃಹ ಖಾತೆ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೂ ಪಕ್ಷದ ವರಿಷ್ಠರಿಗೆ ಸಮಾಧಾನ ಇದ್ದಂತಿಲ್ಲ.

ಇದನ್ನೂ ಓದಿ: ಯಾವುದೇ ಧರ್ಮದವರಾಗಲಿ, ಕಾನೂನು ಕೈಗೆತ್ತಿಕೊಳ್ಳುವವರನ್ನು ಬಿಡೋ ಪ್ರಶ್ನೆ ಇಲ್ಲ: ಆರಗ

ಇದಕ್ಕೆ ಪೂರಕ ಎಂಬಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಹೋಲಿಕೆಯೊಂದಿಗೆ ಸೂಚ್ಯವಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಾಜೂಗೌಡ ಅವರು ಬಹಿರಂಗವಾಗಿಯೇ ಆರಗ ಜ್ಞಾನೆಂದ್ರ ಅವರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಯತ್ನಾಳ ಅವರಂತೂ ರಾಜ್ಯಕ್ಕೆ ಒಬ್ಬ ಸಮರ್ಥ ಗೃಹ ಸಚಿವರು ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ನೀಡಬೇಕಿದೆ ಎಂದು ತೀಕ್ಷ್ಣವಾಗಿಯೇ ಹೇಳಿದ್ದಾರೆ.