- ಬರದ ನಾಡು, ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ
- ಕೃಷಿ ಹೊಂಡ ನಿರ್ಮಿಸಿ ನೀರಿನ ಕಾರಂಜಿ ಹರಿಸಿ ಚಿನ್ನದಂತಹ ಬೆಳೆ
- ಎಂ.ಕಾಮ್ ಪದವಿ ಪಡೆದು ಕೈತುಂಬಾ ಸಂಬಳ ಗಳಿಸುತ್ತಿದ್ದ ರೈತ
- ಉದ್ಯೋಗ ಬಿಟ್ಟು ಕೈ ಕೆಸರುಮಾಡಿಕೊಂಡು ಈಗ ಯಶಸ್ವಿ ಕೃಷಿಕ
ಬೀದರ್ (ನ. 21): ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತನ್ನ ಗಡಿ ಜಿಲ್ಲೆ ಬೀದರ್ ನ (Bidar) ಔರಾದ್ ತಾಲೂಕಿನ ನಾಗೂರು ಗ್ರಾಮದ ರೈತ ಸಂತೋಷ ಖಂದಾಡೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಎಂ.ಕಾಮ್ ಪದವಿಧರನಾಗಿರುವ ಸಂತೋಷ್ ಖಾಸಗಿ ಕಂಪನಿಯಲ್ಲಿ ಕೆಲಸ ಕೈತುಂಬ ಸಂಬಳ ಪಡೆಯುತ್ತಿದ್ದರು. ಕಂಪನಿಯ ಕೆಲಸಕ್ಕೆ ಗುಡ್ಬೈ ಹೇಳಿ ಸ್ವಂತ ಹೊಲದಲ್ಲಿ ಬೆವರು ಸುರಿಸಿ ಕೆಲಸ ಮಾಡಬೇಕು ಅಂತ ಪಣತೊಟ್ಟ ಇವರು ಎರಡು ಬಾರಿ ಬೋರ್ವೆಲ್ ಕೊರೆಸಿ ಕೈಸುಟ್ಟುಕೊಂಡಿದ್ದರು. ಮೂರನೇ ಪ್ರಯತ್ನದಲ್ಲಿ ಬೋರ್ವೆಲ್ನಲ್ಲಿ ನೀರು ಬಂದು ಯಶಸ್ವಿಯಾದರು.
ಕಲ್ಲುಗಳಿಂದ ತುಂಬಿಕೊಂಡಿದ್ದ ಈ ಬರಡು ಭೂಮಿಯಲ್ಲಿ ಸತತ ಎರಡು ಮೂರು ವರ್ಷ ಕಠಿಣ ಪರಿಶ್ರಮ ಪಟ್ಟು ಕಲ್ಲುಗಳನ್ನ ಹೊರಗೆದು ಮೂರು ಏಕರೆ ಪ್ರದೇಶದಲ್ಲಿ ಮೂರು ಸಾವಿರ ಪಪ್ಪಾಯಿ ನಾಟಿ ಮಾಡಿದ್ದಾರೆ. ಪಪ್ಪಾಯಿ ಗಿಡಗಳ ಮಧ್ಯೆ ಚೆಂಡು ಹೂವು (Mexican marigold) ಬೆಳಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಕೃಷಿ ಹೊಂಡದಿಂದ ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರುಣಿಸಲಾಗುತ್ತಿದೆ. ಈ ಮೂಲಕ ಭರ್ಜರಿ ಬೆಳೆ ಬೆಳೆಸಿ ಈ ಭಾಗದ ರೈತರಿಂದ ಸೈ ಎನಿಸಿಕೊಂಡಿದ್ದಾರೆ.