- ಈ ಗ್ರಾಮಗಳಿಗೆ ಹೆಣ್ಣು ಕೋಡೊದಿಲ್ಲ, ಯುವಕರ ಕಂಕಣಭಾಗ್ಯ ಕಸಿದ ಕಸ!
- ಸಂಬಂಧಿಕರು ಒಮ್ಮೆ ಬಂದರೇ ಮತ್ತೆ ವಾಪಸ್ ಬರುವ ಪ್ರಶ್ನೆಯೇ ಇಲ್ಲ!
- ಕಸದಿಂದ ಕಳೆದ 3 ವರ್ಷದಿಂದ ಅರಸಮ್ಮನ ಜಾತ್ರೆಯೇ ಸ್ಥಗಿತ
ಬೆಂಗಳೂರು (ಡಿ. 04): ದೊಡ್ಡಬಳ್ಳಾಪುರ-ಕೊರಟಗೆರೆ (Doddaballapur Koratagere) ಕ್ಷೇತ್ರದ ಗಡಿರೇಖೆಯ ಮೇಲಿರುವ ಎಂಎಸ್ಜಿಪಿ ಇನ್ ಪ್ರಾ ಟೇಕ್ ಘನತ್ಯಾಜ್ಯ ವಿಲೇವಾರಿ ಘಟಕ ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕ ಆಗಿದೆ. ಈ ಘಟಕದಿಂದ ಹೊರ ಬರುವ ಅನಿಲ ಮತ್ತು ಕಸದ ರಾಶಿಯ ಕೊಳಚೆ (Garbage) ನೀರು ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಗೆ ಸೇರಿ ನೀರು (Polluted Water) ಕಲುಷಿತಗೊಂಡಿದೆ.
ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರಕಾರ ಸ್ಥಳೀಯ ಗ್ರಾಮ ಪಂಚಾಯ್ತಿಯ ಪರವಾನಿಗೆ (License) ಪಡೆದಿಲ್ಲ. ಭಕ್ತರಹಳ್ಳಿ ಗ್ರಾಪಂಯಿಂದ ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿದರೂ ಘಟಕದ ಮಾಲೀಕರು ಉತ್ತರ ನೀಡಿಲ್ಲ, ಘಟಕಕ್ಕೆ ಪ್ರತಿನಿತ್ಯ 8 ರಿಂದ 10ಸಾವಿರ ಟನ್ ಕಸ ಬರುತ್ತಿದೆ. ಅಳತೆ ಮೀರಿ ತರುವ ಕಸ ವಿಲೇವಾರಿ ಆಗದೇ ಕೊಳೆತು ಭೂಮಿಗೆ ಸೇರಿ ಅಂತರ್ಜಲ ಮಟ್ಟ ವಿಷಮಯವಾಗಿದೆ. ಇದ್ರಿಂದ ಸುಮಾರು 100 ಗ್ರಾಮದ ಜನರಿಗೆ ಚರ್ಮ ರೋಗ, ಶ್ವಾಸಕೋಶದ ತೊಂದರೆ, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ. ನಮ್ಮ ಗ್ರಾಮಕ್ಕೆ ಹೆಣ್ಣು ಕೂಡಲು ಯಾರು ಮುಂದೆ ಬರುತ್ತಿಲ್ಲ. ಸಂಬಂಧಿಕರ ಮನೆಗೆ ಬಂದರೇ ಅರ್ಧಗಂಟೆಯು ಇರೋದಿಲ್ಲ. ನಮ್ಮ ಊರಿನ ಗ್ರಾಮದೇವತೆ ಅರಸಮ್ಮ ಜಾತ್ರೆ ನಿಲ್ಲಿಸಿ ಐದು ವರ್ಷವಾಗಿದೆ. ಅಂತರ್ಜಲ ಮಟ್ಟ ಕಲುಷಿತವಾಗಿ ಕುಡಿಯಲು ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.