ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ರಾಜ್ಯದ ಮತ್ತೊಬ್ಬ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ. 26): ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ರಾಜ್ಯದ ಮತ್ತೊಬ್ಬ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಕ್ತಿಪಂಥದ ಹರಿಕಾರ ಕನಕದಾಸರ ಬಗ್ಗೆ ಪಠ್ಯದಲ್ಲಿ ಕೇವಲ ಒಂದೇ ಸಾಲಿನ ವಿವರಣೆ ನೀಡಿ ಅವರಿಗೆ ಅಗೌರವ ತೋರಿಸಲಾಗಿದೆ ಎಂದು ಕಾಗಿನಲೆ ಮಹಾಸಂಸ್ಥಾನದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಕ್ತಿಪಂಥ ಎಂಬ ಪಾಠದಲ್ಲಿ ಕನಕದಾಸರನ್ನು ಪರಿಚಯಿಸುವಾಗ ಕೇವಲ ಒಂದೇ ಒಂದು ಸಾಲಿನಲ್ಲಿ ಅವರ ಬಗ್ಗೆ ಮಾಹಿತಿ ನೀಡಿ ಮುಗಿಸಲಾಗಿದೆ. ಈ ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯ ಸಮಿತಿಯು ಕನಕದಾಸರ ಬಗ್ಗೆ ಸುಮಾರು ಮುಕ್ಕಾಲು ಪುಟಗಳಷ್ಟುವಿವರವನ್ನು ಪಠ್ಯದಲ್ಲಿ ನೀಡಿತ್ತು. ಇದನ್ನು ರೋಹಿತ್ ಚಕ್ರತೀರ್ಥ ಸಮಿತಿ ಕತ್ತರಿಸಿ ಒಂದು ಸಾಲಿಗೆ ಇಳಿಸಿದೆ. ಈ ಸರ್ಕಾರಕ್ಕೆ ಕನಕದಾಸರ ಬಗ್ಗೆ ಇಷ್ಟುಅಸಡ್ಡೆ ಏಕೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ಗೆ ಶ್ರೀಗಳು ಪತ್ರ ಬರೆದಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೇ ಮುಂದುವರೆಸಬೇಕು. ಇಲ್ಲದಿದ್ದರೆ ಸಮಾಜವನ್ನು ಸಂಘಟಿಸಿಕೊಂಡು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.