
ಕೋಲ್ಕತ್ತಾ: ರಾತ್ರೋರಾತ್ರಿ ಸ್ಟಾರ್ ಆದವರಲ್ಲಿ ಗಾಯಕಿ ರಾನು ಮಂಡಲ್ ಸಹ ಒಬ್ಬರು. ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಹಿಂದಿ ಹಾಡು ಹೇಳುತ್ತಾ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಒಂದು ವಿಡಿಯೋದಿಂದ ಫೇಮಸ್ ಆದವರು. ರಾನು ಧ್ವನಿಗೆ ಫಿದಾ ಆದ ಸಂಗೀತ ಪ್ರೇಮಿಗಳು ಈಕೆಗೊಂದು ಒಳ್ಳೆಯ ಅವಕಾಶ ಸಿಗಬೇಕು ಎಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ರಾನು ಮಂಡಲ್ ಧ್ವನಿಗೆ ಮನಸೋತ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರಶ್ಮಿಯಾ ಬಾಲಿವುಡ್ಗೆ ಕರೆ ತಂದಿದ್ದರು. ಹಿಮೇಶ್ ರಶ್ಮಿಯಾ ನೀಡಿದ ಮೊದಲ ಅವಕಾಶದಲ್ಲಿಯೇ ರಾನು ಸಖತ್ ಫೇಮಸ್ ಆದರು. ಹಿಮೇಶ್ ರಶ್ಮಿಯಾ ನೀಡಿದ ಮೂರು ಹಾಡುಗಳಲ್ಲಿ ಆಶೀಕಿ ಮೇರಿ ಹಾಡು ಟ್ರೆಂಡ್ ಸೃಷ್ಟಿ ಮಾಡಿತ್ತು. ಹಲವು ದಿನಗಳ ಕಾಲ ಜನರ ಮೊಬೈಲ್ ಕಾಲರ್ ಟ್ಯೂನ್ ಸಹ ಆಗಿತ್ತು. ಬೆಳಗಾಗುವಷ್ಟರಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ರಾನು ಮಂಡನ್ ಮತ್ತೆ ತೆರೆಯ ಹಿಂದೆ ಸರಿದಿದ್ದಾರೆ. ಅವಕಾಶಗಳು ಸಿಗದ ಹಿನ್ನೆಲೆ ಮುಂಬೈನಲ್ಲಿದ್ದ ರಾನು, ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದಾರೆ.
2019ರಲ್ಲಿ ಎಲ್ಲಿ ನೋಡಿದರೂ ರಾನು ಮಂಡಲ್ ಧ್ವನಿ ಕೇಳುತ್ತಿತ್ತು. ಕೆಲವು ತಿಂಗಳವರೆಗೆ ರಾನು ಮಂಡಲ್ ಏನೇ ಮಾಡಿದರೂ ಸುದ್ದಿಯಾಗುತ್ತಿತ್ತು. ಇಷ್ಟು ಮಾತ್ರವಲ್ಲದೇ ದೂರವಾಗಿ ಮಗಳು ಸಹ ರಾನು ಮಂಡಲ್ಗೆ ಹತ್ತಿರವಾಗಿದ್ದರು. ಫೇಮಸ್ ಆಗುತ್ತಿದ್ದಂತೆ ತಾನು ಬಂದ ದಾರಿಯನ್ನು ಮರೆತಿದ್ದ ರಾನು ಮಂಡಲ್, ಸೆಲ್ಫಿ ಕೇಳಲು ಬಂದಿದ್ದ ಮಹಿಳಾ ಅಭಿಮಾನಿಯನ್ನು ಅವಮಾನಿಸಿದ್ದರು. ಮಾಲ್ನಲ್ಲಿ ಮಹಿಳಾ ಅಭಿಮಾನಿ ಭುಜ ಮುಟ್ಟಿ ಕರೆದಿದ್ದಕ್ಕೆ ರಾನು ಕೋಪಗೊಂಡಿದ್ದರು. ಈ ವಿಡಿಯೋ ವೈರಲ್ ಬಳಿಕ ರಾನು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಫ್ಯಾಶನ್ ಶೋವೊಂದರಲ್ಲಿ ರಾನು ಮಂಡಲ್ ವಾಕ್ ಮಾಡಿದ್ದರು. ರಾನು ಮಂಡಲ್ ಅತಿಯಾದ ಮೇಕಪ್ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
ಮೇಕಪ್ ಅವತಾರದಲ್ಲಿ ರಾನು ಮಂಡಲ್ ನೋಡಿ ದಂಗಾದ ನೆಟ್ಟಿಗರು!
ಹಿಮೇಶ್ ರಶ್ಮಿಯಾ ಅವಕಾಶ ನೀಡಿದ ರಾನು ಮಂಡಲ್ಗೆ ಕೆಲವು ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶಗಳು ಸಿಗಲಾರಂಭಿಸಿದವು. ಹಾಗಾಗಿ ಕೋಲ್ಕತ್ತಾದಿಂದ ಬಂದು ಮುಂಬೈನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದರು. ಕಾಲನಂತರ ಅವಕಾಶಗಳು ಕಡಿಮೆಯಾದಾಗ ಬಾಡಿಗೆ ಹಣ ಕಟ್ಟಲು ಸಾಧ್ಯವಾಗದಿದ್ದಾಗ ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದರು. ಈಗ ಕೋಲ್ಕತ್ತಾದ ಹೊರವಲಯದಲ್ಲಿರುವ ಪುಟ್ಟ ಮನೆಯಲ್ಲಿ ವಾಸವಾಗಿರುವ ರಾನು ಮಂಡಲ್, ತಮ್ಮ ಭೇಟಿಗೆ ಬರುವ ಜನರ ಬಳಿ ವಿಚಿತ್ರ ಬೇಡಿಕೆಗಳನ್ನು ಇರಿಸುತ್ತಿದ್ದಾರೆ ಎಂದು ವ್ಲಾಗರ್ ಹೇಳಿದ್ದಾರೆ. ವ್ಲಾಗರ್ ತಮ್ಮ ವಿಡಿಯೋದಲ್ಲಿ ಸದ್ಯ ರಾನು ಮಂಡಲ್ ಹೇಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಭೇಟಿಗೆ ಬರುವ ಜನರಿಗೆ ರಾನು ಮಂಡಲ್ ಊಟ ಮತ್ತು ಆಹಾರ ಸಾಮಾಗ್ರಿ ತಂದುಕೊಡುವಂತೆ ಕೇಳುತ್ತಾರೆ. ಇದರ ಜೊತೆಗೆ ಸಿಹಿ ತಿನಿಸು, ಬಟ್ಟೆ, ದಿನನಿತ್ಯ ಬಳಕೆಗೆ ಬೇಕಾಗುವ ವಸ್ತುಗಳು ತನಗೆ ಬೇಕೆಂದು ಕೇಳುತ್ತಾರೆ. ಒಂದು ವೇಳೆ ತಂದು ಕೊಡಲು ಒಪ್ಪದಿದ್ದರೆ ಪೊರಕೆ ಹಿಡಿದು ಹೊಡೆಯಲು ರಾನು ಮಂಡಲ್ ಬರುತ್ತಾರೆ. ಈ ಕಾರಣದಿಂದ ರಾನು ಭೇಟಿಗೆ ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಯಾವುದೇ ಕಾರ್ಯಕ್ರಮಗಳು ಸಿಗದ ಹಿನ್ನೆಲೆ ಜೀವನ ನಡೆಸಲು ರಾನು ಕಷ್ಟಪಡ್ತಿದ್ದಾರೆ. ಈ ವಿಷಯ ತಿಳಿದು ಕೆಲವರು ಆಹಾರ ನೀಡುತ್ತಾರೆ. ಕೆಲವೊಮ್ಮೆ ಇಡೀ ದಿನ ಆಹಾರವಿಲ್ಲದೇ ರಾನು ಉಪವಾಸ ಇರುತ್ತಾರೆ.
ಅವತಾರವೋ? ಅವಾಂತರವೋ? ಮದುಮಗಳ ಅವತಾರದಲ್ಲಿ ರಾನು ಮಂಡಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.