ರಮೇಶ್ ಕೈ ಹಿಡಿಯುತ್ತಾರಾ 'ಅಮ್ನೋರು'?

By Suvarna NewsFirst Published Jan 17, 2020, 2:20 PM IST
Highlights

ನಟನೆಗೂ ಸೈ, ನಿರ್ದೇಶನಕ್ಕೂ ಸೈ, ಹಿರಿತೆರೆಯಾದರೂ ಸರಿಯೇ, ಕಿರುತೆರೆಯಾದರೂ ಸರಿಯೇ ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಶಕ್ತಿ ರಮೇಶ್‌ ಇಂದಿರಾ ಅವರಿಗಿದೆ. ‘ನಾನು ರೀಮೇಕ್‌ ಮಾಡಲ್ಲ, ಯಾವುದನ್ನೂ ಎಲ್ಲಿಂದಲೂ ಕದ್ದು ತರುವುದಿಲ್ಲ. ನನ್ನೊಳಗೆ ಬರಹಗಾರ ಜೀವಂತವಾಗಿ ಇರುವವರೆಗೂ ಸ್ವಂತವಾದದ್ದನ್ನೇ ಮಾಡುತ್ತೇನೆ’ ಎನ್ನುವ ರಮೇಶ್‌ ಅವರು ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಹಿಂದೆಯೂ ಭಕ್ತಿ ಪ್ರದಾನ ಧಾರಾವಾಹಿಗಳ ನಿರ್ದೇಶನ ಮಾಡಿ ನಾಡಿನ ಜನರಲ್ಲಿ ಭಕ್ತಿ ರಸವನ್ನು ಉಕ್ಕಿಸಿದ್ದ ರಮೇಶ್‌ ಅವರು ಇದೀಗ ಮೊದಲ ಬಾರಿಗೆ ಉದಯ ಟಿವಿಗೆ ಮತ್ತದೇ ಭಕ್ತಿ ಪ್ರಧಾನ ಧಾರಾವಾಹಿ ಮಾಡುತ್ತಿದ್ದಾರೆ. ‘ಅಮ್ನೋರು’ ಅದರ ಹೆಸರು. ಸಂಭವಾಮಿ ಯುಗೇ ಯುಗೇ ಎನ್ನುವ ಸಬ್‌ಟೈಟಲ್‌ ಹೊತ್ತು ಬರುತ್ತಿರುವ ‘ಅಮ್ನೋರು’ ಭಕ್ತಿ, ಶಕ್ತಿ, ಯುಕ್ತಿ, ಕೃತ್ರಿಮಾಗಳೆಲ್ಲವನ್ನೂ ಒಳಗೊಂಡ ಸಾಮಾಜಿಕ, ಪೌರಾಣಿಕ, ಸೋಷಿಯೋ ಮೈಥಾಲಜಿ ಕತೆ.

CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!

ಪುನರ್ಜನ್ಮದ ಕತೆ

ಶಂಕರ ಮತ್ತು ದಾಕ್ಷಾಯಣಿ ಅಮ್ನೋರ ಪರಮ ಭಕ್ತರು. ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹ ಮತ್ತು ರುದ್ರಾಕ್ಷಿಯ ರಕ್ಷಣೆಗಾಗಿ ನಿಂತು ಮಾಟಗಾತಿ ಧನಶೇಖರಿ ಮತ್ತು ವರದಪ್ಪನಿಂದ ಪ್ರಾಣ ಕಳೆದುಕೊಂಡ ಭಕ್ತ ದಂಪತಿಗಳು. ಇವರು ಮತ್ತೆ ಪುನರ್ಜನ್ಮ ಪಡೆದುಕೊಂಡು ಬಂದು ವಿಗ್ರಹದ ಪ್ರತಿಷ್ಠಾಪನೆ ಮಾಡುವವರೆಗೂ ರುದ್ರ ಎನ್ನುವ ಆತ್ಮ 27 ವರ್ಷದಿಂದ ಆ ವಿಗ್ರಹದ ರಕ್ಷಣೆಗೆ ನಿಂತಿದೆ. ಇತ್ತು ಧನಶೇಖರಿ ಮತ್ತು ವರದಪ್ಪನಿಂದ ವಿಗ್ರಹ ವಶಪಡಿಸಿಕೊಳ್ಳಲು ಬೇಕಾದ ತೀವ್ರ ಕಸರತ್ತು ನಡೆಯುತ್ತಿರುತ್ತಿದೆ, ಈ ವೇಳೆಗೆ ಶಂಕರ ಮತ್ತು ದಾಕ್ಷಾಯಣಿ ಪುನರ್ಜನ್ಮವೆತ್ತಿ ಬರುತ್ತಾರಾ, ವಿಗ್ರಹ ಸ್ಥಾಪನೆಯಾಗುತ್ತಾ, ದುಷ್ಟಶಕ್ತಿಗಳಿಗೆ ಶಿಕ್ಷೆಯಾಗುತ್ತಾ, ಅಮ್ನೋರು ಕಣ್ಣು ಬಿಡುತ್ತಾರಾ? ಎನ್ನುವ ಕುತೂಹಲದ ಮೇಲೆ ಧಾರಾವಾಹಿ ಸಾಗುತ್ತಾ ಹೋಗುತ್ತದೆ.

ಜ. 20ರಿಂದ ಉದಯ ಟಿವಿಯಲ್ಲಿ

ಹೀಗೊಂದು ಕುತೂಹಲಿಯಾದ ಕತೆಯನ್ನು ರಮೇಶ್‌ ಇಂದಿರಾ ಅವರು ಪ್ರತಿಭಾವಂತ ಕಲಾವಿದರ ತಂಡವನ್ನು ಕಟ್ಟಿಕೊಂಡು ಈಗಾಲೇ 40 ದಿನದ ಶೂಟ್‌ ಮುಗಿಸಿಕೊಂಡಿದ್ದಾರೆ. ಮೇಲುಕೋಟೆ ಸೇರಿ ವಿವಿಧ ಕಡೆಯಲ್ಲಿ ಇನ್ನೂ ಶೂಟಿಂಗ್‌ ಮಾಡುವುದಿದೆ. ಜ. 20ರಿಂದ ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ರಾತ್ರಿ 7.00 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಕಾಣಲು ಇದೀಗ ಎಲ್ಲಾ ಪೂರ್ವ ತಯಾರಿಗಳನ್ನು ಬಹುತೇಕ ಮುಗಿಸಿಕೊಂಡಿರುವ ಫ್ರೇಮ್ಸ್‌ ಸಂಸ್ಥೆ ನಿರ್ಮಾಣದ ‘ಅಮ್ನೋರು’ ತಂಡ ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿತ್ತು.

ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ!

ಇದೇ ರೀತಿಯ ಅವಕಾಶ ಬರುತ್ತಿವೆ

ನಿರ್ದೇಶಕ ರಮೇಶ್‌ ಇಂದಿರಾ ಹಿಂದೆಯೂ ದೇವಿ ಮಹಾತ್ಮೆಯನ್ನು ಸಾರುವ ಧಾರಾವಾಹಿಗಳನ್ನು ಕೊಟ್ಟವರು. ಇದೀಗ ಮತ್ತೆ ಅದೇ ಜಾನರ್‌ ಧಾರಾವಾಹಿ ಮಾಡುತ್ತಿರುವುದರಿಂದ ಅವರು ಭಕ್ತಿ ಪ್ರಧಾನ ಸೀರಿಯಲ್‌ಗಳ ಬ್ರಾಂಡ್‌ ಆಗುತ್ತಿದ್ದಾರಾ ಎನ್ನುವ ಡೌಟ್‌ ಇದ್ದರೆ ಅದು ಸುಳ್ಳು. ಯಾಕೆಂದರೆ ರಮೇಶ್‌ ಅವರೇ ಹೇಳುವ ಹಾಗೆ ‘ನಾನು ಈ ರೀತಿಯ ಸೀರಿಯಲ್‌ಗಳಿಗೆ ಬ್ರಾಂಡ್‌ ಆಗ್ತಿಲ್ಲ. ಅವಕಾಶಗಳು ಅದೇ ರೀತಿ ಬರುತ್ತಿವೆ. ಪ್ರೇಕ್ಷರ ಅಗತ್ಯ ತಿಳಿದುಕೊಂಡು ಅದಕ್ಕೆ ತಕ್ಕಂತೆ ಧಾರಾವಾಹಿ ನೀಡದೇ ಇದ್ದರೆ ನಾವು ಹಿಂದೆ ಬೀಳುತ್ತೇವೆ. ಇಲ್ಲಿ ದೈವಿಕ ಅಂಶ ಇದ್ದರೂ ಅದರೊಂದಿಗೆ ಲವ್‌ ಇದೆ. ಇಂದಿನ ಕಾಲ ಘಟ್ಟದ ಸನ್ನಿವೇಶಗಳೂ ಇರಲಿವೆ’.

ಚಿತ್ರಕತೆ ಕಡೆಗೆ ಗಮನ

‘ನನಗೆ ಟಿಆರ್‌ಪಿ ಬಗ್ಗೆ ಗೊತ್ತಿಲ್ಲ. ಒಳ್ಳೆಯ ಚಿತ್ರಕತೆ ಇದ್ದರೆ ಜನ ಇಷ್ಟಪಡುತ್ತಾರೆ. ಕೆಲವು ಸೀರಿಯಲ್‌ಗಳು ಕ್ಲಿಕ್‌ ಆಗುತ್ತಿದ್ದಂತೆ ಸ್ಕಿ್ರಪ್ಟ್‌ ಮೇಲೆ ಗಮನ ಕಳೆದುಕೊಳ್ಳುತ್ತಾರೆ. ಆದರೆ ನಾನು ಹಾಗೆ ಮಾಡುವುದಿಲ್ಲ. ಯಾವುದೇ ಎಪಿಸೋಡ್‌ಅನ್ನೂ ನಾನು ನೋಡದೇ ಕಳಿಸುವುದಿಲ್ಲ. ಅಮ್ನೋರು ಸೀರಿಯಲ್‌ನಲ್ಲಿ ಒಂದಷ್ಟುಸಿಜಿ ವರ್ಕ್ಸ್‌ಗೆ ಆದ್ಯತೆ ನೀಡಿದ್ದು, ಜನರಿಗೆ ಇಷ್ಟವಾಗುವ ಹಾಗೆ ಸೀರಿಯಲ್‌ ಮಾಡುತ್ತೇವೆ’ ಎಂದು ಹೇಳಿಕೊಳ್ಳುತ್ತಾರೆ ರಮೇಶ್‌.

ಜುಲೈ ವೇಳೆಗೆ ಬೆಳ್ಳಿ ತೆರೆಗೆ

ನಾನು ಕಲಾವಿದರ ಆಯ್ಕೆಯಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ. ಪ್ರತಿಭೆ ಇದ್ದವರಿಗೆ ಅವಕಾಶ ನೀಡೇ ನೀಡುತ್ತೇನೆ. ಹಾಗಾಗಿಯೇ ನನ್ನ ಸೀರಿಯಲ್‌ಗಳಲ್ಲಿ ಕ್ವಾಲಿಟಿ ಕಂಡುಬರುತ್ತದೆ. ಇನ್ನು ‘ಪ್ರೀಮಿಯರ್‌ ಪದ್ಮಿನಿ’ ನಂತರ ಈ ವರ್ಷ ಜುಲೈ ವೇಳೆಗೆ ಮತ್ತೊಂದು ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಬರುವ ಮನಸ್ಸಿದೆ’ ಎಂದು ಹೇಳಿದ ರಮೇಶ್‌ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುವ ಸುಳಿವು ನೀಡಿದರು.

ಧರ್ಮಕೀರ್ತಿ ರಾಜ್‌, ಅಕ್ಷರ, ರೇಖಾ ರಾವ್‌, ಅನುಶ್ರೀ, ಸುಕೀರ್ತಿ, ಹರ್ಷಿತಾ, ಸಂಗೀತ ಭಟ್‌, ಅನಂತ್‌ ವೇಲು, ಶರ್ಮಿಳಾ, ಮಧು ಹೆಗಡೆ, ರೋಹಿಣಿ, ವಿಜಯ ಲಕ್ಷ್ಮೇ, ವಿಕ್ರಮ್‌ ಸೇರಿ ಹಲವಾರು ಯುವ ಪ್ರತಿಭೆಗಳು ಧಾರಾವಾಹಿಯಲ್ಲಿ, ರಮೇಶ್‌ ಇಂದಿರಾ ಅವರ ಸಾರಥ್ಯದಲ್ಲಿ ಸಾಗುತ್ತಿವೆ. ಜೊತೆಗೆ ಅನೂಪ್‌ ಸಿಳೀನ್‌ ಅವರ ಸಂಗೀತ, ದಯಾಶಂಕರ್‌ ಕ್ಯಾಮರಾ ವರ್ಕ್Ü ಇಲ್ಲಿ ಸೇರಿದೆ.

click me!