
ಬೆಂಗಳೂರು: ಕಲಾಗಂಗೋತ್ರಿ ರಂಗತಂಡವು 5 ದಶಕಗಳಿಗಿಂತ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರ ಪ್ರಸಿದ್ಧ ರಾಜಕೀಯ ವ್ಯಂಗ್ಯ ನಾಟಕ ‘ಮುಖ್ಯಮಂತ್ರಿ’ ಈಗ ತನ್ನ 891ನೇ ಪ್ರದರ್ಶನದತ್ತ ಹೆಜ್ಜೆ ಇಟ್ಟಿದೆ. ಈ ವೀಕೆಂಡ್ ಅಂದರೆ ನವೆಂಬರ್ 23, 2025 ರಂದು ನಗರದ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಈ ನಾಟಕವನ್ನು ಮತ್ತೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ನಾಟಕದ ಕೃತಿ ಬಿಡುಗಡೆ ಕೂಡ ನಡೆಯಲಿದೆ. 1980ರಲ್ಲಿ ಮೊದಲ ಬಾರಿ ವೇದಿಕೆ ನೋಡಿದ ‘ಮುಖ್ಯಮಂತ್ರಿ’, ಪ್ರದರ್ಶನಗಳ ಸಂಖ್ಯೆಯಲ್ಲೇ ಅಲ್ಲ, ಜನಪ್ರಿಯತೆಯಲ್ಲಿಯೂ ಹೊಸ ದಾಖಲೆ ನಿರ್ಮಿಸಿದೆ. ಎಷ್ಟು ಬಾರಿ ಪ್ರದರ್ಶನವಾದರೂ, ಈ ನಾಟಕದ ಪ್ರಭಾವಕ್ಕೆ ಹೌಸ್ಫುಲ್ ಶೋಗಳು ಎಂದಿಗೂ ಕಡಿಮೆಯಾಗಿಲ್ಲ.
ಪ್ರಸಿದ್ಧ ರಂಗ ನಿರ್ದೇಶಕ ಬಿ.ವಿ. ರಾಜಾರಾಂ ಅವರು ನಿರ್ದೇಶಿಸಿದ ‘ಮುಖ್ಯಮಂತ್ರಿ’ ನಾಟಕದ ರಚನೆ ಡಾ ಕೆ ವೈ ನಾರಾಯಣಸ್ವಾಮಿ ಇದರ ಕಥೆಯು ಗಂಭೀರ ರಾಜಕೀಯ ವಿಷಯವನ್ನು ಒಳಗೊಂಡಿದ್ದರೂ, ಮೊದಲ ಪ್ರದರ್ಶನದ ಬಳಿಕ ನಾಟಕವು ವಿಶಿಷ್ಟವಾದ ರಾಜಕೀಯ ವ್ಯಂಗ್ಯನಾಟಕವಾಗಿ ರೂಪುಗೊಂಡಿತು.
ನಾಟಕದಲ್ಲಿ ಮುಖ್ಯಮಂತ್ರಿ ಚಂದ್ರು ( ರಂಗಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು) ಅವರಿಗೆ ಗಂಭೀರ ಡೈಲಾಗ್ಗಳು ಮನಸಿಗೆ ಸಾಕಾಗುತ್ತಿಲ್ಲವೆಂದು ಕಂಡಾಗ, ಅವರು ಪಾತ್ರಕ್ಕೆ ಹಾಸ್ಯದ ಸೊಗಡನ್ನು ಸೇರಿಸಿದರು. ಈ ಬದಲಾವಣೆ ನಾಟಕಕ್ಕೆ ಹೊಸ ಜೀವ ತುಂಬಿದ್ದು, ನಂತರದಿಂದ ‘ಮುಖ್ಯಮಂತ್ರಿ’ ನಾಟಕವೇ ಚಂದ್ರಶೇಖರ್ ಎಂಬ ಕಲಾವಿದರನ್ನು ಡಾ. ಮುಖ್ಯಮಂತ್ರಿ ಚಂದ್ರು ಎನ್ನುವ ಮಟ್ಟಕ್ಕೆ ಜನಪ್ರಿಯರನ್ನಾಗಿಸಿದೆ.
ರಾಜಕೀಯ ವಾತಾವರಣ, ಸಮಾಜದ ಸ್ಥಿತಿ–ಗತಿ, ಜನರ ಅಭಿರುಚಿಗಳು ಬದಲಾಗುತ್ತಿದ್ದಂತೆ, ತಂಡವು ನಾಟಕದ ಸಂಭಾಷಣೆಗಳನ್ನು ಕಾಲೋಚಿತವಾಗಿ ಬದಲಾಯಿಸುತ್ತಾ ಬಂದಿದೆ. ಇದರಿಂದ ‘ಮುಖ್ಯಮಂತ್ರಿ’ ಎಂದಿಗೂ ಹಳೆಯದಾಗದ ನಾಟಕವಾಗಿ ಬೆಳೆದು ಬಂದಿದೆ ಎಂಬುದು ರಂಗಪ್ರೇಮಿಗಳ ಅಭಿಪ್ರಾಯ.
45 ವರ್ಷಗಳ ಕಾಲ ನಿರಂತರವಾಗಿ ಪ್ರದರ್ಶನಗೊಂಡ ಕರ್ನಾಟಕದ ಅತ್ಯಂತ ಜನಪ್ರಿಯ ರಾಜಕೀಯ ನಾಟಕಗಳಲ್ಲಿ ಒಂದು. ಇದುವರೆಗೆ 890 ಪ್ರದರ್ಶನಗಳು, ಇನ್ನೂ ಪ್ರೇಕ್ಷಕರಿಂದ ಸಮಾನ ಸಮರ್ಥನೆ. ರಾಜಕೀಯ, ಹಾಸ್ಯ, ವ್ಯಂಗ್ಯ ಮತ್ತು ಸಾಮಾಜಿಕ ಕಳಕಳಿಯ ಸಂಯೋಜನೆಯ ಮೂಲಕ ತಲೆಮಾರುಗಳನ್ನು ಕಟ್ಟಿ ಹಿಡಿದ ನಾಟಕ ಮುಖ್ಯಮಂತ್ರಿ. ಕಲಾಗಂಗೋತ್ರಿಯ ‘ಮುಖ್ಯಮಂತ್ರಿ’ ಕೇವಲ ನಾಟಕವಲ್ಲ. ರಂಗಭೂಮಿಯ ಕಾಲಯಾನ, ಜನರಾಜ್ಯದ ಪ್ರತಿಬಿಂಬ, ಮತ್ತು ಕನ್ನಡ ರಂಗಸಂಸ್ಕೃತಿಯ ಚಿರಸ್ಥಾಯಿ ಗುರುತು. ನವಂಬರ್ 23ರಂದು ನಡೆಯುವ ವಿಶೇಷ ಪ್ರದರ್ಶನ ಮತ್ತು ಕೃತಿ ಬಿಡುಗಡೆ ಸಮಾರಂಭ ರಂಗಪ್ರೇಮಿಗಳಿಗೆ ನಿಜಕ್ಕೂ ವಿಶಿಷ್ಟ ಅನುಭವವಾಗಲಿದೆ.
ಕಲಾಗಂಗೋತ್ರಿ ತನ್ನ 55ನೇ ವರ್ಷದ ರಂಗ ಸಂಭ್ರಮದ ಅಂಗವಾಗಿ ‘ಮುಖ್ಯಮಂತ್ರಿ’ ನಾಟಕದ ವಿಶೇಷ ಪ್ರದರ್ಶನ ಮತ್ತು ನಾಟಕದ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.
ದಿನಾಂಕ 23-11-2025, ಭಾನುವಾರ
ಸಮಯ: ಸಂಜೆ 5.30
ಸ್ಥಳ: ರವೀಂದ್ರ ಕಲಾಕ್ಷೇತ್ರ,
ಪ್ರವೇಶ: ಉಚಿತ (ಪಾಸ್ ಅಗತ್ಯ)
ಕಾರ್ಯಕ್ರಮದ ಮುಖ್ಯ ಅತಿಥಿಗಳು
ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು
ಶ್ರೀ ವೈ.ಎಸ್.ವಿ. ದತ್ತ, ಮಾಜಿ ಶಾಸಕ, ಕಡೂರು — ಕೃತಿಯ ಕುರಿತು ಮಾತನಾಡಲಿದ್ದಾರೆ
ಡಾ. ಎಲ್. ಹನುಮಂತಯ್ಯ, ಕವಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು — ಮುಖ್ಯ ಅತಿಥಿ
ಅಧ್ಯಕ್ಷತೆ: ಡಾ. ಜಿ. ರಾಮಕೃಷ್ಣ, ಸಂಸ್ಕೃತಿ ಚಿಂತಕರು
ಡಾ. ಕೆ.ವೈ. ನಾರಾಯಣಸ್ವಾಮಿ — ನಾಟಕಕಾರ
ಡಾ. ಬಿ.ವಿ. ರಾಜಾರಾಂ — ರಂಗ ನಿರ್ದೇಶಕರು
ಶ್ರೀ ಮಾವಲಿ ಶಿವಕುಮಾರ್ — ನಾಟಕಕಾರ ಮತ್ತು ಪ್ರಕಾಶಕ, ಶಿವಮೊಗ್ಗ
ಶ್ರೀನಿವಾಸ ಕೈವಾರ 99723 98931
ದುರ್ಗಾದಾಸ್ 99864 83097
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.