ಕೆಂಡಸಂಪಿಗೆಯಲ್ಲಿ ತಮ್ಮ ರಾಜೇಶ ಇನ್ನಿಲ್ಲ! ಶನಿ ಖ್ಯಾತಿಯ ಸುನೀಲ್ ಪಾತ್ರ ಮುಕ್ತಾಯವಾಗುತ್ತಾ?

By Suvarna NewsFirst Published Sep 20, 2022, 2:08 PM IST
Highlights

ಕಲರ್ಸ್ ಕನ್ನಡದಲ್ಲಿ ಕೆಲವು ದಿನಗಳ ಹಿಂದಷ್ಟೇ ಶುರುವಾದ ಸೀರಿಯಲ್ ಕೆಂಡ ಸಂಪಿಗೆ. ಇದು ಮೂಲತಃ ಅಕ್ಕ ತಮ್ಮನ ಕತೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ತಮ್ಮ ರಾಜೇಶ್ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟಿದ್ದಾನೆ. ಇದನ್ನು ವೈದ್ಯರೂ ದೃಢಪಡಿಸಿದ್ದಾರೆ. ಈ ತಮ್ಮ ರಾಜೇಶ್ ಪಾತ್ರ ಮಾಡುತ್ತಿದ್ದದ್ದು ಶನಿ ಸೀರಿಯಲ್ ಖ್ಯಾತಿಯ ಸುನೀಲ್ ಗೌಡ. ಹಾಗಿದ್ರೆ ಇನ್ಮೇಲೆ ಈತ ಈ ಸೀರಿಯಲ್‌ನಲ್ಲಿ ಇರೋದಿಲ್ವಾ?

ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್ ಕೆಂಡಸಂಪಿಗೆ. ಇದರ ನಾಯಕಿ ಸುಮನಾ. ತಾಯಿಯಿಲ್ಲದ ಮನೆಯ ಜವಾಬ್ದಾರಿಯನ್ನೆಲ್ಲ ಹೆಗಲ ಮೇಲೆ ಹೊತ್ತು ನಡೆಯುವ ಹೆಣ್ಣು. ಹೂವು ಕಟ್ಟಿ ಮಾಡಿ ಹೇಗೋ ತುಂಬು ಕುಟುಂಬ ಮುನ್ನಡೆಸುತ್ತಿದ್ದಾಳೆ. ತನ್ನ ಪ್ರೀತಿಯ ತಮ್ಮ ರಾಜೇಶ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಸಿಟ್ಟಲ್ಲಿ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಆದರೆ ತಮ್ಮನ ಪ್ರೀತಿ ಹಾಗೇ ಇರುತ್ತೆ. ಈ ನಡುವೆ ಮನೆಯಲ್ಲಿ ಕಷ್ಟದ ಮೇಲೆ ಕಷ್ಟ ಬಂದು ದುಡ್ಡು ಹೊಂದಿಸಲು ಸುಮಿ ಹೆಣಗಾಡುತ್ತಿದ್ದಾಳೆ. ಅಂಥಾ ಸಮಯದಲ್ಲೇ ತಮ್ಮ ರಾಜೇಶನ ಕೊನೆಯಾಗುತ್ತಿದೆ. ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿದರೆ 1 ಲಕ್ಷ ಸಿಗುತ್ತೆ ಅಂತ ಕೇಳಿ ರಾಜೇಶ ಈ ಥರ ನಾಟಕ ಮಾಡಲು ಹೊರಡುತ್ತಾನೆ. ಆದರೆ ಈತನ ಮೇಲೆ ಹಲ್ಲು ಮಸೆಯುತ್ತಿರುವ ಕಾಳಿಯಿಂದಾಗಿ ಇದೀಗ ರಾಜೇಶನ ಜೀವವೇ ಹೋಗಿದೆ. ಸುಮಿಯ ಪ್ರೀತಿಯ ತಮ್ಮ ರಾಜೇಶ ಇಹಲೋಕ ಯಾತ್ರೆ ಮುಗಿಸಿದ್ದಾನೆ. ಈಗ ಎದ್ದಿರುವ ಪ್ರಶ್ನೆ ಇಷ್ಟು ಬೇಗ ಈ ಪಾತ್ರವನ್ನು ಸಾಯಿಸಿದ ಉದ್ದೇಶ ಏನು, ಶನಿ ಖ್ಯಾತಿ ಸುನೀಲ್ ಈ ಸೀರಿಯಲ್‌ನಿಂದ ನಿರ್ಗಮಿಸಿದರಾ ಅನ್ನೋದು. ನಿಜಕ್ಕೂ ಇದರ ಹಿಂದಿನ ಗುಟ್ಟೇನು?

ಸುನೀಲ್ ಗೌಡ 'ಶನಿ' ಸೀರಿಯಲ್‌ನಿಂದ ಜನಪ್ರಿಯನಾದ ನಟ. 'ಶನಿ' ಸೀರಿಯಲ್‌ನಲ್ಲಿ ಶನಿಯ ಪಾತ್ರ ಮಾಡುವಾಗ ಇನ್ನೂ ಚಿಕ್ಕ ಹುಡುಗನಾಗಿದ್ದ ಇವರು ಇದೀಗ ಕೆಂಡಸಂಪಿಗೆಯಲ್ಲಿ ಹರೆಯದ ಯುವಕನಾಗಿದ್ದಾರೆ. ಇಲ್ಲಿ ಲೀಡ್(Lead) ಪಾತ್ರವನ್ನೇ ಮಾಡುತ್ತಿದ್ದಾರೆ. 'ಕೆಂಡ ಸಂಪಿಗೆ' ಮೂಲತಃ ಅಕ್ಕ ತಮ್ಮನ ಕಥೆ. ಇಂಥಾ ಕಥೆಯಲ್ಲಿ ಅಕ್ಕ, ತಮ್ಮ ಇಬ್ಬರ ಪಾತ್ರಕ್ಕೂ ಹೆಚ್ಚು ಕಮ್ಮಿ ಸಮಾನ ಪ್ರಾಮುಖ್ಯತೆ ಇದೆ. ಆದರೆ ತಮ್ಮನೇ ತೀರಿಹೋದರೆ ಈ ಸೀರಿಯಲ್ ಕತೆಯ ಗತಿಯೇನು? ಅನ್ನೋದು ಈ ಸೀರಿಯಲ್ ನೋಡುವವರ ಪ್ರಶ್ನೆ. ರಾಜೇಶ್ ಸಾವು ಕೇವಲ ಸುಮನಾಗೆ ಮಾತ್ರವಲ್ಲ, ಈ ಸೀರಿಯಲ್ ನೋಡುವವರಿಗೂ ಆಘಾತ ತಂದಿದೆ. ಅಟ್‌ಲೀಸ್ಟ್ ಸಾವು ಬದುಕಿನ ನಡುವೆ ಒದ್ದಾಡಿ ಬದುಕಿ ಉಳಿಯಬಹುದೇನೋ ಅಂತ ಜನ ಭಾವಿಸಿದ್ದರು. ಆದರೆ ಈಗ ವೈದ್ಯರೇ(Doctor) ಸಾವನ್ನು ದೃಢಪಡಿಸಿದ್ದಾರೆ. ತಮ್ಮನ ಹೆಣದ ಮುಂದೆ ಸುಮನಾ ರೋಧಿಸುತ್ತಿದ್ದಾಳೆ. ಆಗಾಗ ತಮ್ಮನೇ ಕರೆದ ಹಾಗೆ ಅವಳಿಗೆ ಭಾಸವಾಗುತ್ತಿದೆ. ತಮ್ಮ ಹೀಗೆ ಕೊನೆ ಉಸಿರು ಎಳೆದಿರೋದನ್ನು ಅವಳಿಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.
 

 

ವೀಕ್ಷಕರ ಮನ ಗೆದ್ದ 'ಹೊಂಗನಸು' ನಾಯಕಿ ರಕ್ಷಾ ಗೌಡ! ಈ ಸೀರಿಯಲ್ ಸಖತ್ ಪಾಪ್ಯುಲರ್

'ರಾಜೇಶ್ ಪಾತ್ರ ಮಾಡ್ತಿದ್ದ ಸುನೀಲ್ ಆಕ್ಟಿಂಗ್ (Acting)ಸೂಪರ್ ಆಗಿತ್ತು. ಈ ಪಾತ್ರವನ್ನು ಕೊನೇತನಕ ಉಳಿಸಿಕೊಳ್ಳಬೇಕಿತ್ತು' ಎಂದು ವೀಕ್ಷಕರು ಹೇಳ್ತಿದ್ದಾರೆ. ಕೆಲವರು ಎಮೋಶನಲ್(Emotional) ಆಗಿ 'ದಯಮಾಡಿ ರಾಜೇಶ್‌ನ ಬದುಕಿಸಿ. ಅವನಿರೋದಕ್ಕೆ ನಾವೆಲ್ಲ ಈ ಸೀರಿಯಲ್ ನೋಡ್ತಿದ್ದೇವೆ' ಎಂದು ಗೋಗರೆದಿದ್ದಾರೆ. ಕೆಲವರಂತೂ 'ರಾಜೇಶ್ ಇದ್ರೆ ಮಾತ್ರ ಈ ಸೀರಿಯಲ್ ನೋಡೋದು' ಅಂತಿದ್ದಾರೆ. ಒಟ್ಟಾರೆ ಕೊನೇವರೆಗೆ ಉಳೀಬೇಕಿದ್ದ ಪಾತ್ರ ಹೀಗೆ ಆರಂಭದಲ್ಲೇ ಕೊನೆಯಾಗ್ತಿರೋದು ಯಾರಿಗೂ ಇಷ್ಟ ಆಗ್ತಿಲ್ಲ. ಸೀರಿಯಲ್ ಟೀಮ್‌(Serial team) ಇದನ್ನು ಹೇಗೆ ಸ್ವೀಕರಿಸುತ್ತೋ ಗೊತ್ತಿಲ್ಲ. ಆತನ ಪುನರ್‌ ಜನ್ಮದ ಕತೆಯನ್ನೇನಾದರೂ ತರ್ತಾರಾ, ರಾಜೇಶ್ ಪಾತ್ರ ಮಾಡ್ತಿದ್ದ ಸುನೀಲ್ ಅವರೇ ಅನಿವಾರ್ಯ ಕಾರಣಕ್ಕೆ ಈ ಸೀರಿಯಲ್‌ಗೆ ಗುಡ್‌ ಬೈ ಹೇಳಿದ್ದಾರಾ, ಅವರ ಹಾಗೂ ಸೀರಿಯಲ್ ಟೀಮ್ ಮಧ್ಯೆ ಏನಾದರೂ ಜಗಳ ಬಂದಿದ್ಯಾ ಹೀಗೆ ಹತ್ತಾರು ಸಂದೇಹ ಜನರಿಗೆ ಬಂದಿದೆ.

ಗಟ್ಟಿಮೇಳ: ವೇದಾಂತ್ ಅಮ್ಮ ಇರೋ ಸಿಡಿ ಸಿಕ್ತು, ಆದ್ರೆ ಅಮ್ಮ ಸಿಕ್ತಾಳಾ?

ಏನೇ ಆದರೂ ಸದ್ಯಕ್ಕಂತೂ ಶನಿ ಖ್ಯಾತಿಯ ಸುನೀಲ್‌ ನಿರ್ಗಮನದ ಸೂಚನೆ ಕಾಣುತ್ತಿದೆ. ಮುಂದೇನಾಗಬಹುದು ಅನ್ನೋ ಕುತೂಹಲ(Curiosity)ವೂ ಹೆಚ್ಚಾಗ್ತಿದೆ. ಈ ಸೀರಿಯಲ್‌ನಲ್ಲಿ ಸುನೀಲ್ ಗೌಡ ಜೊತೆಗೆ ಅಕ್ಕ ಈ ಸೀರಿಯಲ್ ನಾಯಕಿ ಸುಮನಾ ಪಾತ್ರದಲ್ಲಿ ಅಮೃತಾ ರಾಮಮೂರ್ತಿ ಕಾಣಿಸಿಕೊಂಡಿದ್ದಾರೆ. ದೊಡ್ಡಣ್ಣ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

click me!