
ಬೆಂಗಳೂರು (ಏ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂದರೆ ಕೇವಲ ಒಂದು ತಂಡವಲ್ಲ, ಅದು ಕನ್ನಡಿಗರ ಎಮೋಷನ್. ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಒಂದು ಸಣ್ಣ ಝಲಕ್ ನೋಡಲು ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ, ಈ 'ಕಿಂಗ್ ಕೊಹ್ಲಿ'ಯನ್ನು ನೋಡುವ ಭಾಗ್ಯ ಕೇವಲ ಹಣವಂತರಿಗೆ ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಂತಹದೊಂದು ಕಟು ಸತ್ಯವನ್ನು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಹುಲಿ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಈಗ 'ವಿರಾಟ್ ಕೊಹ್ಲಿ ಅವರಿಗೆ ತಲುಪಲಿ' ಎಂಬ ಹ್ಯಾಶ್ಟ್ಯಾಗ್ನೊಂದಿಗೆ ವೈರಲ್ ಆಗುತ್ತಿದೆ.
ನಿನ್ನೆ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಅಭಿಮಾನಿಗಳ ನಡುವೆಯೇ ಕಾರ್ತಿಕ್ ಅವರು ಒಂದು ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. 'ವಿರಾಟ್ ಕೊಹ್ಲಿ ಅವರನ್ನು ಕಣ್ಣಾರೆ ನೋಡಬೇಕು ಎನ್ನುವುದು ಪ್ರತಿಯೊಬ್ಬ ಬಡ ಅಭಿಮಾನಿಯ ಕನಸು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನ ಪರಿಸ್ಥಿತಿ ನೋಡಿದರೆ ಬಡವರಿಗೆ ಅಲ್ಲಿ ಜಾಗವೇ ಇಲ್ಲದಂತಾಗಿದೆ. ಟಿಕೆಟ್ ಖರೀದಿಸಲು ಹೋದರೆ ದುಡ್ಡು ಮತ್ತು ಪವರ್ ಇರುವವರಿಗೆ ಮಾತ್ರ ಮೊದಲ ಆದ್ಯತೆ ಸಿಗುತ್ತಿದೆ. ಸಾಮಾನ್ಯ ಜನರಿಗೆ ಟಿಕೆಟ್ ಸಿಗುವುದು ಗಗನಕುಸುಮವಾಗಿದೆ' ಎಂದು ಕಾರ್ತಿಕ್ ಬೇಸರ ಹೊರಹಾಕಿದ್ದಾರೆ.
ಪಂದ್ಯ ನೋಡಲು ಬಂದ ಬಡ ಅಭಿಮಾನಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾರ್ತಿಕ್, 'ಕಷ್ಟಪಟ್ಟು ಟಿಕೆಟ್ ಪಡೆದು ಒಳಗೆ ಹೋದರೆ, ಅಲ್ಲಿ ಒಂದು ನೀರಿನ ಬಾಟಲ್ ಅಥವಾ ಚಿಪ್ಸ್ ಪ್ಯಾಕೆಟ್ ಬೇಕೆಂದರೂ ಹೊರಗಿನ ಬೆಲೆಗಿಂತ ಎರಡು ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿ ಅವರನ್ನು ನೋಡಲು ಬರುವ ಸಾಮಾನ್ಯ ಅಭಿಮಾನಿ ಇಷ್ಟೊಂದು ಹಣ ಎಲ್ಲಿಂದ ತರಬೇಕು? ಸ್ಟೇಡಿಯಂ ಒಳಗೆ ನಡೆಯುತ್ತಿರುವ ಈ ಬೆಲೆ ಏರಿಕೆಯ ದಗಾಕ್ಕೆ ಕೊನೆಯಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
'ವಿರಾಟ್ ಕೊಹ್ಲಿ ಅವರೇ, ನಿಮ್ಮ ಮೇಲೆ ನಮಗೆ ಅಪಾರ ಪ್ರೀತಿ ಇದೆ. ಆದರೆ ನಿಮ್ಮನ್ನು ನೋಡಲು ಬರುವ ನಿಮ್ಮ ಬಡ ಅಭಿಮಾನಿಗಳ ಪರಿಸ್ಥಿತಿ ಇಂದು ಶೋಚನೀಯವಾಗಿದೆ. ಈ ವ್ಯವಸ್ಥೆ ಬದಲಾಗಲಿ' ಎಂಬ ಕಾರ್ತಿಕ್ ಅವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಆರ್ ಸಿಬಿ ಅಭಿಮಾನಿಗಳು ಈ ವಿಡಿಯೋವನ್ನು ಕೊಹ್ಲಿ ಅವರಿಗೆ ಟ್ಯಾಗ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.