
ಗಟ್ಟಿಮೇಳ ಧಾರಾವಾಹಿ ಸೇರಿದಂತೆ ಅನೇಕ ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಕಮಲಶ್ರೀ ಅವರು ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಇದಕ್ಕೂ ಮುನ್ನ ಅವರು TB, ಬ್ರೇನ್ ಟ್ಯೂಮರ್ ವಿರುದ್ಧ ಕೂಡ ಹೋರಾಡಿದ್ದರು. ಕೆಲವು ತಿಂಗಳುಗಳ ಹಿಂದೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಅವರು “ತನಗೂ ಮದುವೆ ಆಗಿ, ಮಕ್ಕಳು ಇರಬೇಕಿತ್ತು” ಎಂದು ಬೇಸರ ಹಂಚಿಕೊಂಡಿದ್ದರು.
“ನನ್ನದು ಅಂಥ ಒಂದು ಸಂಸಾರ, ನನ್ನ ಗಂಡ ಸರಿಯಾಗಿ ಇದ್ದಿದ್ರೆ, ನನ್ನನ್ನ ನಂಬಿ ಬಂದಿದ್ದಾಳೆ ಇವಳು ನಾನು ಕೈ ಬಿಡಬಾರದು ಅಂತ ಅವರು ನನ್ನ ಜೊತೆಯಲ್ಲಿ ಇದ್ದಿದ್ರೆ ನನಗೂ, ಮಕ್ಕಳಾಗಿರುತ್ತಿದ್ದರು. ಮೊಮ್ಮಕ್ಕಳು, ಸೊಸೆ, ಅಳಿಯ-ಮಗಳು ಎಲ್ಲರೂ ಇರುತ್ತಿದ್ದರು. ನಾವು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ, ಕರ್ಮವೋ ಏನೋ ಈಗ ಅನುಭವಿಸುತ್ತಿದ್ದೇವೆ. ನಾನು ಹೋದ ಜನ್ಮದಲ್ಲಿ ಯಾರ ಸಂಸಾರ ಹಾಳು ಮಾಡಿದ್ನೋ, ಯಾವ ಸಂಸಾರ ಒಡೆದು, ಯಾವ ತಾಯಿ ಮಕ್ಕಳನ್ನು ದೂರ ಮಾಡಿದ್ನೋ ಏನೋ, ಈ ಜನ್ಮದಲ್ಲಿ ಸಂಸಾರ ಸುಖ ಸಿಗಲಿಲ್ಲ” ಎಂದು ಎಂದು ಕಮಲಶ್ರೀ ಹೇಳಿದ್ದಾರೆ.
“ನಾನು ನನ್ನ ತಾಯಿ, ಎರಡು ದೇಹ ಒಂದೇ ಆತ್ಮ ಎನ್ನುವ ಹಾಗೆ ಇದ್ದೆವು. ಅಮ್ಮ ಅಂದ್ರೆ ನನಗೆ ಅಷ್ಟು ಇಷ್ಟ. ನಿವೃತ್ತಿ ತಗೊಂಡು, ಮನೆಯಲ್ಲಿ ಕೂತ್ಕೊಂಡು ತಿನ್ನೋಣ ಅನ್ನೋದಕ್ಕೆ ನಮಗೆ ಯಾರು ದುಡ್ಡು ಕೊಡುವವರು ಇಲ್ಲ, ಮಾಡಿ ಹಾಕೋವರು ಇಲ್ಲ. ನನ್ನ ಅಕ್ಕನ ಮಗಳು ನನ್ನನ್ನು ನೋಡಿಕೊಳ್ತಾಳೆ” ಎಂದು ಕಮಲಶ್ರೀ ಹೇಳಿದ್ದಾರೆ.
“ಇಂದಿನ ಜನತೆಯಲ್ಲಿ ಕೆಲವರು ಮದುವೆ ಆಗೋಕೆ ಇಷ್ಟಪಡಲ್ಲ. ಮದುವೆ ಆದರೆ ನಮಗೆ ಮಕ್ಕಳು ಬೇಡ ಅಂತ ಹೇಳ್ತಾರೆ, ಅದು ತಪ್ಪು. ಚಿಕ್ಕ ಸಂಸಾರ ಚೊಕ್ಕ ಸಂಸಾರ ಅಂಥ ಒಂದೋ ಎರಡೋ ಮಗು ಮಾಡಿಕೊಳ್ಳಿ ಅಂತ ಸಲಹೆ ಕೊಡ್ತೀನಿ. ಓರ್ವ ವ್ಯಕ್ತಿ ಜೊತೆ ನನ್ನ ಮದುವೆಯಾಯ್ತು, ಆದಾದ ಮೇಲೆ ಅವನಿಗೆ ಮೊದಲೇ ಮದುವಾಗಿದೆ ಅಂತ ಗೊತ್ತಾಯ್ತು, ಮದುವೆಯಾಗಿ ಕೆಲವೇ ದಿನಗಳಿಗೆ ಅವನು ನನ್ನ ಬಿಟ್ಟು ಬೇರೆಯವರನ್ನು ಮದುವೆಯಾದ. ಅವಳು ನನ್ನ ಫ್ರೆಂಡ್ ಆಗಿದ್ದಳು. ನಾನು, ನನ್ನ ಫ್ರೆಂಡ್ ಭೇಟಿಯಾದಾಗ ನನ್ನ ಗಂಡ ಕೂಡ ಅಲ್ಲಿದ್ದನು, ನಾನು ಅವಳ ಗಂಡನಿಗೆ ಲೈನ್ ಹೊಡೆಯುತ್ತಿದ್ದೆ ಅಂತ ಅವಳು ಅಂದುಕೊಂಡಿದ್ದಳು. ಆದರೆ ಇದು ಸತ್ಯವಲ್ಲ” ಎಂದು ಕಮಲಶ್ರೀ ಹೇಳಿದ್ದಾರೆ.
ನನ್ನ ಗಂಡನಿಗೆ ಎಲ್ಲ ಚಟವಿತ್ತು. ನನಗೆ ವಯಸ್ಸು ಚಿಕ್ಕದ್ದು, ಎರಡನೇ ಮದುವೆ ಮಾಡೋಕೆ ಕೆಲವರು ಮುಂದೆ ಬಂದರೂ ಕೂಡ, ನನ್ನ ತಾಯಿ ಒಪ್ಪಲೇ ಇಲ್ಲ, ನಾನು ಕೂಡ ತಾಯಿ ಮಾತು ಮೀರಲಿಲ್ಲ ಎಂದು ಕಮಲಶ್ರೀ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.