ಕೊರೋನಾ ಹೊಡೆತಕ್ಕೆ ಕನ್ನಡ ಕಿರುತೆರೆ ಜಗತ್ತು ತತ್ತರಿಸಿದೆ. ಈಗಾಗಲೇ ಲಾಕ್ ಡೌನ್ ಪರಿಣಾಮ ಚಿತ್ರೀಕರಣ ರದ್ದಾಗಿ ಒಂದು ವಾರವೇ ಕಳೆದು ಹೋಗಿದೆ. ಇದರ ಪರಿಣಾಮವೀಗ ಕಿರುತೆರೆ ಜಗತ್ತಿಗೆ ಬ್ಯಾಂಕಿಂಗ್ ಎಪಿಸೋಡ್ ಕೊರತೆ ಎದುರಾಗಿದೆ. ಆ ಕಾರಣ ಏಪ್ರಿಲ್ 1ರಿಂದಲೇ ಕನ್ನಡದ ಬಹುತೇಕ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳ ಮರುಪ್ರಸಾರ ಶುರುವಾಗಲಿದೆ.
ಎಲ್ಲಾ ವಾಹಿನಿಗಳಿಗೂ ಈ ಸಮಸ್ಯೆ ಎದುರಿಸುತ್ತಿವೆ. ಸದ್ಯಕ್ಕೆ ಯಾವೆಲ್ಲ ಧಾರಾವಾಹಿಗಳು ಈಗ ಎಷ್ಟೆಲ್ಲಾ ಬ್ಯಾಂಕಿಂಗ್ ಎಪಿಸೋಡ್ ಹೊಂದಿವೆ. ಅವು ಎಲ್ಲಿ ತನಕ ಪ್ರಸಾರವಾಗಬಹುದು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಚಾನೆಲ್ ಗಳ ಮುಖ್ಯಸ್ಥರು ಅಥವಾ ಧಾರಾವಾಹಿ ನಿರ್ಮಾಪಕರೂ ಕೂಡ ಆ ಬಗ್ಗೆ ಈಗ ಬಾಯಿ ಬಿಡುತ್ತಿಲ್ಲ. ಆದರೆ ಏಪ್ರಿಲ್ ಮೊದಲ ವಾರದಿಂದ ಎಲ್ಲಾ ಧಾರಾವಾಹಿಗಳ ಮರುಪ್ರಸಾರ ಆರಂಭ ಖಚಿತವಾಗಿದೆ.
ಕಲರ್ಸ್ ಕನ್ನಡ, ಜೀ ಕನ್ನಡ , ಸ್ಟಾರ್ ಸುವರ್ಣ ಹಾಗೂ ಉದಯ ಸೇರಿದಂತೆ ಕನ್ನಡದ ಎಲ್ಲಾ ವಾಹಿನಿಗಳಲ್ಲೂ ಮುಂದಿನ ವಾರದಿಂದಲೇ ಧಾರಾವಾಹಿಗಳ ಮರು ಪ್ರಸಾರ ಅನಿವಾರ್ಯ ಎನ್ನುವ ಮಾತನ್ನು ಅಲ್ಲಿನ ಸಿಬ್ಬಂದಿಗಳೇ ಹೇಳುತ್ತಾರೆ.
'ನಮ್ಮನೆ ಯುವರಾಣಿ' ಮೀರಾಳ ಎಂದೂ ನೋಡಿರದ ಪೋಟೋಗಳಿವು!
ಈ ಮಧ್ಯೆ ಕನ್ನಡದ ಬಹುಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಏಪ್ರಿಲ್ 1ಕ್ಕೆ ಕೊನೆಯ ಎಪಿಸೋಡ್ ಪ್ರಸಾರವಾಗಲಿದೆ ಎನ್ನುವ ಸುದ್ದಿ ಸೋಷಲ್ ಮೀಡಿಯಾದಲ್ಲಿ ಹರಿದಾಡಿದ್ದು, ಇದನ್ನು ಜೀ ಕನ್ನಡ ವಾಹಿನಿ ಸಾರಾಸಗಟಾಗಿ ತಳ್ಳಿ ಹಾಕಿದೆ.
ನಮಗೀಗ ಇನ್ನೆರಡು ವಾರಕ್ಕೆ ಆಗುವಷ್ಟು ಎಪಿಸೋಡ್ ಬ್ಯಾಂಕಿಂಗ್ ಇದೆ. ಆದರೆ ಕೊರೋನಾ ಪರಿಸ್ಥಿತಿ ಹೀಗೆ ಮುಂದುವರೆದರೆ ಧಾರಾವಾಹಿಗಳ ಮರು ಪ್ರಸಾರ ಅನಿವಾರ್ಯ ಆಗುತ್ತದೆ. ಇದು ಯಾವಾಗ ಶುರುವಾಗಬಹುದು ಎನ್ನುವುದನ್ನುನಿರ್ದಿಷ್ಟವಾಗಿ ಹೇಳುವುದು ಕಷ್ಟ. - ಶ್ರುತಿ ನಾಯ್ಡ, ನಿರ್ಮಾಪಕಿ
'ಟಿಆರ್ ಪಿ ಪೈಪೋಟಿಗೆ ಕೆಲವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಗೆಲ್ಲ ಧಾರಾವಾಹಿ ನಿಲ್ಲುವ ಚಾನ್ಸೇ ಇಲ್ಲ. ಸದ್ಯ ಚಿತ್ರೀಕರಣ ನಡೆಯದ ಕಾರಣ ಬ್ಯಾಂಕಿಂಗ್ ಎಪಿಸೋಡ್ ಸಮಸ್ಯೆ ಆಗಬಹುದು. ಇದು ನಮ್ಮ ಸಮಸ್ಯೆಯಷ್ಟೇ ಅಲ್ಲ. ಚಿತ್ರೀಕರಣ ಸ್ಟಾಪ್ ಆಗಿರುವ ಕಾರಣ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನ ಭಾಷೆಯ ಮನರಂಜನಾ ವಾಹಿನಿಗಳಿಗೆ ಎದುರಾದ ಸಮಸ್ಯೆ ಇದು. ಕೆಲವರು ಇದನ್ನುಲಾಭ ಪಡೆದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ' ಎನ್ನುತ್ತಾರೆ ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.
'ನನ್ನರಸಿ ರಾಧೆ'ಯ ಮಾತಿನ ಮಲ್ಲಿ ಅಸಲಿ ಮುಖವಿದು
ಸದ್ಯದ ಬಿಕ್ಕಟ್ಟಿನ ಕುರಿತು ಜೀ ಕನ್ನಡ ಇಷ್ಟರಲ್ಲೇ ಸಭೆ ಕರೆದು ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಲಿದೆ. ಸದ್ಯಕ್ಕೆ ನಮ್ಮೆಲ್ಲ ಧಾರಾವಾಹಿಗಳ ಪ್ರಸಾರಕ್ಕೆ ಇನ್ನೊಂದು ವಾರ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಂಗ್ ಎಪಿಸೋಡ್ ಇವೆ ಅಂತಲೂ ಅವರು ಸ್ಪಷ್ಟಪಡಿಸುತ್ತಾರೆ.