
ಗಾಯಕ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಆಗಿದ್ದಾರೆ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್ ಬಾಕ್ಸ್ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್ ಆಗಿ ರೀಲ್ಸ್ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್ ನೋಡುತ್ತಾರೆ ಎನ್ನುವುದು. ಹಾಟ್ ಆದಷ್ಟೂ ವ್ಯೂಸ್ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.
ಆ ಮಾತು ಬದಿಗಿರಲಿ. ಇದೀಗ ನಿವೇದಿತಾರ ಹೊಸ ರೀಲ್ಸ್ಗೆ ಬೈಯಬೇಕೊ, ಹೊಗಳಬೇಕೋ ಗೊತ್ತಾಗದೇ ನೆಟ್ಟಿಗರು ಸುಸ್ತಾಗಿ ಹೋಗಿದ್ದಾರೆ. ಏಕೆಂದರೆ, ನಿವೇದಿತಾ ಬಹುಶಃ ಇದೇ ಮೊದಲ ಬಾರಿಗೆ ಸೀರೆಯುಟ್ಟು ರೀಲ್ಸ್ ಮಾಡಿದ್ದಾರೆ. ಅದೂ ಕನ್ನಡದ ಹಾಡನ್ನು ಹೇಳಿದ್ದಾರೆ. ಪೂರ್ತಿಯಾಗಿ ಹಾಡು ಕೇಳಿದ ಮೇಲೆ ಅದು ಕನ್ನಡ ಎಂದು ಗೊತ್ತಾಯ್ತು ಎಂದು ಹಲವರು ಕಮೆಂಟ್ನಲ್ಲಿ ಹೇಳುತ್ತಿದ್ದರೂ, ಸೀರೆಯುಟ್ಟ ನಿವೇದಿತಾರನ್ನು ನೋಡಿ ಬಹಳಷ್ಟು ಮಂದಿ ಶಾಕ್ ಆಗಿದ್ದಾರೆ. ನಿಜಕ್ಕೂ ಇದು ನಮ್ಮ ನಿವ್ವಿನಾ ಎಂದು ಕೇಳ್ತಿದ್ದಾರೆ. ಮಾತ್ರವಲ್ಲದೇ ನಿವೇದಿತಾರ ಈ ಹೊಸ ವೇಷ ನೋಡಿ ಮುಂದಿನ 24 ಗಂಟೆಗಳಲ್ಲಿ ಸುನಾಮಿಯ ಎಚ್ಚರಿಕೆಯನ್ನೂ ನೆಟ್ಟಿಗರು ನೀಡುತ್ತಿದ್ದಾರೆ!
ಅಷ್ಟಕ್ಕೂ ನಿವೇದಿತಾಗೆ ಕನ್ನಡ ಬರುವುದಿಲ್ಲ ಎಂದೇ ಹಲವರು ಹೇಳುತ್ತಾರೆ. ಅದಕ್ಕಾಗಿ ಕನ್ನಡದಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಮಾಡಿದರೆ ಆಕೆಗೆ ಅದು ಅರ್ಥವಾಗುವುದಿಲ್ಲ ಎಂದೂ ಹೇಳುವುದು ಉಂಟು. ಆದರೆ, ತಮಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಈ ವಿಡಿಯೋ ಮೂಲಕ ತೋರಿಸಿರುವ ನಟಿ, ಸೀರೆಯುಟ್ಟರೆ ಎಷ್ಟು ಮುದ್ದಾಗಿ ಕಾಣಿಸುತ್ತೇನೆ ಎನ್ನುವುದನ್ನೂ ತೋರಿಸಿದ್ದಾರೆ. ಆದರೆ ಇವೆರಡೂ ನೆಟ್ಟಿಗರಿಗೆ ಯಾಕೋ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನಿನ್ನೆ-ಮೊನ್ನೆಯವರೆಗೆ ಬಾತ್ ರೂಮ್, ಬೆಡ್ ರೂಮ್ ಅಂತೆಲ್ಲಾ ಹಾಟ್ ಫೋಟೋಶೂಟ್ ಮಾಡಿಸಿಕೊಂಡಾಕೆ ಏಕಾಏಕಿ ಸೀರೆಯುಟ್ಟಿದ್ದೂ ಅಲ್ಲದೇ ಕನ್ನಡದಲ್ಲಿ ಹಾಡಿದ್ದು ಕೇಳಿ ಏನೋ ಭಾರಿ ಅನಾಹುತ ಸಂಭವಿಸಲಿದೆ ಎಂದೇ ಕಮೆಂಟ್ನಲ್ಲಿ ಹೇಳುತ್ತಿದ್ದಾರೆ.
ನಿವೇದಿತಾ ಗೌಡ, ಈಗ ಎಲ್ಲಾ ಹಂತವನ್ನೂ ಮೀರಿ ಹೋಗಿದ್ದಾರೆ ಎಂದು ಇಲ್ಲಿಯವರೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗೊಂಬೆಯಂತೆ ಮುದ್ದುಮುದ್ದಾಗಿ, ಡಿಸೆಂಟ್ ಆಗಿದ್ದ ನಿವ್ವಿ ಇದ್ಯಾಕೆ ಬಿಕಿನಿ ಮಟ್ಟಿಗೆ ಇಳಿದಳು ಎಂದು ಕೇಳುವವರೇ ಎಲ್ಲಾ. ಕೆಲ ದಿನಗಳಿಂದ ಬಿಕಿನಿಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಳ್ತಿರೋ ನಿವೇದಿತಾ, ಇದೀಗ ಮಂಚದ ಮೇಲೇರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ! ಇದನ್ನು ನೋಡಿದ ನೆಟ್ಟಿಗರು, ಫೋಟೋಶೂಟ್ ಮಾಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಹೋದಲ್ಲಿ, ಬಂದಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳಲು ಯಾವ ಫೋಟೋಗ್ರಾಫರ್ ಅನ್ನು ಅಪಾಯಿಂಟ್ ಮಾಡಿಕೊಂಡಿದ್ದಿ ಎಂದು ಕೇಳ್ತಿರೋ ನೆಟ್ಟಿಗರು, ಮಂಚದ ಫೋಟೋಶೂಟ್ ಸಮಯದಲ್ಲಿ ಮುಂದೆ ಇರೋದು ಯಾರು ಎಂದೆಲ್ಲಾ ಪ್ರಶ್ನಿಸಿದ್ದರು. ಆದರೆ ಈಗ ಶಾಕ್ ಆಗಿದೆ. ನಾಳೆ ಮತ್ತೆ ಇನ್ನೇನೋ ಎನ್ನುವ ಚಿಂತೆಯೂ ಕಾಡುತ್ತಿದೆ ಅಭಿಮಾನಿಗಳಿಗೆ!
ಶ್ರೀಲಂಕಾದ ಪಬ್ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.