
ಬಿಗ್ಬಾಸ್ ಕನ್ನಡ 11ನೇ ಸೀಸನ್ 12ವಾರಕ್ಕೆ ಕಾಲಿಟ್ಟಿದೆ. ವಾರದ ಮೊದಲ ಟಾಸ್ಕ್ ನಲ್ಲಿ ಸೋತ ರಜತ್ ತಂಡದಿಂದ ಐಶ್ವರ್ಯಾ ಅವರನ್ನು ತ್ರಿವಿಕ್ರಮ್ ಟೀಂ (ಕರುನಾಡ ಕಿಲಾಡಿಗಳು) ನಾಮಿನೇಟ್ ಮಾಡಿದೆ. ಎರಡನೇ ಟಾಸ್ಕ್ ನಲ್ಲಿ ಕೂಡ ರಜತ್ ತಂಡ (ಕರ್ನಾಟಕ ಖದರ್) ಸೋತು ರಜತ್ ಅವರನ್ನೇ ನಾಮಿನೇಟ್ ಮಾಡಲಾಯ್ತು. ಮೂರನೇ ಟಾಸ್ಕ್ ನಲ್ಲೂ ರಜತ್ ಟೀಂ ಸೋಲು ಕಂಡು ಮೋಕ್ಷಿತಾ ಅವರನ್ನು ನಾಮಿನೇಟ್ ಮಾಡಲಾಯ್ತು.
79ನೇ ದಿನ ಟಾಸ್ಕ್ ವಿಚಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ನಡುವೆ ಭಾರೀ ಗಲಾಟೆ ನಡೆಯಿತು. ತ್ರಿವಿಕ್ರಮ್ ತಂಡದಿಂದ ರಜತ್ ತಂಡವನ್ನು ಉಸ್ತುವಾರಿ ಮಾಡಲು ಚೈತ್ರಾ ಕುಂದಾಪುರ ಬಂದರೆ ತ್ರಿವಿಕ್ರಮ್ ತಂಡವನ್ನು ರಜತ್ ತಂಡದ ಐಶ್ವರ್ಯ ಅವರು ಉಸ್ತುವಾರಿ ಮಾಡಿದ್ದರು.
ಆದ್ರೆ ಚೈತ್ರಾ ಕುಂದಾಪುರ ಬಿಗ್ ಬಾಸ್ ನೀಡಿದ ನಿಯಮಗಳ ಜೊತೆಗೆ ತಮ್ಮದೇ ಹೊಸ ನಿಯಮಗಳನ್ನು ಕೂಡ ಸೇರಿಸಿ ಅತ್ಯಂತ ಹೀನ ಮಟ್ಟದಲ್ಲಿ ಉಸ್ತುವಾರಿ ಮಾಡಿದ್ದು, ಕರ್ನಾಟಕ ಖದರ್ ತಂಡ ಸೋಲಿಗೆ ಕಾರಣವಾಯ್ತು. ಟಾಸ್ಕ್ ಆಡುವಾಗ ಮಾತನಾಡಿದ್ದಕ್ಕೆ, ಚಿಕ್ಕ ಚಿಕ್ಕ ವಿಚಾರವನ್ನು ಹಿಡಿದುಕೊಂಡು ಎಲ್ಲದಕ್ಕೂ ಚೈತ್ರಾ ಫೌಲ್ ಕೊಟ್ಟಿದ್ದು. ಮಾತ್ರವಲ್ಲ 20 ಸೆಕೆಂಡುಗಳ ಲೆಕ್ಕವನ್ನು ಕೂಡ ಬಹಳ ನಿಧಾನವಾಗಿಲೆಕ್ಕ ಹಾಕಿ ಗೆಲ್ಲಬಹುದಾಗಿದ್ದ ತಂಡವನ್ನು ಸೋಲುವಂತೆ ಮಾಡಿ ತಮ್ಮ ತಂಡವನ್ನು ಮೋಸದಿಂದ ಗೆಲ್ಲಿಸಿದರು.
ಇದನ್ನು ರಜತ್ ತೀವ್ರವಾಗಿ ಖಂಡಿಸಿದರು. ಇದು ರಜತ್ ಮತ್ತು ಚೈತ್ರಾ ನಡುವೆ ಜಗಳಕ್ಕೆ ಕಾರಣವಾಯ್ತು. ಗೇಮ್ ನಿಲ್ಲಿಸಿ ಬಿಡೋಣ ಎಂದು ರಜತ್ ತಂಡಕ್ಕೆ ಹೇಳಿದರು. ನೂಕಾಟ ತಳ್ಳಾಟ ಕೂಡ ನಡೆಯಿತು. ಇಬ್ಬರು ಕೂಡ ಏಕವಚನದಲ್ಲಿ ಮನಬಂದಂತೆ ಬೈದುಕೊಂಡರು. ಕೊನೆಗೆ ಭವ್ಯಾ ಗೌಡ ಚೈತ್ರಾಳ ಬಾಯಿಗೆ ಕೈ ಹಿಡಿದು ಮಾತನಾಡದಂತೆ ಗಟ್ಟಿಯಾಗಿ ಹಿಡಿದುಕೊಂಡರು. ರಜತ್ ರನ್ನು ಮನೆಯೊಳಗೆ ಕರೆದುಕೊಂಡು ಹೋಗಲಾಯ್ತು.
ಇದಾದ ನಂತರ ಮಂಜು ಮತ್ತು ರಜತ್ ನಡುವೆ ಗಲಾಟೆ ಆರಂಭವಾಯ್ತು. ಮಾತಿನ ಚಕಮಕಿಯನ್ನು ನಿಲ್ಲಿಸಲು ಮನೆಯವರು ಪ್ರಯತ್ನಿಸಿದರು. ಟಿವಿನಲ್ಲಿ ಗೇಮ್ ನೋಡಿಕೊಂಡು ಬಂದವರದ್ದೆಲ್ಲ ಇದೇ ಕಥೆ. ಒಂದು ಬಾಲ್ ಹಾಕೋಕೆ ಆಗಿಲ್ಲ ಚಿಕ್ಕ ಹುಡುಗನನ್ನು ಕಳಿಸಿ ಬಾರೋ ಅಂದಿದ್ದೆ ಎಂದು ಮಂಜು ಟಾಂಗ್ ಕೊಟ್ಟರು. ಇದು ರಜತ್ನನ್ನು ಕೆರಳಿಸಿತು. ಚಿಕ್ಕ ಹುಡುಗ ಬಂದಿದ್ದಕ್ಕೆ ಮುಕ್ಕಾಲು ಗಂಟೆ ನಿನ್ನ ಮೇಲಿದ್ದರೂ ನೀನು ಉಳಿದೆ. ನಾನು ಬಂದಿದ್ದರೆ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು ಎಂದರು. ನಾವಿಲ್ಲಿಂದ ಟಾಟಾ ಮಂಜಣ್ಣ ಅನ್ನಬೇಕಿತ್ತು ಕುಳಿತುಕೊಂಡು ಅಂತ ರಜತ್ ಹೇಳಿದ್ದು ಮತ್ತೆ ಮಂಜುನ ಕೆರಳಿಸಿತು.
ಚಿಕ್ಕ ಹುಡುಗ ಅನ್ನಲಿಲ್ಲ ಧನು ಅಂದಿದ್ದು ಎಂದು ಅಲ್ಲೇ ನಾಲಿಗೆ ತಿರುಚಿ ಮಂಜು ಮಾತನಾಡಿದರು. ಇಬ್ಬರ ನಡುವೆ ಮತ್ತೆ ಚಿಕ್ಕಹುಡುಗ ಮತ್ತು ಪ್ರಾಣಪಕ್ಷಿ ಎಂಬ ವಿಚಾರದಲ್ಲಿ ಗಲಾಟೆ ಆರಂಭವಾಯ್ತು. ಪ್ರಾಣಪಕ್ಷಿ ಅಂತಿಯಾ ನೀನು ಜುಟ್ಟು ಅಂತೆಲ್ಲ ಮಂಜು ಬೊಬ್ಬೆ ಹೊಡೆಯಲು ಆರಂಭಿಸಿ ಇವನು ಆಟ ಆಡಲು ಬಂದವ್ನೋ ಬೇರೆಯವರ ಜೀವ ಹಿಂಡಲು ಬಂದವ್ನೋ ಬೇವರ್ಸಿ ಇವನು ಎಂದು ಕೆಟ್ಟ ಪದ ಉಪಯೋಗಿಸಿದ್ದಾರೆ.
ಚೈತ್ರಾ ಅವರ ಉಸ್ತುವಾರಿ ಬಗ್ಗೆ ಹನುಮಂತು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಆಟ ಆಡಿದ್ರೆ ಆಟನೇ ಅಲ್ಲ. ಸೋಲು ಗೆಲುವು ಇದ್ದೇ ಇರುತ್ತೆ. ಆದ್ರೆ ಈ ನಮೂನೆ ಹೊಲಸು ಮಾಡಿಕೊಂಡು ಆಡಿದ್ರೆ ಆಟನೇ ಅಲ್ಲ ಎಂದರು. ಚೈತ್ರಾ ಮೈಮೇಲೆನೇ ಬರ್ತಿದ್ದಳು. ಅವಳು ಹೆಣ್ಣು ಮಗಳಿದ್ದಾಳೆ. ಎಂದು ರಜತ್ ಮತ್ತು ಚೈತ್ರಾ ಗಲಾಟೆಯ ಬಗ್ಗೆ ಕೂಡ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಧನ್ರಾಜ್ ಕೂಡ ಚಿಕ್ಕವನೆಂದು ಹೇಳಿದ್ದಕ್ಕೆ ತಮ್ಮ ಬೇಸರ ವ್ಯಕ್ತಪಡಿಸಿದರು. ನಾನು ನೋಡ್ಲಿಕ್ಕೆ ಮಾತ್ರ ಚಿಕ್ಕವ ನನಗೆ ಮದುವೆಯಾಗಿದೆ. ಮಗುವಾಗಿದೆ ಎಂದರು.
ನಾಮಿನೇಷನ್ ಪ್ರಕ್ರಿಯೆ ಬಳಿಕ ಧನ್ರಾಜ್ ಮತ್ತು ಹನುಮಂತ ಬಳಿ ಮಾತನಾಡಿದ ಉಗ್ರಂ ಮಂಜು, ನಾನು ಯಾವತ್ತಾದ್ರೂ ನಿನ್ನನ್ನ ಚಿಕ್ಕ ಹುಡುಗ ಅಂದಿದ್ದೀನಾ? ಇವತ್ತೇನಾದ್ರೂ ಚಿಕ್ಕ ಹುಡುಗ ಅಂದ್ನಾ ಅಂದಾಗ ಹೌದು ಹೇಳಿದ್ದೀರಿ ಎಂದು ಧನು ಮತ್ತು ಹನುಮಂತ ಇಬ್ಬರೂ ಹೇಳಿದ್ರು. ಕೂಡಲೇ ಮಾತು ಬದಲಿಸಿದ ಮಂಜು, ನಾನು ಹೇಳಿದ್ದು ಧನ್ರಾಜ್ ಅಂದ್ರೆ ನಮ್ಮ ವಯಸ್ಸಿಗೆ ಅನುಗುಣವಾಗಿ ಎಂದು ಸಬೂಬು ನೀಡಿದರು.
ಇನ್ನು ರಜತ್ ಅವರು ಚೈತ್ರಾ ಅವರನ್ನು ತಳ್ಳಿದ್ದಕ್ಕೆ ನಾನು ಅಗ್ರೆಷನ್ ನಲ್ಲಿ ಹಾಗೆ ಮಾಡಿದ್ದಲ್ಲ. ಬೇಕೆಂದು ನಾನು ಮಾಡಿಲ್ಲ. ಅದು ಕೋಪದಲ್ಲಿ ಹಾಗೆ ಆಯ್ತು. ಕ್ಷಮೆ ಇರಲಿ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.