ತುಳಸಿ ಗರ್ಭಿಣಿಯಾದ ಬೆನ್ನಲ್ಲೇ ಭೂಮಿಕಾಗೆ ಮಗುವಿನ ಹಂಬಲ- ಡಾಕ್ಟರ್​ ಬಳಿ ಚೆಕಪ್​ಗೆ ಹೋಗಲು ಪಟ್ಟು!

By Suchethana DFirst Published Sep 22, 2024, 5:22 PM IST
Highlights

ಅತ್ತ ತುಳಸಿ ಅಜ್ಜಿಯಾಗುವ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಳೆ.  ಆದರೆ ಇನ್ನೂ ಗರ್ಭ ಧರಿಸಿಲ್ಲ ಎಂಬ ಕೊರಗು ಭೂಮಿಕಾಳದ್ದು. ಡಾಕ್ಟರ್​ ಬಳಿ ಚೆಕಪ್​ಗೆ ಹೋಗಲು ದುಂಬಾಲು ಬಿದ್ದಿದ್ದಾಳೆ. ಏನಿದು ವಿಷಯ?
 

ಅತ್ತ ತುಳಸಿ ಗರ್ಭಿಣಿಯಾಗಿದ್ದಾರೆ. ಮೊಮ್ಮಕ್ಕಳನ್ನು ನೋಡುವ ಕಾಲದಲ್ಲಿ ಮಗು ಆಗುತ್ತಿರುವುದಕ್ಕೆ ನೆಟ್ಟಿಗರಿಂದ ಇನ್ನಿಲ್ಲದಂತೆ ಟೀಕೆ ಅನುಭವಿಸುತ್ತಿದ್ದಾಳೆ ತುಳಸಿ. ಒಂದು ಉತ್ತಮ ಸೀರಿಯಲ್​ ಅನ್ನು ಹೀಗೆ ಹಾಳು ಮಾಡಬೇಡಿ ಎಂದು ನಿರ್ದೇಶಕರಿಗೆ ಫ್ಯಾನ್ಸ್​ ದಮ್ಮಯ್ಯ ಎನ್ನುತ್ತಿದ್ದಾರೆ.   ಇಂಥ ವಯಸ್ಸಿನಲ್ಲಿಯೂ ಗರ್ಭ ಧರಿಸಿದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಸೀರಿಯಲ್​ನಲ್ಲಿ ತೋರಿಸುತ್ತಿದ್ದಾರೆ, ಅದಕ್ಕೆ ಇಂಥ ಕಮೆಂಟ್ಸ್​ ಹಾಕಬೇಡಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಆದರೆ, ಗರ್ಭ ಧರಿಸಿರುವುದು ಯಾವ ಪರಿಯಲ್ಲಿ ಟ್ರೋಲ್​ ಆಯಿತು ಎಂದರೆ ವಾಹಿನಿ ಒಂದು ಹಂತದಲ್ಲಿ ಕಮೆಂಟ್​ ಸೆಕ್ಷನ್​ ಅನ್ನೇ ಆಫ್​ ಮಾಡಬೇಕಾದ ಸ್ಥಿತಿಯನ್ನೂ ತಲುಪಿತ್ತು. ಇದೀಗ ತುಳಸಿ ಮಾಧವ್​ಗೆ ವಿಷಯ ತಿಳಿಸಿದ್ದಾಳೆ. ಆರಂಭದಲ್ಲಿ ಮಾಧವ್​ಗೆ ತುಳಸಿ ಏನು ಹೇಳುತ್ತಿದ್ದಾಳೆ ಎನ್ನುವುದು ತಿಳಿಯದೇ ಹೋದರೂ, ಈಗ ವಿಷಯ ತಿಳಿದು ಖುಷಿ ಪಟ್ಟಿದ್ದಾನೆ. ಅತ್ತ ಸಮರ್ಥ್​ ಕೂಡ ತನ್ನ ಬೆಂಬಲಕ್ಕೆ ನಿಂತಿದ್ದಾನೆ ಎಂದು ತುಳಸಿ ತಪ್ಪಾಗಿ ತಿಳಿದುಕೊಂಡುಬಿಟ್ಟಿದ್ದಾಳೆ.

ಇದು ಶ್ರೀರಸ್ತು ಶುಭಮಸ್ತು ಸೀರಿಯಲ್​ ತುಳಸಿಯ ವಿಷಯವಾದರೆ, ಇತ್ತ ಅಮೃತಧಾರೆ ಸೀರಿಯಲ್​ನಲ್ಲಿ ಬೇರೆಯದ್ದೇ ಆಗಿದೆ. ಮಲ್ಲಿಗೆ ಸೀಮಂತ ಮಾಡುವ ಸಮಯದಲ್ಲಿ ಬಂದ ಹೆಂಗಸರು ಭೂಮಿಕಾಗೆ ಇನ್ನೂ ಮಕ್ಕಳಾಗಲಿಲ್ಲ ಎಂದು ಹಂಗಿಸಿದ್ದಾರೆ.   ಬಂದಿರುವ ಹೆಂಗಸರು ಸುಮ್ಮನೇ ಇರಲಾರದೇ ಮಲ್ಲಿಯ ಸೀಮಂತನಾ? ನಾನೇನೋ ನಿನ್ನದೇ ಅಂದುಕೊಂಡೆ. ನಿನಗೆ ಮಕ್ಕಳಾಗಲಿಲ್ವಾ? ಮಗು ಯಾವಾಗ ಆಗೋದು ಅಂತೆಲ್ಲಾ ಕೇಳಿದ್ದಾರೆ. ಇದನ್ನು ಕೇಳಿ ಭೂಮಿಕಾಗೆ ವಿಪರೀತ ನೋವಾಗಿದೆ. ಕಣ್ಣೀರು ಹಾಕಿದ್ದಾಳೆ. ಇದು ಗೌತಮ್​ಗೆ ಗೊತ್ತಾಗುತ್ತಿದ್ದಂತೆಯೇ ಉರಿದು ಹೋಗಿದ್ದಾನೆ. ನಖಶಿಖಾಂತ ಉರಿ ಹತ್ತಿದೆ ಅವನಿಗೆ. ಮುದ್ದಿನ ಪತ್ನಿಗೆ ಯಾರಾದರೂ ಅವಮಾನ ಮಾಡಿದ್ರೆ ಸುಮ್ನೆ ಬಿಡ್ತಾನಾ ಈ ಡುಮ್ಮಾ ಸರ್​. ಅವಕಾಶಕ್ಕಾಗಿ ಕಾಯ್ತಿದ್ದ. 

Latest Videos

ಮಲ್ಲಿಗೆ ಸೀಮಂತ ಮಾಡುವ ಸಮಯದಲ್ಲಿ ಆಕೆಗೆ ಮುತ್ತೈದೆಯರೆಲ್ಲರೂ ಬಂದು ಪೂಜೆ ಮಾಡುವಂತೆ ಶಕುಂತಲಾ ಹೇಳುತ್ತಾಳೆ. ಮನೆಗೆ ಬಂದ ಅದೇ ಮಹಿಳೆಯರನ್ನು ಆಕೆ ಕರೆಯುತ್ತಾಳೆ. ಆದರೆ ಗೌತಮ್​ ಅವರನ್ನು ಅಲ್ಲಿಯೇ ತಡೆದು ಮನೆಯ ಕೆಲಸದವರನ್ನು ಕರೆದು ಪೂಜೆ ಮಾಡುವಂತೆ ಹೇಳುತ್ತಾರೆ. ಇದನ್ನು ಕೇಳಿ ಶಕುಂತಲಾಗೆ ಶಾಕ್​ ಆಗುತ್ತದೆ. ಮನೆ ಕೆಲಸದವರಿಂದ ಪೂಜೆ ಮಾಡಿಸುವುದಾ ಕೇಳುತ್ತಾಳೆ. ಅದಕ್ಕೆ ಗೌತಮ್​ ಅವರಿಗೆ ಒಳ್ಳೆಯ ಮನಸ್ಸು ಇದೆ ಎನ್ನುತ್ತಾನೆ. ಆಗ ಶಕುಂತಲಾ ಏನಿದರ ಅರ್ಥ ಎಂದು ಪ್ರಶ್ನಿಸುತ್ತಾಳೆ. ಏನಂದ್ರಿ ನೀವು? ಭೂಮಿಕಾಗೆ ಮಗು ಆಗಿಲ್ಲ ಅಂತನಾ? ಮಗುಯಾವಾಗ ಬೇಕು ಬೇಡ ಎಂದು ನಿರ್ಧಾರ ಮಾಡುವವರು ನಾವು, ಬೇರೆಯವರು ಅದನ್ನು ಕೇಳೋಕೆ ಯಾರು ಎಂದೆಲ್ಲಾ ದಬಾಯಿಸುತ್ತಾನೆ. ಅವಮಾನದಿಂದ ಮನೆಗೆ ಬಂದ ಮಹಿಳೆಯರು ತಲೆ ತಗ್ಗಿಸುತ್ತಾರೆ.  

ಆದರೆ ಈಗ ಮಹಿಳೆಯರ ಮಾತನ್ನು ಭೂಮಿಕಾ ಮಾತ್ರ ಸೀರಿಯಸ್​ ಆಗಿ ತೆಗೆದುಕೊಂಡಿದ್ದಾಳೆ. ಎಷ್ಟು ಮಂದಿಗೆ ಅಂತ ಹೀಗೆ ಹೇಳಿ ಬಾಯಿ ಮುಚ್ಚಿಸುತ್ತೀರಿ ಎಂದು ಗೌತಮ್​ಗೆ ಪ್ರಶ್ನಿಸಿದ್ದಾಳೆ. ಆದರೆ ಹೆಣ್ಣಿನ ಮನಸ್ಸು ಗೌತಮ್​ಗೆ ಅರ್ಥವಾಗುತ್ತಿಲ್ಲ. ಯಾರೋ ಏನೋ ಹೇಳಿದ್ರು ಅಂತ ನೀವ್ಯಾಕೆ ಹೀಗೆ ನೋವು ಅನುಭವಿಸುತ್ತೀರಾ ಕೇಳಿದ್ದಾನೆ. ಆದರೆ ಭೂಮಿಕಾ, ತಮಗೆ ಇನ್ನೂ ಮಕ್ಕಳಾಗಲಿಲ್ಲ, ವೈದ್ಯರ ಬಳಿ ಯಾಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾಳೆ.ಆರಂಭದಲ್ಲಿ ಇದು ಗೌತಮ್​ಗೆ ಸರಿ ಕಾಣಿಸಲಿಲ್ಲ, ಇದೆಲ್ಲಾ ಯಾಕೆ ಎಂದು ಪ್ರಶ್ನಿಸಿದ್ದಾನೆ. ಆದರೆ ಪತ್ನಿಯ ಹಠದ ಮುಂದೆ ಅವನು ತಲೆಬಾಗಲೇ ಬೇಕಲ್ಲ. ಡಾಕ್ಟರ್​ ಬಳಿ ಹೋಗಲು ಒಪ್ಪಿಕೊಂಡಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು ತುಳಸಿಯನ್ನು ಎಳೆದು ತಂದಿದ್ದಾರೆ. ಈ ವಯಸ್ಸಿನಲ್ಲಿ ಅವಳಿಗೆ ಮಕ್ಕಳಾದರೆ ನಿನಗೆ ಆಗತ್ತಮ್ಮಾ, ಭಯ ಪಡಬೇಡ ಎಂದು ಭೂಮಿಕಾಗೆ ಸಮಾಧಾನ ಪಡಿಸುತ್ತಿದ್ದಾರೆ. ಮತ್ತೆ ಕೆಲವರು ಇವರಿಗೆ ಮಕ್ಕಳು ಮಾಡಿ, ತುಳಸಿಗೆ ಬೇಡ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್​ ಎನ್ನುವುದು ನಿಜ ಜೀವನವೇ ಅನ್ನುವ ರೀತಿಯಲ್ಲಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.

click me!