
ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ಕೆಲವು ವರ್ಷಗಳಿಂದ ಎಲ್ಲರ ಮನಸ್ಸನ್ನು ಗೆದ್ದು ಬೀಗುತ್ತಿರುವ ನಟಿ ಸುಷ್ಮಾ ಕೆ. ರಾವ್. ಆ್ಯಂಕರಿಂಗ್ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿರೋ ಸುಷ್ಮಾ, ಇದಾಗಲೇ ಕೆಲವು ಸೀರಿಯಲ್ಗಳಲ್ಲಿ ನಟಿಸಿ ಮಧ್ಯೆ ಒಂದಿಷ್ಟು ವರ್ಷ ಗ್ಯಾಪ್ ತೆಗೆದುಕೊಂಡು ಮತ್ತೆ ಭಾಗ್ಯಲಕ್ಷ್ಮಿ ಸಿರಿಯಲ್ (Bhagyalakshmi Serial)ನ ಭಾಗ್ಯ ಆಗಿ ಮರಳಿದ್ದಾರೆ. ಇವರು ಈಚೆಗೆ ಕಲರ್ಸ್ ಕನ್ನಡದ ಅನುಬಂಧ ಕಾರ್ಯಕ್ರಮದಲ್ಲಿ ತಮ್ಮ ಪತಿ ಮತ್ತು ಮಗನನ್ನು ಪರಿಚಯ ಮಾಡಿಸಿದ್ದೇ ಸೋಷಿಯಲ್ ಮೀಡಿಯಾದಲ್ಲಿ ಏನೋ ಆದವರಂತೆ ಕೆಲವರು ಬರೆದುಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳು ಅದರಲ್ಲಿಯೂ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳ ಸಂಬಂಧಗಳು ಎಂದರೆ ಸದಾ ಜನರ ಕಣ್ಣು ನೆಟ್ಟೇ ಇರುತ್ತದೆ ಎನ್ನುವುದು ನಿಜವಾದರೂ, ಕೆಲವೊಮ್ಮೆ ತಲೆಬುಡ ಇಲ್ಲದ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಬರೆದು ಕೊಳ್ಳುವುದು ಇದೆ.
ಅಷ್ಟಕ್ಕೂ ಸುಷ್ಮಾ ಅವರು ಇದಾಗಲೇ ಒಂದು ಮದುವೆಯಾಗಿ ಡಿವೋರ್ಸ್ ಪಡೆದವರು. ಅವರ ವೈಯಕ್ತಿಕ ಜೀವನದಲ್ಲಿ ಆದ ಅಲ್ಲೋಲ ಕಲ್ಲೋಲಗಳ ಬಗ್ಗೆ ಅವರಿಗಷ್ಟೇ ಅರಿವಿರಲು ಸಾಧ್ಯ. ಸರಿ ಸೆಲೆಬ್ರಿಟಿ ಅಂದ ಮೇಲೆ ಅದು ಸಾರ್ವಜನಿಕ ಚರ್ಚೆಗೂ ಕಾರಣವಾಗುತ್ತದೆ. ಸುಷ್ಮಾ ಅವರ ಬಗ್ಗೆಯೂ ಸುದ್ದಿಗಳು ಸದ್ದು ಮಾಡಿದ್ದವು ಸರಿ. ಆದರೆ ಆಗಲೂ ಅವರೇನೂ ತಮ್ಮ ವಿಚ್ಛೇದನದ ಕುರಿತು ಎಲ್ಲಿಯೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಇದೀಗ ಮತ್ತೊಂದು ಮದುವೆಯಾಗಿ, ಮಗುವಾಗಿದ್ದರೂ ಆ ಬಗ್ಗೆಯೂ ಎಲ್ಲೂ ಹೇಳಿಕೊಂಡಿಲ್ಲ. ಇದರ ಬಗ್ಗೆ ಇದಾಗಲೇ ನಟಿ ಸ್ಪಷ್ಟಪಡಿಸಿದ್ದೂ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮತ್ತು ಮಗನ ಫೋಟೋ ಎಲ್ಲೂ ಹಾಕುವುದು ಪತಿಗೆ ಇಷ್ಟವಿಲ್ಲ, ಆದ್ದರಿಂದ ನಾನು ಹಾಕಿಲ್ಲ ಎನ್ನುವುದನ್ನೂ ಸುಷ್ಮಾ ಇದಾಗಲೇ ಬಹಿರಂಗಪಡಿಸಿದ್ದಾರೆ.
ಅದು ಅವರ ವೈಯಕ್ತಿಕ ವಿಷಯ. ಆದರೆ ಇದೀಗ ಸುಷ್ಮಾ ಅವರು ಏನೋ ಗುಟ್ಟು ಮಾಡಿದ್ದಾರೆ, ಮರು ಮದುವೆಯ ವಿಷಯವನ್ನು ಬಹಿರಂಗ ಪಡಿಸದೇ ಅಪಚಾರ ಎಸಗಿದ್ದಾರೆ ಎನ್ನುವ ರೀತಿಯಲ್ಲಿ ಸುದ್ದಿಗಳು ಸದ್ದು ಮಾಡುತ್ತಿವೆ. ತಮ್ಮ ಪತಿ ಮತ್ತು ಮಗುವನ್ನು ವೇದಿಕೆ ಮೇಲೆ ಪರಿಚಯಿಸಿದರು ಎನ್ನುವ ಸುದ್ದಿ ಬರುತ್ತಲೇ, ಕೆಲವು ಯುಟ್ಯೂಬರ್ಗಳು, ಡಿಜಿಟಲ್ ಕ್ರಿಯೇಟರ್ಸ್ ನಟಿ ತಮಗೆ ಹೇಳದೇ ಮದುವೆಯಾದರು ಎನ್ನುವ ರೀತಿಯಲ್ಲಿ ಬರೆದುಕೊಳ್ಳುತ್ತಿದ್ದಾರೆ! ಸೆಲೆಬ್ರಿಟಿಗಳು ಮದುವೆಯಾದರೂ, ಡಿವೋರ್ಸ್ ಆದರೂ, ಮಕ್ಕಳಾದರೂ ಒಟ್ಟಿನಲ್ಲಿ ಜನರಿಗೆ ಹೇಳಿಯೇ ಆಗಬೇಕು ಎನ್ನುವ ಮನಸ್ಥಿತಿ ಕೆಲವರಲ್ಲಿ ಇದ್ದಂತಿದೆ. ಯಾರಿಗೂ ಹೇಳದೇ ಮದುವೆಯಾದರು, ಮಗುವಾದರೂ ಅದನ್ನು ಬಹಿರಂಗಗೊಳಿಸಲಿಲ್ಲ ಎಂದು ಏನೋ ಅಪರಾಧ ಎಸಗಿದವರಂತೆ ಮಾತನಾಡುತ್ತಿರುವುದು ಜನರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಮತ್ತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, 25 ವರ್ಷಗಳಿಂದ ಸುಷ್ಮಾ ರಾವ್ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲ್ಇ ಅವರಿಗೆ ಕಲರ್ಸ್ ಕನ್ನಡ ವಾಹಿನಿ ‘ಅನುಬಂಧ ಅವಾರ್ಡ್ಸ್ - 2026’ ಕಾರ್ಯಕ್ರಮದಲ್ಲಿ ಗೌರವ ಸಮರ್ಪಿಸಲಾಗಿತ್ತು. ಆ ಸಮಯದಲ್ಲಿ ಪತಿ ಮತ್ತು ಮಗನನ್ನು ಸುಷ್ಮಾ ಪರಿಚಯ ಮಾಡಿಸಿದ್ದರು. ಅವರ ಪತಿಯ ಹೆಸರು ಮಧುಕರ್ ಆದಿ ಮೂರ್ತಿ. ಸೇಂಟ್ ಪಾಲ್ ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಮಧುಕರ್ ಆದಿ ಮೂರ್ತಿ, PESIT ನಲ್ಲಿ ವ್ಯಾಸಂಗ ಮಾಡಿದ್ದಾರೆ. ಒಂದಷ್ಟು ಕಾಲ ಟೊರೊಂಟೊದಲ್ಲಿ ಮಧುಕರ್ ಆದಿ ಮೂರ್ತಿ ಕೆಲಸ ಮಾಡಿದ್ದರು. ಮಗನ ಹೆಸರು ಆರ್ಯ ಮಧುಕರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.