
‘ನಾವೊಂದು ಬಗೆದರೆ ದೈವ ಇನ್ನೊಂದು ಬಗೆದಂತೆ’ ಎಂದ ಗಾದೆ ಮಾತು ಎಷ್ಟು ಸತ್ಯ ಅಲ್ಲವೇ? ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial Episode ) ನನ್ನ ಗಂಡ ಗೌತಮ್ ಸೇಫ್ ಆಗಿರಬೇಕು ಅಂತ ತಪ್ಪು ಮೇಲೆ ತಪ್ಪು ಮಾಡ್ತೀನಿ, ಗೌತಮ್ರಿಂದ ನಾನು, ನನ್ನ ಮಗ ದೂರ ಇರ್ತೀವಿ ಅಂತ ಭೂಮಿಕಾ ಹೇಳಿದ್ದಳು. ಆದರೆ ವಿಧಿ ಮಾತ್ರ ಗೌತಮ್ ಹಾಗೂ ಅವನ ಮಗನನ್ನು ಇನ್ನು ಹತ್ತಿರ ಮಾಡುತ್ತಿದೆ.
ಈಗಾಗಲೇ ಗೌತಮ್ ಹಾಗೂ ಅವನ ಮಗ ಆಕಾಶ್ ಮಿಲನವಾಗಿದೆ. ಆಕಾಶ್ ತನ್ನನ್ನು ಅಪ್ಪು ಅಂತ ಗೌತಮ್ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಹೀಗಾಗಿ ತನ್ನ ಮಗ ಆಕಾಶ್ ಇವನೇ ಇರಬಹುದು ಅಂತ ಗೌತಮ್ಗೆ ಇನ್ನೂ ಗೊತ್ತಾಗಿಲ್ಲ. ಇನ್ನೊಂದು ಕಡೆ ಆಕಾಶ್ ಕಂಡರೆ ಗೌತಮ್ಗೂ ಇಷ್ಟ. ಅವನ ತರಲೆ, ತುಂಟಾಟದ ಮಾತುಗಳು, ಅವನ ತಾಯಿ ಕಲಿಸಿರುವ ಸಂಸ್ಕಾರ ಈಗಾಗಲೇ ಗೌತಮ್ ಮನಸ್ಸನ್ನು ಗೆದ್ದಿದೆ.
ಸಖತ್ ನಾಟಕ ಮಾಡಿ ಅಪ್ಪ ಗೌತಮ್ ಬಳಿ ಆಕಾಶ್ ಸ್ಕೂಲ್ಗೆ ಡ್ರಾಪ್ ತಗೊಂಡಿದ್ದಾನೆ, ಐಸ್ಕ್ರೀಂ ಕೂಡ ತಿಂದಿದ್ದಾನೆ. ಒಟ್ಟಿನಲ್ಲಿ ಪದೇ ಪದೇ ಗೌತಮ್ ಹಾಗೂ ಆಕಾಶ್ ಭೇಟಿಯಾಗುತ್ತಿದೆ. ಈಗ ಈ ಭೇಟಿ ಇನ್ನಷ್ಟು ಹತ್ತಿರ ಮಾಡಿ ಗೌತಮ್ ಹಾಗೂ ಭೂಮಿಕಾರನ್ನು ಒಂದು ಮಾಡಿದರೂ ಆಶ್ಚರ್ಯವಿಲ್ಲ.
ಇನ್ನೊಂದು ಕಡೆ ಗೌತಮ್ ಹಾಗೂ ಭೂಮಿ ಭೇಟಿಯಾಗಿದೆ. “ನಾನು ಗೌತಮ್ ಜೊತೆಗೆ ಇದ್ದರೆ ಅವನಿಗೆ, ನನ್ನ ಕುಟುಂಬಕ್ಕೆ ಅಪಾಯ ಆಗತ್ತೆ, ಕುಟುಂಬದಿಂದ ದೂರ ಇರಬೇಕು” ಅಂತ ಭೂಮಿಕಾ ಕುಶಾಲನಗರದಲ್ಲಿ ಒಂಟಿಯಾಗಿ ಜೀವನ ಮಾಡುತ್ತಿದ್ದಾಳೆ. ಅಲ್ಲಿ ಅವಳ ಜೊತೆ ಮಗ, ಮಲ್ಲಿ ಕೂಡ ಇದ್ದಾರೆ.
“ನಾನು, ನನ್ನ ಮಗ ಕಷ್ಟಪಟ್ಟು ಹೊಸ ಜೀವನವನ್ನು ಕಟ್ಟುಕೊಂಡಿದ್ದೇವೆ. ನಮ್ಮ ಪ್ರಪಂಚಕ್ಕೆ ಬರಬೇಡಿ, ನೀವು ನಮ್ಮ ಬಳಿ ಬಂದರೆ ನನ್ನ ನಿರ್ಧಾರ ಬೇರೆಯೇ ಆಗಿರುತ್ತದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ. ನಾನು ನಿಮ್ಮನ್ನು ಪ್ರೀತಿಸೋ ಕಾಲ ಮುಗೀತು, ಇನ್ನೇನಿದ್ರೂ ದ್ವೇಷ ಅಷ್ಟೇ” ಎಂದು ಭೂಮಿಕಾ, ಗೌತಮ್ಗೆ ಹೇಳಿದ್ದಾಳೆ.
ಶಕುಂತಲಾ ವಾರ್ನ್ ಮಾಡಿದ್ದಾಳೆ, ಹೀಗಾಗಿ ಭೂಮಿಕಾ ನನ್ನಿಂದ ದೂರ ಆಗಿರೋದು” ಅಂತ ಗೌತಮ್ಗೆ ಅರ್ಥವೇ ಆಗಿಲ್ಲ. ಮಗಳ ವಿಷಯ ಮುಚ್ಚಿಟ್ಟಿದ್ದೀನಿ ಅಂತ ಭೂಮಿಕಾ ನನ್ನನ್ನು ದೂರ ಇಟ್ಟಿದ್ದಾಳೆ, ದ್ವೇಷ ಮಾಡುತ್ತಿದ್ದಾಳೆ ಎಂದು ಅವನು ಅಂದುಕೊಂಡಿದ್ದಾನೆ. ಇಷ್ಟು ವರ್ಷಗಳ ಬಳಿಕ ಭೂಮಿಕಾ ಸಿಕ್ಕಿದ್ದಾಳೆ, ಆದರೆ ನನ್ನನ್ನು ದೂರ ಇಟ್ಟಿದ್ದಾಳೆ ಅಂತ ಗೌತಮ್ ಬೇಸರ ಮಾಡಿಕೊಂಡಿದ್ದಾನೆ.
ಆಕಾಶ್ ಸ್ಕೂಲ್ಗೆ ಪೇರೆಂಟ್ಸ್ ಬರಬೇಕಿದೆ. ನನ್ನ ತಾಯಿ ನನ್ನ ಜೊತೆ ಬಂದರೆ ಟೀಚರ್ ಕಂಪ್ಲೆಂಟ್ ಮಾಡ್ತಾರೆ, ಆಗ ಅಮ್ಮ ಬೈತಾಳೆ ಅಂತ ಆಕಾಶ್ ಹೆದರಿದ್ದಾನೆ. ಹೀಗಾಗಿ ಅವನು ಏನು ಮಾಡೋದು ಅಂತ ಯೋಚನೆ ಮಾಡುತ್ತಿದ್ದಾನೆ. ಅದೇ ಸಮಯಕ್ಕೆ ಗೌತಮ್ ಅವನ ಬಳಿ ಬಂದು, ನನ್ನ ಮಗ ಈ ಸ್ಕೂಲ್ನಲ್ಲಿ ಓದುತ್ತಿದ್ದಾನೆ, ಅವನನ್ನು ಹುಡುಕೋಕೆ ಸಹಾಯ ಮಾಡ್ತೀಯಾ ಅಂತ ಗೌತಮ್ ಹೇಳಿದ್ದಾನೆ. ಸ್ವಂತ ತಂದೆಯೇ ಸ್ವಂತ ಮಗನ ಮುಂದೆ ಈ ಸಹಾಯ ಬೇಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.
“ನೀವು ನನ್ನ ತಂದೆಯಾಗಿ ಟೀಚರ್ ಮುಂದೆ ಬಂದು ಮಾತಾಡ್ತೀರಿ ಅಂದರೆ ನಾನು ನಿಮಗೆ ಸಹಾಯ ಮಾಡ್ತೀನಿ. ಆದರೆ ಈ ವಿಷಯ ನನ್ನ ತಾಯಿಗೆ ಗೊತ್ತಾಗಬಾರದು” ಅಂತ ಆಕಾಶ್, ಗೌತಮ್ಗೆ ಹೇಳಿದ್ದಾನೆ. ಅದಕ್ಕೆ ಗೌತಮ್ ಕೂಡ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಅಪ್ಪ-ಮಗ ಹೀಗೆ ಇನ್ನಷ್ಟು ಹತ್ತಿರ ಆಗಿ ನಾವು ರಿಯಲ್ ಅಪ್ಪ-ಮಗ ಎನ್ನುವ ಸತ್ಯ ಕೂಡ ಹೊರಬೀಳಬಹುದೇನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.