ಆಷಾಢವೆಂದು ಭೂಮಿಕಾ ತವರಿಗೆ ಹೋದ್ರೆ ಸೀತಾ ಮದ್ವೆ ಮಾಡಿಕೊಳ್ತಿದ್ದಾಳೆ! ಏನಪ್ಪಾ ಇದು?

By Suchethana DFirst Published Jul 11, 2024, 1:31 PM IST
Highlights


ಆಷಾಢವೆಂದು ಭೂಮಿಕಾ ತವರಿಗೆ ಹೋಗಿದ್ದಾಳೆ.  ಆದರೆ ಇಲ್ಲಿ ನೋಡಿದ್ರೆ  ಸೀತಾ-ರಾಮರ ಮದ್ವೆ  ಆಗ್ತಿದೆ.  ಏನಪ್ಪಾ ಇದು?
 

ಆಷಾಢದಲ್ಲಿ ಸಾಮಾನ್ಯವಾಗಿ ಮದುವೆ, ಗೃಹ ಪ್ರವೇಶ, ಉಪನಯನ ಸೇರಿದಂತೆ ಹಲವಾರು ಶುಭ ಸಮಾರಂಭಗಳು ನಿಷಿದ್ಧ ಎಂದು ಹೇಳಲಾಗುತ್ತದೆ. ಇದರ ಹಿಂದೆ ಹತ್ತಾರು ಕಾರಣಗಳು ಇದ್ದರೂ   ಕೆಲವು ಭಾಗಗಳ ಜನರು ಮಾತ್ರ ಇದನ್ನು ಅನುಸರಿಸುವುದು ಇದೆ. ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸೀರಿಯಲ್ ಪ್ರೇಮಿಗಳು ಅಮೃತಧಾರೆ ಮತ್ತು ಸೀತಾರಾಮ ಸೀರಿಯಲ್​ನ ಜೋಡಿಗಳನ್ನು ಹೋಲಿಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಮೃತಧಾರೆಯಲ್ಲಿ ಆಷಾಢ ಮಾಸ ಎನ್ನುವ ಕಾರಣಕ್ಕೆ ಭೂಮಿಕಾ ತವರು ಸೇರಿದ್ದಾಳೆ. ಅವಳ ಅಮ್ಮ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಇತ್ತ ಸೀತಾ-ರಾಮರ ಕಲ್ಯಾಣ ನಡೆಯುತ್ತಿದೆ. ಇದನ್ನೇ ಅಭಿಮಾನಿಗಳು ಹೇಳುತ್ತಿದ್ದಾರೆ. ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಒಂದಾಗಿ ಇರಬಾರದು ಎನ್ನುವ ಕಾರಣಕ್ಕೆ ಭೂಮಿಕಾ ಅಮ್ಮನ ಮನೆಗೆ ಹೋದ್ರೆ, ಇಲ್ಲಿ ನೋಡಿದ್ರೆ ಆಷಾಢದಲ್ಲಿಯೂ ಮದುವೆಯಾಗ್ತಿದೆಯಲ್ಲಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.

ಅಮೃತಧಾರೆಯ ವಿಷಯಕ್ಕೆ ಬರುವುದಾದರೆ,  ಭೂಮಿಕಾ ಮತ್ತು ಗೌತಮ್​ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಆಷಾಢ ಎನ್ನುವ ಕಾರಣಕ್ಕೆ ಭೂಮಿಕಾ ಮನೆಯವರು ಮಗಳನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇವಳು ಇಲ್ಲದೇ ಅವನು, ಅವನು ಇಲ್ಲದೇ ಇವಳು ಇರಲು ಆಗ್ತಿಲ್ಲ. ಕರೆಂಟ್​ ಹೋದಾಗ ಅತ್ತ ಗೌತಮ್​ಗೆ ಭೂಮಿಕಾ ನೆನಪಾದ್ರೆ, ಡುಮ್ಮ ಸರ್​ ಗೊರಕೆ ಸದ್ದು ಇಲ್ಲದೇ ಭೂಮಿಗೆ ನಿದ್ದೆ ಬರ್ತಿಲ್ಲ. ಅಂತೂ ಆನಂದ್​ಗೆ ಹೇಳಿ ಗೌತಮ್​ನ ಗೊರಕೆ ಶಬ್ದವನ್ನು ರೆಕಾರ್ಡ್​ ಮಾಡಿಕೊಂಡು ಭೂಮಿಕಾಗೆ ಕಳಿಸಿ ಆಗಿದೆ. ಒಟ್ಟಿನಲ್ಲಿ ಇಬ್ಬರದ್ದೂ ಒಂದು ರೀತಿಯ ನರಕಯಾತನೆ. ಈ ಆಷಾಢ ಯಾಕೆ ಬಂತೋ ಎಂದು ನವ ದಂಪತಿ ಮನಸ್ಸಿನಲ್ಲಿಯೇ ಬೈದುಕೊಳ್ಳುವ ಹಾಗೆ ಇಲ್ಲಿಯೂ ಈ ಜೋಡಿ ಶಪಿಸುತ್ತಲೇ ಇದೆ. ಭೂಮಿಕಾಳನ್ನು ಬಿಟ್ಟು ಇರಲಾಗದ ಗೌತಮ್​, ನೇರವಾಗಿ ಭೂಮಿಕಾ ತವರಿಗೆ ಬಂದು, ಅವಳನ್ನು ಕಳುಹಿಸಿಕೊಡುವಂತೆ ಕೇಳುತ್ತಿದ್ದಾನೆ!

Latest Videos

'ಹುಲಿ'ಯ ಬಾಯಿಗೆ ಸಿಕ್ಕ ಪುಟಾಣಿ ಸಿಹಿ! ಸೀತಾಳ ಹೊಸಜೀವನದ ಹೊಸ್ತಿಲಲ್ಲಿ ಇದೆಂಥ ಪರೀಕ್ಷೆ?

ಇದು ಒಂದೆಡೆಯಾದರೆ, ಸೀತಾರಾಮದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ನಡೆಯುತ್ತಿದೆ.    ಮದುವೆಯ ಶಾಸ್ತ್ರಗಳೂ ಮುಗಿದು ಸಪ್ತಪದಿಯನ್ನೂ ತುಳಿದಾಗಿದೆ ಜೋಡಿ.  ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ಒಂದು ಹಂತದಲ್ಲಿ ನಿರುಮ್ಮಳಾಗಿದ್ದಾಳೆ.   ಮದುವೆ ಮುಗಿಯುವವರೆಗೆ ಇದ್ದ ಆತಂಕವೂ ದೂರವಾಗಿದೆ.  ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್​ ಆಗುತ್ತಲೇ ಇದೆ. ಇದೀಗ ನಿರ್ವಿಘ್ನವಾಗಿ ಮದುವೆ ಮುಗಿಯುತ್ತಿದೆ. ಕೊನೆಯ ಘಳಿಗೆಯಲ್ಲಿ ಸೀತಾಳ ಹೈಡ್ರಾಮಾದಿಂದಾಗಿ ಮದುವೆಯ ಬಗ್ಗೆ ಅನುಮಾನ ಕಾಡಿತ್ತು. ದೇಸಾಯಿಯವರು ಒಂದು ವರ್ಷದಲ್ಲಿ  ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಸಂಬಂಧಿಕರ ಎದುರು ಹೇಳಿದಾಗ, ಸಿಹಿ ಬಿಟ್ಟು ಬೇರೆ ಮಗು ನನ್ನ ಜೀವನದಲ್ಲಿ ಬರಬಾರದು ಎಂದುಕೊಂಡಿರೋ ಸೀತಾಳಿಗೆ ಆಘಾತವಾಗಿ ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಳು. ಈಗ ಎಲ್ಲವೂ ಬಗೆಹರಿದು ಮದುವೆಯಾಗುತ್ತಿದೆ.

ಅಂದಹಾಗೆ, ಆಷಾಢದಲ್ಲಿ  ನವವಿವಾಹಿತರು ದೂರವಿರಬೇಕು ಎನ್ನುವುದಕ್ಕೆ ಹಲವು ಕಾರಣಗಳು ಇವೆ. ಅದಕ್ಕೆ ಮುಖ್ಯ ಕಾರಣ, ಈ ಸಂದರ್ಭದಲ್ಲಿ ಪತಿ-ಪತ್ನಿ ದೈಹಿಕ ಸಂಪರ್ಕ ಬೆಳೆಸಬಾರದು ಎನ್ನುವುದು. ಅದಕ್ಕೆ ಕಾರಣವೂ ಇದೆ.  ಈ ಸಮಯದಲ್ಲಿ ಗರ್ಭ ಧರಿಸಿದರೆ,  ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡಬೇಕಾಗುತ್ತದೆ.  ಏಪ್ರಿಲ್-ಮೇ ತಿಂಗಳಿನಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಇದರಿಂದ ತಾಯಿ ಹಾಗೂ ಮಗುವಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುವ ವೈಜ್ಞಾನಿಕ ಕಾರಣವು ಇದೆ. ಅದೇ ರೀತಿ ಆಷಾಢದಲ್ಲಿ ಮಳೆ ವಿಪರೀತ ಆಗಿರುವ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣ ಇದ್ದರೂ, ಅದನ್ನು ಸದ್ಯ ಸಂಪ್ರದಾಯ ಮಾಡಲಾಗಿದೆ. ಜೊತೆಗೆ,  ಆಷಾಢ ತಿಂಗಳಿನಲ್ಲಿ ಕೃಷಿಕರಿಗೆ ಕೆಲಸ ಹೆಚ್ಚು.  ಹೊಸದಾಗಿ ಮದುವೆಯಾದ ಜೋಡಿಗಳು ಜೊತೆಗಿದ್ದರೆ, ಪತಿಯು ಪತ್ನಿಯ ಜೊತೆಗೆ ಸಮಯ ಕಳೆಯಬಹುದು. ಹೀಗಾದಾಗ ಕೃಷಿ ಕೆಲಸಗಳು ಪೂರ್ಣಗೊಳ್ಳದೇ ಇರಬಹುದು ಎನ್ನುವುದೂ ಇದೆ.

ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!

click me!