ಅಮೆರಿಕನ್ ಕವಿತೆಗೆ ಸ್ವೀಡಿಷ್ ಹಾರ; ಲೋಕ ಗೆದ್ದ ಕವಿತೆ ಲೂಯಿಸ್ ಗ್ಲುಕ್

By Kannadaprabha NewsFirst Published Oct 11, 2020, 3:33 PM IST
Highlights

ಅಪ್ಪಟ ಅಮೆರಿಕನ್‌ ಕವಿ ಲೂಯಿಸ್‌ ಗ್ಲುಕ್‌ಗೆ ಸಾಹಿತ್ಯಕ್ಕಾಗಿ ನೊಬೆಲ್‌ ಬಂದಿದೆ. ಅವರ ದಿಟ್ಟನಿಲುವು, ನಿಸ್ಸಂದಿಗ್ಧ ದನಿ, ಕಠೋರ ಚೆಲುವು ಮತ್ತು ರಾಜಿಯಾಗದ ನಿಚ್ಚಳ ವ್ಯಕ್ತಿತ್ವಕ್ಕೆ ಸಂದ ಗೌರವ ಇದು. ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಲೂಯಿಸ್‌ ಗ್ಲುಕ್‌ ಕವಿತೆಗಳನ್ನು ಓದಿಕೊಂಡು ಬಂದವರಿಗೆ ಸಂತೋಷಕೊಟ್ಟಕ್ಷಣವೂ ಹೌದು.

ಜಿ ಎಂ ಕೊಟ್ರೇಶ್

ಈ ಹೊಳೆಯುವ ಬೆಳ್ಳಿಕೂದಲ, ಅರಳುಗಣ್ಣಿನ ಕವಿಗೀಗ ಎಪ್ಪತ್ತೇಳು. ನೊಬೆಲ್‌ ಬಹುಮಾನ ಬಂದದ್ದಕ್ಕೆ ಏನನ್ನಿಸುತ್ತೆ ಅಂತ ಕೇಳಿದ್ದಕ್ಕೆ ಇವರು ಉತ್ತರಿಸಿದ್ದೂ ಚೆನ್ನಾಗಿತ್ತು; ಇದೊಂಥರ ಹೊಸ ಅನುಭವ. ಏನು ಹೇಳೋದಕ್ಕೂ ತಿಳೀತಿಲ್ಲ. ಪ್ರಾಕ್ಟಿಕಲ್‌ ಆಗಿ ಹೇಳೋದಾದರೆ ನಾನೀಗ ಇರೋ ಮನೆ ಬದಲು ವರ್ಮೌಂಟಲ್ಲಿ ಇನ್ನೊಂದು ಮನೆ ತಗೋಬಹುದು ಅಂತ ಖುಷಿಯಾಗಿದೆ. ಈಗ ಜೀವನ ಒಂಚೂರು ಅಸ್ತವ್ಯಸ್ತವಾಗಿದೆ. ಸರಿ ಮಾಡ್ಕೋಬಹುದೀಗ’.

ಈ ನೊಬೆಲ್‌ ಪ್ರಶಸ್ತಿಯ ಮೊತ್ತ ಸುಮಾರು ಎಂಟು ಕೋಟಿ ರುಪಾಯಿ. ಪ್ರಶಸ್ತಿ ಬಂದಾಕ್ಷಣ ನೀವು ನಿಮ್ಮ ಓದುಗರಿಗೆ ಏನು ಹೇಳುತ್ತೀರಿ ಅನ್ನುವ ನಿರೀಕ್ಷಿತ ಪ್ರಶ್ನೆಗೆ ಇವರ ಉತ್ತರ; ಅಂಥದ್ದೇನಿಲ್ಲ!

ಅಮೆ​ರಿಕದ ಲೂಯಿಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶ​ಸ್ತಿ, 8.08 ಕೋಟಿ ರು. ನಗದು ಬಹು​ಮಾನ 

ಕವಿ ಆದದ್ದೇ ಒಂದು ಪವಾಡ. ಜಗತ್ತಿನಲ್ಲಿ ಯಾರು ಕೂಡ ನಾನು ಕವಿಯಾಗಬೇಕು ಅಂತ ಆಸೆಪಡುವುದಿಲ್ಲ. ಎಷ್ಟೋ ಮಂದಿಗೆ ಅಂಥದ್ದೊಂದು ಒಳ ಆಸೆ ಕೂಡ ಇರುವುದಿಲ್ಲ. ಆದರೆ ನನಗೆ ಬಾಲ್ಯದಲ್ಲೇ ನಾನು ಕವಿಯಾಗಬೇಕು ಅಂತ ಗಾಢವಾಗಿ ಅನ್ನಿಸಿತ್ತು. ಆ ನಿಟ್ಟಿನಲ್ಲಿ ನಾನು ಕೆಲಸ ಶುರುಮಾಡಿದೆ. ಎಂತೆಂಥದ್ದೋ ಬರೆದೆ. ಏನೇನೋ ಮಾಡಿದೆ. ಆದರೆ ಮನಸ್ಸಿಗೆ ಆಗಾಗ ಅನ್ನಿಸೋದು, ‘ಅದು ನಂಗೋಸ್ಕರ ಕಾಯ್ತಾ ಇದೆ’ ಅಂತ. ಒಂದು ಪದ್ಯ ಬರೆದಿದ್ದೆ. ಅದನ್ನಿಟ್ಟುಕೊಂಡು ಮನೆಯೆಲ್ಲ ಓಡಾಡಿದೆ. ಪದ್ಯ ಬೆಳೀಲೇ ಇಲ್ಲ. ರಾತ್ರಿ ಹಾಸಿಗೇಲಿ ಬಿದ್ದುಕೊಂಡು ಪದ್ಯ ಓದ್ತಿದ್ದಾಗ ಥಟ್ಟನೆ ಅನ್ನಿಸ್ತು. ಇದರಲ್ಲೊಂದು ಜರ್ಮನ್‌ ಪದ ಬೇಕೂ ಅಂತ. ನನಗೆ ಜರ್ಮನ್‌ ಬರಲ್ಲವಲ್ಲ. ಗೆಳೆಯರಿಗೆ ಫೋನ್‌ ಮಾಡಿ, ಈ ಪದಕ್ಕೆ ಜರ್ಮನ್‌ ಭಾಷೇಲಿ ಏನಂತಾರೆ ಅಂತ ಕೇಳಿದೆ.

ಅಂತಸ್ಸಾಕ್ಷಿಯ ನೀರವದಲ್ಲಿ

ನನ್ನನ್ನು ನಾನೇ ಕೇಳಿಕೊಂಡೆ.

ನಾನೇಕೆ ನನ್ನ ಬದುಕನ್ನು ನಿರಾಕರಿಸಿದೆ?

ನಾನೇ ಉತ್ತರಿಸಿಕೊಂಡೆ.

ನಿಂತ ನೆಲ ನನ್ನನ್ನು ಮುಳುಗಿಸುತ್ತಿದೆ.

(ಇದನ್ನು ಜರ್ಮನ್‌ ಭಾಷೆಯಲ್ಲಿ ಬರೆಯುತ್ತಾರೆ ಆಕೆ)

ಭೂಮಿ ನನ್ನನ್ನು ಸೋಲಿಸುತ್ತಿದೆ.

ಇದು ಸ್ವತಃ ಲೂಯಿಸ್‌ ಗ್ಲುಕ್‌ ಬರಕೊಂಡದ್ದು.

ಲೂಯಿಸ್‌ ಗ್ಲುಕ್‌ರನ್ನು ಎರಡು ದಶಕಗಳಿಂದ ಓದುತ್ತಿರುವ ಮತ್ತೊಬ್ಬ ಕವಿ ಫಿಯೋನಾ ಸ್ಯಾಂಪ್ಸನ್‌ ಆಕೆಯ ಕುರಿತು ಬರೆದದ್ದು ಕುತೂಹಲಕಾರಿಯಾಗಿದೆ. ಈ ಎರಡು ದಶಕಗಳಲ್ಲಿ ಎಷ್ಟೋ ಕವಿಗಳು ಹುಟ್ಟಿಅವಸಾನ ಹೊಂದಿದ್ದನ್ನೂ ಕಂಡಿದ್ದೇನೆ. ಈ ಎಪ್ಪತ್ತೇಳು ವರ್ಷದ ಅಮೆರಿಕನ್‌ ಮುದುಕಿಗೆ ನೊಬೆಲ್‌ ಬಂದದ್ದಕ್ಕೆ ನನಗೆ ಸಂತೋಷವಾಗಿದ್ದೇಕೆ ಅಂತ ಕೇಳಿಕೊಂಡೆ. 1968ರಲ್ಲಿ ಮೊದಲ ಕವಿತಾ ಸಂಕಲನ ಹೊರತಂದ ನಂತರ ಆಕೆ ಬರೆದದ್ದೆಲ್ಲ ಚಿನ್ನ. ತುಂಬ ಸಂಕೀರ್ಣವಾದದ್ದನ್ನು ಕೂಡ ಸ್ಪಷ್ಟವಾಗುವ ಹಾಗೆ ಬರೆದದ್ದು ಆಕೆಯ ಸಾಧನೆ. ಎಷ್ಟುಸರಳವಾಗಿ ಬರೀತಾಳೆ ನೋಡಿ ಆಕೆ;

ವಂಶವಾಹಿ ತಿದ್ದುವ ತಂತ್ರಜ್ಞಾನ ಶೋಧಿಸಿದ ಇಬ್ಬರಿಗೆ ನೊಬೆಲ್! 

ಬಿದಿರಿನ ಬುಟ್ಟಿಯಲ್ಲಿ ಹಣ್ಣಿತ್ತು.

ತಟ್ಟೆಯಲ್ಲಿ ಹಣ್ಣಿನ ಹೋಳುಗಳಿದ್ದವು.

ಐವತ್ತು ವರ್ಷಗಳು. ಬಾಗಿಲಿನಿಂದ

ಟೇಬಲ್ಲಿಗೆ ಅದೆಂಥ ಸುದೀರ್ಘ ನಡಿಗೆ.

ಕಾಲದ ಅನಂತತೆಯನ್ನು ಕ್ಲುಪ್ತವಾಗಿ ಇದಕ್ಕಿಂತ ಸೊಗಸಾಗಿ ಹೇಗೆ ಹೇಳಲು ಸಾಧ್ಯ? ಚೆಲುವು, ಭಾವುಕ ಸಂದಿಗ್ಧತೆ, ಭಟ್ಟಿಯಿಳಿಸಿದ ಕಾಲ-ಮೂರಕ್ಕೂ ಒಂದೇ ಒಂದು ಸ್ಪಷ್ಟಚಿತ್ರ.

ಓದುತ್ತಾ ಹೋದರೆ ಹೇಗೆ ದುರಂತ ಮತ್ತು ನೆನಪುಗಳು ಬೆರೆತ ಅಂಗ್ಲೋ ಅಮೆರಿಕನ್‌ ಜಗತ್ತಿನ ತಲ್ಲಣಗಳು ಗ್ಲುಕ್‌ ಕಟ್ಟಿಕೊಡುತ್ತಾರೆನ್ನುವುದು ಗೊತ್ತಾಗುತ್ತದೆ. ಹೇಳಿಕೇಳಿ ಕವಿತೆಗಳಿಗೆ ಬೆನ್ನುಹಾಕಿದ ದೇಶ ಅಮೆರಿಕಾ. ಗ್ಲುಕ್‌ಗೆ ನೊಬೆಲ್‌ ಬಂದಾಗ ಅಮೆರಿಕಾದ ಪ್ರಸಿದ್ಧ ಪತ್ರಿಕೆಯೊಂದು ಈಕೆ ನಿಮಗೆ ಗೊತ್ತೇ ಎಂಬ ಪ್ರಶ್ನೆ ಕೇಳಿತ್ತು. ಅದಕ್ಕೆ ಉತ್ತರಿಸಿದ್ದು ಸುಮಾರು ಐದು ಸಾವಿರ ಮಂದಿ. ಅವರ ಪೈಕಿ ಶೇಕಡಾ 11ರಷ್ಟುಮಂದಿ ಹೂಂ ಅಂದಿದ್ದರು. ಮಿಕ್ಕ 89 ಶೇಕಡಾ ಮಂದಿ ಅಡ್ಡಡ್ಡ ತಲೆಯಾಡಿಸಿದ್ದರು. ಯಾವ ದೇಶದಲ್ಲಾದರೂ ಕವಿತೆ ದುಬಾರಿಯೇ!

ಲಿವರ್ ಕ್ಯಾನ್ಸರ್‌ಗೆ ಕಾರಣವಾಗುವ ಸಿ ವೈರಸ್ ಪತ್ತೆ ಹಚ್ಚಿದ ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ! 

ಇದನ್ನೇ ಆಕೆ ಒಂದು ಪುಟ್ಟಪದ್ಯದಲ್ಲಿ ಕಟ್ಟಿಕೊಡುತ್ತಾರೆ.

ಮಗು ದೇಹದ ಚಿತ್ರ ಬರೆಯುತ್ತದೆ

ಎಷ್ಟುಗೊತ್ತೋ ಅಷ್ಟು. ಅಚ್ಚುಕಟ್ಟಾದ ರೇಖಾಚಿತ್ರ.

ರೇಖೆಯೊಳಗಿನ ದೇಹ ಕಾಗದದ ಬಿಳುಪು.

ತನಗೆ ಗೊತ್ತಿರುವುದನ್ನು ಅವಳಲ್ಲಿ ತುಂಬಲಾರಳು

ತಾನು ಸಮರ್ಥಿಸಿಕೊಳ್ಳಲಾರದ ಗೆರೆಗಳ ನಡುವಲ್ಲಿ

ಬದುಕು ಕಳೆದುಹೋಗಿದೆ ಅನ್ನುವುದು ಅವಳಿಗೆ ಗೊತ್ತು!

ಒಳಗೇನೂ ಇಲ್ಲದ ಹೊರರೂಪಿನ ದೇಹಗಳ ಕುರಿತು ಗ್ಲುಕ್‌ ಮತ್ತೆ ಮತ್ತೆ ಮಾತಾಡುತ್ತಲೇ ಹೋಗಿದ್ದಾರೆ. ‘ನಾನು ನಿದ್ದೆಹೋಗುತ್ತೇನೆ, ನೀವು ಜೀವಂತವಾಗಿರಲೆಂದು, ಅದು ಅಷ್ಟೇ ಸರಳ. ಕನಸುಗಳು ತಮಗೆ ತಾವೇ ಏನೇನೂ ಅಲ್ಲ. ಅದು ನಾವು ಹದ್ದುಬಸ್ತಿನಲ್ಲಿಡುವ ಅಸ್ವಸ್ಥತೆ, ಬೇರೇನೂ ಅಲ್ಲ!’ ಎಂಬ ಸಾಲುಗಳರುವ ಪದ್ಯಕ್ಕೆ ಆಕೆ ಕೊಟ್ಟಿರುವ ಶೀರ್ಷಿಕೆ ‘ಶೋಕತಪ್ತ ಕನಸು’.

ತಾನು ಪರಿಪೂರ್ಣ ಕವಿತೆಗಳ ವಿರೋಧಿ. ಬಿಗಿಯಾದ, ಅರ್ಥವನ್ನು ಹಿಡಿದಿಟ್ಟುಕೊಂಡ ನಿಶ್ತಿತ ಧೋರಣೆಯ ಪದ್ಯಗಳೆಂದರೆ ನನಗಾಗದು ಎನ್ನುವ ಗ್ಲುಕ್‌ ಎರಡೇ ಎರಡು ಸಾಲಲ್ಲಿ ಹೇಳುತ್ತಾರೆ:

At the end of my suffering 
there was a door 

ನನ್ನ ಯಾತನೆಯ ಕೊನೆಯಲ್ಲಿ

ಒಂದು ದಿಡ್ಡಿಬಾಗಿಲು.

ಕವಿತೆಗಳನ್ನೇ ಜೀವಿಸಿದ ಗ್ಲುಕ್‌ ಕತೆಗಳನ್ನು ಬರೆಯಲಿಲ್ಲ. ಕವಿತೆಯಂಥ ಒಂದಷ್ಟುಪ್ರಬಂಧಗಳನ್ನು ಬರೆದದ್ದಿದೆ. ಆದರೆ ಓದುಗರು ತನ್ನ ಆರಂಭದ ಸಂಕಲನಗಳನ್ನು ಓದುವ ಬದಲು ಇತ್ತೀಚಿನ ಕವಿತೆಗಳನ್ನು ಓದಬೇಕೆಂದು ನನ್ನಾಸೆ ಅನ್ನುತ್ತಾರೆ ಗ್ಲುಕ್‌.

ಲೂಯಿಸ್‌ ಗ್ಲುಕ್‌ ಕವಿತೆ ಯಾರನ್ನು ಹೇಗೆ ತಟ್ಟಿದೆ ಅನ್ನುವುದಕ್ಕೊಂದು ಉದಾಹರಣೆ ಇರ್ಫಾನ್‌ ಖಾನ್‌ ಪತ್ನಿ ಸುತಾಪ, ಆಕೆಯ ಫ್ಯಾಂಟಸಿ ಕವಿತೆಯ ಸಾಲುಗಳನ್ನಿಟ್ಟುಕೊಂಡು ಇರ್ಫಾನ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದು.

ಗ್ಲುಕ್‌ ಕವಿತೆಗಳನ್ನು ಓದಿಕೊಂಡು ಬಂದ ಅನೇಕರಿಗೆ ಈ ಪ್ರಶಸ್ತಿಯೊಂದು ಸಂಭ್ರಮದ ಗುಚ್ಛ.

click me!