ಸ್ಟಾರ್ಟ್‌ಅಪ್‌ ಅನುಷ್ಠಾನದಲ್ಲಿ ಕರ್ನಾಟಕ ನಂ.1

By Kannadaprabha NewsFirst Published Jan 27, 2021, 9:01 AM IST
Highlights

ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ| ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ಎಫ್‌.ಎಂ.ಸಿ.ಜಿ ಕ್ಲಸ್ಟರ್‌ ಎಂದು ಘೋಷಣೆ ಮಾಡಿದೆ| ಎಫ್‌.ಎಂ.ಸಿ.ಜಿ ಕ್ಲಸ್ಟರ್‌ ಸ್ಥಾಪನೆಯಾದರೆ ಹುಬ್ಬಳ್ಳಿ ನಗರವು ದಕ್ಷಿಣ ಭಾರತದ ಎಫ್‌.ಎಂ.ಸಿ.ಜಿ ಹಬ್‌ ಆಗಲಿದೆ| ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ| 

ಧಾರವಾಡ(ಜ.27): ಕೈಗಾರಿಕಾ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ಮೊದಲನೇ ಸ್ಥಾನದಲ್ಲಿದ್ದು, ಹುಬ್ಬಳ್ಳಿ- ಧಾರವಾಡದಲ್ಲಿ ಒಟ್ಟು 15 ಸ್ಟಾರ್ಟ್‌ಅಪ್‌ಗಳಿಗಾಗಿ ರಾಜ್ಯ ಸರ್ಕಾರ ಅನುದಾನ ಒದಗಿಸಿದೆ. ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವದ ಧ್ವಜಾರೋಣ ನೇರವೆರಿಸಿದ ಸಚಿವರು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಹುಬ್ಬಳ್ಳಿ​​- ಧಾರವಾಡ ಅವಳಿ ನಗರಗಳಲ್ಲಿ ಏಕಸ್‌ ಹಾಗೂ ಯುಫ್ಲೆಕ್ಸ್‌ ಕಂಪನಿಗಳ ಸ್ಥಾಪನೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ಸಂಪೂರ್ಣ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡಲಾಗಿದ್ದು, ಯೋಜನೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಶೀಘ್ರವಾಗಿ ಕಂಪನಿಗಳಿಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ 57 ಯೋಜನೆಗಳನ್ನು ಒಂದು ಸಾವಿರ ಕೋಟಿಗಳ ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಇಲ್ಲಿಯ ವರೆಗೆ 20 ಕೋಟಿ ಮೊತ್ತದ 12 ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗಿದೆ. 697.39 ಕೋಟಿಗಳ 41 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸ್ತುತ ದೇಶದ 100 ಸ್ಮಾರ್ಟ್‌ಸಿಟಿ ನಗರಗಳಲ್ಲಿ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಯು 11ನೇ ಸ್ಥಾನದಲ್ಲಿದೆ. ರಾಜ್ಯದ 7 ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.

ಮತ್ತೊಂದಿಷ್ಟು ಆಪ್‌ಗಳಿಗೆ ಈಗ ಕೇಂದ್ರ ಸರ್ಕಾರದ ಲಗಾಮು

ಎಫ್‌ಎಂಸಿಜಿ:

ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ಎಫ್‌.ಎಂ.ಸಿ.ಜಿ (ಫಾಸ್ಟ್‌ ಮೂವಿಂಗ್‌ ಕನ್ಜೂಮರ್‌ ಗೂಡ್ಸ್‌) ಕ್ಲಸ್ಟರ್‌ ಎಂದು ಘೋಷಣೆ ಮಾಡಿದೆ. ಎಫ್‌.ಎಂ.ಸಿ.ಜಿ ಕ್ಲಸ್ಟರ್‌ ಸ್ಥಾಪನೆಯಾದರೆ ಹುಬ್ಬಳ್ಳಿ ನಗರವು ದಕ್ಷಿಣ ಭಾರತದ ಎಫ್‌.ಎಂ.ಸಿ.ಜಿ ಹಬ್‌ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಇದು ಕಾರಣವಾಗಲಿದೆ ಎಂದ ಅವರು, ಪ್ರತಿ ಹಂತದಲ್ಲಿ 2500 ಕೋಟಿಗಳಂತೆ 3 ಹಂತಗಳಲ್ಲಿ 7500 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕ್ಲಸ್ಟರ್‌ ಸ್ಥಾಪನೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಕೈಗಾರಿಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಳೆದ 2020ರ ಪ್ರಾರಂಭದ ದಿನಗಳಲ್ಲಿ ಕಾಣಿಸಿಕೊಂಡ ಕೋವಿಡ್‌ ವೈರಾಣು ತಡೆಯುವಲ್ಲಿ ನಾವು ಯಶಸ್ವಿ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಸಾವಿರ ಕೋವಿಡ್‌ ಲಸಿಕೆಗಳು ಸ್ವೀಕಾರವಾಗಿವೆ. 25,366 ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ. ಇವರೆಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೋವಿಡ್‌ ಶೂನ್ಯಕ್ಕೆ ಇಳಿಯುವ ವರೆಗೂ ಸುರಕ್ಷತಾ ಕ್ರಮಗಳನ್ನು ಮುಂದುವರೆಸಲು ನಿರ್ಲಕ್ಷ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದರು.

ವಿವಿಧ ದಳಗಳಿಂದ ಗೌರವ ರಕ್ಷೆ:

ಇದಕ್ಕೂ ಮುನ್ನ ಗಣರಾಜ್ಯೋತ್ಸ ನಿಮಿತ್ತ ಜಿಲ್ಲೆಯ ವಿವಿಧ ದಳಗಳ ಸದಸ್ಯರು ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಕವಾಯತ್‌ ಮೂಲಕ ಆರ್‌.ಜೆ. ಜಂಗನವಾರಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ವಾರ್ಡರ್‌ ವನೀತಾ ನೇತೃತ್ವದಲ್ಲಿ ಧಾರವಾಡ ಡಿಎಆರ್‌ ಪೊಲೀಸ್‌ ತರಬೇತಿ ಶಾಲೆ, ವಾದಿರಾಜ ದೇಶಪಾಂಡೆ ನೇತೃತ್ವದಲ್ಲಿ ಧಾರವಾಡ ಗೃಹರಕ್ಷಕ ದಳ, ಅಬಕಾರಿ ನಿರೀಕ್ಷಕ ಚಿದಾನಂದ ಮೊದಗೇಕರ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಡಿ.ವಿ. ಹಿರೇಮಠ ನೇತೃತ್ವದಲ್ಲಿ ಅಗ್ನಿಶಾಮಕ ಇಲಾಖೆ, ಉಪವಲಯ ಅರಣ್ಯಾ​ಕಾರಿ ಚಂದ್ರಶೇಖರ ರೊಟ್ಟಿನೇತೃತ್ವದಲ್ಲಿ ಅರಣ್ಯ ಇಲಾಖೆ, ಧಾರವಾಡ ಡಿ.ಎ.ಆರ್‌. ವಿಭಾಗದ ಡಿಸೋಜಾ ನೇತೃತ್ವದಲ್ಲಿ ಪೊಲೀಸ್‌ ಬ್ಯಾಂಡ್‌ ತಂಡಗಳ ಸದಸ್ಯರು ಗೌರವ ರಕ್ಷೆಯನ್ನು ಸಲ್ಲಿಸಿದರು.

ಸಾಧಕರಿಗೆ ಸನ್ಮಾನ:

ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಸಚಿವ ಜಗದೀಶ ಶೆಟ್ಟರ್‌ ಕ್ರೀಡೆ ವಿಭಾಗದಲ್ಲಿ 73 ಕೆ.ಜಿ.ಯಲ್ಲಿ ಸೀನಿಯರ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಸನಾ .ಎಂ. ಮಾಳಗಿ, ಅಪಘಾತ ಸಮಯದಲ್ಲಿ ಪ್ರಾಣ ರಕ್ಷಣೆ ಮಾಡಿದ ನಿಂಗಪ್ಪ ಕುಡುವಕ್ಕಲಿಗರ, ಕೋವಿಡ್‌ ನಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ವೈದ್ಯರುಗಳಾದ ಡಾ. ಕವಿತಾ ಕೋರೆ, ಡಾ. ಪ್ರಭು ಹಾಗೂ ಪೊಲೀಸ್‌ ಇಲಾಖೆಯ ಕುಶಾಲ ಕೃಷ್ಣಾಜಿ ಫಂಡರಿ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾಧಿ​ಕಾರಿ ನಿತೇಶ ಪಾಟೀಲ್‌, ಪೊಲೀಸ್‌ ಆಯುಕ್ತ ಲಾಬು ರಾಮ್‌, ಜಿಪಂ ಸಿಇಒ ಡಾ. ಸುಶೀಲಾ ಬಿ, ಎಸ್ಪಿ ಪಿ. ಕೃಷ್ಣಕಾಂತ, ಅಪರ ಜಿಲ್ಲಾ​ಕಾರಿ ಶಿವಾನಂದ ಕರಾಳೆ, ಉಪವಿಭಾಗಾ​ಕಾರಿ ಡಾ. ಗೋಪಾಲ ಕೃಷ್ಣ ಬಿ. ಇದ್ದರು.
 

click me!