Tesla in India: ಎಲೆಕ್ಟ್ರಿಕ್‌ ಕಾರಿಗೆ ತೆರಿಗೆ ವಿನಾಯ್ತಿ ಕೋರಿದ್ದ ಎಲಾನ್‌ ಮಸ್ಕ್ ಮನವಿ ತಿರಸ್ಕೃತ!

By Suvarna NewsFirst Published Feb 5, 2022, 11:14 AM IST
Highlights

*ಭಾರತದಲ್ಲಿ ಟೆಸ್ಲಾ ಕಾರು ಘಟಕ ಆರಂಭಿಸಲು ರಾಜ್ಯಗಳಿಂದ ಭರ್ಜರಿ ಆಹ್ವಾನ
*ಟೆಸ್ಲಾ ಕಾರಿಗೆ ತೆರಿಗೆ ವಿನಾಯ್ತಿ ಕೋರಿದ್ದ ಎಲಾನ್‌ ಮಸ್ಕ್ ಮನವಿ ತಿರಸ್ಕೃತ!
*ದೇಶೀಯ ಕಂಪನಿಗಳ ನಡೆಯನ್ನು ಟೆಸ್ಲಾ ಅನುಸರಿಸಬೇಕು ಎಂದ ಜೋಹ್ರಿ

ನವದೆಹಲಿ  (ಫೆ. 05): ಎಲೆಕ್ಟ್ರಿಕ್‌ ಕಾರುಗಳನ್ನು (Electric Vehicles) ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭಾಗಶಃ ನಿರ್ಮಿತ ವಾಹನಗಳನ್ನು ತಂದು ಇಲ್ಲಿ ಜೋಡಿಸಬಹುದು. ಈ ಮೂಲಕ ಕಡಿಮೆ ತೆರಿಗೆಯ ಸೌಲಭ್ಯ ಪಡೆಯಬಹುದು ಎಂದು ಹೇಳಿದೆ.

‘ಮೋದಿ ಸರ್ಕಾರ ಟೆಸ್ಲಾಗೆ ಸ್ಥಳೀಯವಾಗಿ ಉತ್ಪಾದನೆ ಆರಂಭಿಸಲು ಉತ್ತೇಜಿಸಿದೆ. ಆದರೆ ಮಸ್ಕ್‌ ಮಾತ್ರ ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್‌ ವಾಹನಗಳ ಮೇಲೆ ಶೇ.100ರಷ್ಟುಇರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಬಯಸಿದ್ದಾರೆ. ಈ ಮೂಲಕ ಬೇರೆಡೆ ತಯಾರಾದ ವಾಹನವನ್ನು ದೇಶದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ಇದಕ್ಕೆ ಸರ್ಕಾರ ಒಪ್ಪಿಲ್ಲ’ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯ ಅಧ್ಯಕ್ಷ ವಿವೇಕ್‌ ಜೋಹ್ರಿ ಹೇಳಿದ್ದಾರೆ.

ಇದನ್ನೂ ಓದಿTesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!

‘ಭಾರತಕ್ಕೆ ಆಮದು ಮಾಡಿಕೊಳ್ಳುವ ಬಿಡಿ ಭಾಗಗಳ ಮೇಲೆ ಶೇ.15-30ರ ನಡುವೆ ಆಮದು ಸುಂಕ ಇದೆ. ಸ್ಥಳೀಯ ಉತ್ಪಾದನೆ ಮತ್ತು ಭಾರತದಿಂದ ಬಿಡಿಭಾಗಗಳನ್ನು ಖರೀದಿಸುವ ಬಗ್ಗೆ ಯಾವುದೇ ಬಗ್ಗೆ ಸರ್ಕಾರ ಕೇಳಿತ ನಂತರವೂ ಟೆಸ್ಲಾ ತನ್ನ ಯೋಜನೆಯ ಬಗ್ಗೆ ಏನೂ ಹೇಳಿಲ್ಲ’ಎಂದು ಜೋಹ್ರಿ ದೂರಿದ್ದಾರೆ.

ಎಲೆಕ್ಟ್ರಿಕ್‌ ವಾಹನಗಳಿಗಾಗಿ ಸ್ಥಳೀಯ ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿರುವ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನಂತಹ ದೇಶೀಯ ಕಂಪನಿಗಳ ನಡೆಯನ್ನು ಟೆಸ್ಲಾ ಅನುಸರಿಸಬೇಕು ಎಂದು ಜೋಹ್ರಿ ಒತ್ತಾಯಿಸಿದ್ದಾರೆ. ಕಳೆದ ತಿಂಗಳು, ಟೆಸ್ಲಾ ಭಾರತದಲ್ಲಿ ಸಾಕಷ್ಟುಸವಾಲುಗಳನ್ನು ಎದುರಿಸುತ್ತಿರುವುದಾಗಿ ಮಸ್ಕ್‌ ಹೇಳಿದ್ದರು. ಇದಾದ ಬಳಿಕ ದೇಶದ ಐದು ರಾಜ್ಯಗಳ ಸಚಿವರು ಟೆಸ್ಲಾವನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದರು.

ಇದನ್ನೂ ಓದಿ: Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ: ಟೆಸ್ಲಾ ಸಂಸ್ಥಾಪಕ ಸಿಇಒ ಎಲಾನ್ ಮಸ್ಕ್(Elon Musk) ಟ್ವೀಟ್ ಭಾರತದಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ತೆಲಂಗಾಣ, ಮಹಾರಾಷ್ಟ್ರ ಸೇರಿ 5 ರಾಜ್ಯಗಳು ಟೆಸ್ಲಾ ಕಾರು ಘಟಕ ತಮ್ಮ ತಮ್ಮ ರಾಜ್ಯಗಳಲ್ಲಿ ಸ್ಥಾಪಿಸುವಂತೆ ಆಹ್ವಾನ ನೀಡಿತ್ತು. ಇದಾದ ಬಳಿಕ ಆಹ್ವಾನ ನೀಡುವಿಕೆಯಲ್ಲಿ ಲೇಟಾದರೂ ಕರ್ನಾಟಕ(Karnataka) ಲೇಟೆಸ್ಟ್ ಆಗಿ ಆಹ್ವಾನ ನೀಡಿತ್ತು.. 

ತೆಲಂಗಾಣ, ಮಹಾರಾಷ್ಟ್ರ ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಎಲಾನ್ ಮಸ್ಕ್‌ಗೆ ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಕಾರು ಘಟಕ ಆರಂಭಿಸುವಂತೆ  ಆಹ್ವಾನ ನೀಡಿದ್ದವು. ಐದು ರಾಜ್ಯಗಳು ಆಹ್ವಾನ ನೀಡಿದ ಒಂದು ವಾರದ ಬಳಿಕ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಮರುಗೇಶ್ ನಿರಾಣಿ(Murugesh Nirani), ಎಲಾನ್ ಮಸ್ಕ್‌ಗೆ ಅಹ್ವಾನ ನೀಡಿದ್ದರು. 

ಕರ್ನಾಟಕದ ಬೆಂಗಳೂರು(Bengaluru) ಸುತ್ತಮುತ್ತ 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಹಾಗೂ ಎಲೆಕ್ಟ್ರಿಕ್ ವಾಹನ ಕ್ಲಸ್ಟರ್ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಭಾರತದ ಎಲೆಕ್ಟ್ರಿಕ್ ವಾಹನಗಳ ಹಬ್(EV Hub in India) ಆಗಿ ಹೊರಹೊಮ್ಮಿದೆ. ಹೀಗಾಗಿ ಟೆಸ್ಲಾ ಘಟಕ ಆರಂಭಕ್ಕೆ ಸೂಕ್ತ ರಾಜ್ಯ ಎಂದು ನಿರಾಣಿ ತಮ್ಮ ಆಹ್ವಾನದಲ್ಲಿ ಹೇಳಿದ್ದರು. ಆದರೆ ಈಗ  ಎಲೆಕ್ಟ್ರಿಕ್‌ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದಎಲಾನ್‌  ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಮುರುಗೇಶ್ ನಿರಾಣಿ ತಮ್ಮ ಆಹ್ವಾನದಲ್ಲಿ ಕರ್ನಾಟಕದಲ್ಲಿ ಯಾಕೆ ಟೆಸ್ಲಾ ಘಟಕ ಆರಂಭಿಸಬೇಕು? ಯಾಕೆ ಹೂಡಿಕೆ ಮಾಡಬೇಕು ಅನ್ನೋದನ್ನು ಹೇಳಿದ್ದರು.  400ಕ್ಕೂ ಹೆಚ್ಚಿನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ, 45ಕ್ಕೂ ಹೆಚ್ಚು  ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್ ಕಂಪನಿ ಬೆಂಗಳೂರಿನ ಸುತ್ತ ಮುತ್ತ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಇದೀಗ ಭಾರತದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹಬ್ ಆಗಿ ಮಾರ್ಪಟ್ಟಿದೆ. ಹೀಗಾಗಿ ಕರ್ನಾಟಕ ಟೆಸ್ಲಾ ಘಟಕ ಆರಂಭಕ್ಕೆ ಸೂಕ್ತ ಸ್ಥಳ. ಟೆಸ್ಲಾದ ಎನರ್ಜಿ ಘಟಕ ಈಗಾಗಲೇ ಬೆಂಗಳೂರು ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮುರುಗೇಶ್ ನಿರಾಣಿ ಟ್ವೀಟ್ ಮೂಲಕ ಹೇಳಿದ್ದರು.

click me!