
ನವದೆಹಲಿ[ಡಿ.07]: ಮಕ್ಕಳ ಅಪಹರಣ ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿ ಹಾಗೂ ವಿವಾದಿತ ಸ್ವಾಮಿ ನಿತ್ಯಾನಂದ ಈಕ್ವೆಡಾರ್ನಲ್ಲಿ ನೆಲೆಸಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ‘ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಮ್ಮ ರಾಷ್ಟ್ರದಲ್ಲಿಲ್ಲ. ಆತ ಹೈಟಿ ದೇಶದಲ್ಲಿರಬಹುದು’ ಎಂದು ಈಕ್ವೆಡಾರ್ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ರೂಪದ ಪ್ರಕಟಣೆ ನೀಡಿರುವ ಮಧ್ಯ ಅಮೆರಿಕದ ಈಕ್ವೆಡಾರ್ ರಾಯಭಾರಿ, ‘ನಿತ್ಯಾನಂದನಿಗೆ ನಮ್ಮ ದೇಶ ಆಶ್ರಯ ನೀಡಿದೆ ಅಥವಾ ದಕ್ಷಿಣ ಅಮೆರಿಕದಲ್ಲಿ ದ್ವೀಪವೊಂದರ ಖರೀದಿಗೆ ಈಕ್ವೆಡಾರ್ ಸರ್ಕಾರ ನೆರವು ನೀಡಿದೆ ಎಂಬ ಆರೋಪಗಳು ಸುಳ್ಳು’ ಎಂದು ಹೇಳಿದ್ದಾರೆ.
ಅಲ್ಲದೆ, ‘ನಿತ್ಯಾನಂದ ತಮ್ಮಲ್ಲಿ ಆಶ್ರಯ ಕೇಳಿಬಂದಿದ್ದು ಸತ್ಯ. ಆದರೆ, ಆತನ ಮನವಿಯನ್ನು ತಿರಸ್ಕರಿಸಿದ ಕಾರಣಕ್ಕೆ, ನಿತ್ಯಾನಂದ ಕೆರಿಬಿಯನ್ನಲ್ಲಿರುವ ಹೈಟಿ ದ್ವೀಪ ರಾಷ್ಟ್ರಕ್ಕೆ ಪಲಾಯನ ಮಾಡಿರಬಹುದು’ ಎಂದೂ ತಿಳಿಸಿದ್ದಾರೆ.
‘ನಿತ್ಯಾನಂದ ಪ್ರತ್ಯೇಕ ದೇಶ ಸ್ಥಾಪಿಸಿದ್ದಾನೆ. ಈಕ್ವೆಡಾರ್ನಲ್ಲಿದ್ದಾನೆ ಎಂಬುದೆಲ್ಲ ಆತನದ್ದೆಂದು ಹೇಳಲಾದ ‘ಕೈಲಾಸ ಡಾಟ್ ಒಆರ್ಜಿ’ ವೆಬ್ಸೈಟ್ ಮೂಲಕ ಮಾಡಲಾದ ವರದಿಗಳು. ಹೀಗಾಗಿ ನಿತ್ಯಾನಂದನ ಕುರಿತು ವರದಿ ಪ್ರಕಟಿಸುವಾಗ ಈಕ್ವೆಡಾರ್ ಹೆಸರು ಎಳೆದು ತರಬೇಡಿ’ ಎಂದೂ ಅವರು ಭಾರತೀಯ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.
2018ರಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ತನ್ನ ವಿರುದ್ಧ ದೋಷಾರೋಪ ದಾಖಲಾಗುತ್ತಿದ್ದಂತೆಯೇ ಬಂಧನಕ್ಕೊಳಗಾಗುವ ಭೀತಿಯಿಂದ ನಿತ್ಯಾನಂದ, ‘ನಕಲಿ ಪಾಸ್ಪೋರ್ಟ್ ಪಡೆದು ನೇಪಾಳ ಮೂಲದ ಮಧ್ಯ ಅಥವಾ ದಕ್ಷಿಣ ಅಮೆರಿಕದ ರಾಷ್ಟ್ರವೊಂದಕ್ಕೆ ಪರಾರಿಯಾಗಿದ್ದ’ ಎಂದು ಹೇಳಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ