ಬಿಲ್‌ಕಲೆಕ್ಟರ್‌ ಮಗಳು, ಕಾರ್ಮಿಕನ ಮಗನ ಮುಡಿಗೆ ಮೂರು ಚಿನ್ನದ ಪದಕಗಳು!

By Kannadaprabha NewsFirst Published Jul 14, 2023, 6:04 AM IST
Highlights

 ಬಿಲ್‌ಕಲೆಕ್ಟರ್‌ ಮಗಳು, ಕಾರ್ಮಿಕನ ಮಗನ ಮುಡಿಗೆ ಮೂರು ಚಿನ್ನದ ಪದಕಗಳು... ಆ ಹಳ್ಳಿ ಮಕ್ಕಳ ಮೊಗದಲ್ಲಿ ಚಿನ್ನದ ಹೊಳಪು ಮೂಡಿತ್ತು. ಮುಂದೆ ಮತ್ತೊಂದು ಸಾಧನೆಯತ್ತ ಹೆಜ್ಜೆಯನ್ನಿಡುವ ಛಲ, ಕಷ್ಟಗಳ ನಡುವೆ ಸಾಧನೆಯ ಹಾದಿ ತಲುಪಿದ ಉತ್ಸಾಹ ಒಟ್ಟೊಟ್ಟಿಗೇ..!

ಕೆ.ಎಂ. ಮಂಜುನಾಥ್‌

ಬಳ್ಳಾರಿ (ಜು.14) : ಬಿಲ್‌ಕಲೆಕ್ಟರ್‌ ಮಗಳು, ಕಾರ್ಮಿಕನ ಮಗನ ಮುಡಿಗೆ ಮೂರು ಚಿನ್ನದ ಪದಕಗಳು...ಆ ಹಳ್ಳಿ ಮಕ್ಕಳ ಮೊಗದಲ್ಲಿ ಚಿನ್ನದ ಹೊಳಪು ಮೂಡಿತ್ತು. ಮುಂದೆ ಮತ್ತೊಂದು ಸಾಧನೆಯತ್ತ ಹೆಜ್ಜೆಯನ್ನಿಡುವ ಛಲ, ಕಷ್ಟಗಳ ನಡುವೆ ಸಾಧನೆಯ ಹಾದಿ ತಲುಪಿದ ಉತ್ಸಾಹ ಒಟ್ಟೊಟ್ಟಿಗೇ..!

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಜರುಗಿದ 11ನೇ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಬೀಗಿದ ಆ ವಿದ್ಯಾರ್ಥಿಗಳ ಮುಖದಲ್ಲಿ ಶೈಕ್ಷಣಿಕ ಸಾಧನೆಯೊಂದರ ಮಹತ್ತರ ಮೆಟ್ಟಿಲು ದಾಟಿದ ಖುಷಿ ಕಂಡು ಬಂದರೆ, ಹೆತ್ತವರ ಮುಖದಲ್ಲೂ ಸಾರ್ಥಕ ಭಾವ.

ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೇರಿಸಲು ಯುವಶಕ್ತಿ ಶ್ರಮಿಸಲಿ: ರಾಜ್ಯಪಾಲ ಗೆಹ್ಲೋತ್

ಚಿನ್ನದ ಹುಡುಗಿ:

ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ಹಜರಾಬಿ ಅವರು ಬಳ್ಳಾರಿ ವಿವಿಯ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಸಾಧಕಿ. ತಂದೆ ಸಾಯಿಬಣ್ಣ ಗ್ರಾಮ ಪಂಚಾಯಿತಿ ಬಿಲ್‌ಕಲೆಕ್ಟರ್‌. ತಾಯಿ ರಜೀಯಾಬೇಗಂ ಗೃಹಸ್ಥೆ. ಮಗಳ ಭವಿಷ್ಯ ಉಜ್ವಲವಾಗಬೇಕು ಎಂದು ಸಂಕಷ್ಟಗಳ ಮಧ್ಯೆಯೇ ತಂದೆ ಸಾಯಿಬಣ್ಣ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಅಪ್ಪನ ಪೋ›ತ್ಸಾಹ ಅವ್ವನ ಹಾರೈಕೆ ಫಲಿಸಿದೆ.

ಹಜರಾಬಿ, ಪೋಷಕರ ಪೋ›ತ್ಸಾಹವನ್ನು ತನ್ನ ಹೊಳಪಿನ ಕಣ್ಣುಗಳಲ್ಲಿಯೇ ನೆನೆಯುತ್ತ ‘ನನಗೆ ಚಿನ್ನದ ಪದಕ ಬರುತ್ತದೆ ಎಂದು ಊಹಿಸಿರಲಿಲ್ಲ. ಮೂರು ಚಿನ್ನದ ಪದಕಗಳು ಬಂದ ಸುದ್ದಿ ತಿಳಿದು ಖುಷಿಯಾಯಿತು. ಅಪ್ಪ-ಅಮ್ಮನ ಶ್ರಮ ಸಾರ್ಥಕವಾಗಿದೆ. ಅವರ ಪ್ರೇರಣೆಯ ಫಲವೇ ಈ ಮೂರು ಚಿನ್ನದ ಪದಕಗಳು’ ಎಂದು ಕೈಯಲ್ಲಿ ಹಿಡಿದಿದ್ದ ಪದಕಗಳನ್ನು ಎತ್ತಿ ತೋರಿಸಿದರು.

ಕಾರ್ಮಿಕನ ಮಗನ ಸಾಧನೆ:

ಖನಿಜ ಸಂಸ್ಕರಣೆಯಲ್ಲಿ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಸಂಡೂರು ತಾಲೂಕಿನ ದೇವಿಗಿರಿ ಗ್ರಾಮದ ಎಲ್‌.ರುಬಾನ್‌, ಗಣಿ ಕಾರ್ಮಿಕನ ಮಗ.

ತಂದೆ ಸಿ. ಲಾಜರ್‌ ಅವರು ಸಂಡೂರಿನ ಸ್ಮಯೋರ್‌ ಗಣಿ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರುಬಾನ್‌ ಅವರ ತಾಯಿ ರೀಟಾ ಗೃಹಸ್ಥೆ. ಈ ದಂಪತಿಯ ಮೂರು ಮಕ್ಕಳ ಪೈಕಿ ಮೊದಲನೆಯವ ರುಬಾನ್‌.

ತಂದೆ ಗಣಿ ಕಂಪನಿಯಲ್ಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿರುವುದೇ ಖನಿಜ ಸಂಸ್ಕರಣೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಪ್ರೇರಣೆ ಎನ್ನುತ್ತಾರೆ ಚಿನ್ನದ ಹುಡುಗ ರುಬಾನ್‌. ‘ನಾನು ಗಣಿ ಮಣ್ಣಿನ ಹುಡುಗ. ನಮ್ಮಲ್ಲಿರುವ ಖನಿಜ ಸಂಪತ್ತು ಸೇರಿದಂತೆ ಅಲ್ಲಿನ ಸಂಸ್ಕರಣೆ ವಲಯದ ಬಗೆಗಿನ ಆಸಕ್ತಿ ಇತ್ತು. ಈ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ವಿಪುಲವಾಗಿವೆ ಎಂದು ಗೊತ್ತಿತ್ತು. ಹೀಗಾಗಿ ಖನಿಜ ಸಂಸ್ಕರಣೆಯ ಕಡೆ ಮನಸು ಮಾಡಿದೆ’ ಎಂದರು.

ಬಿಸಿನೆಸ್‌ನಲ್ಲಿ ಮುಂದುವರಿಯುವೆ:

ವಾಣಿಜ್ಯಶಾಸ್ತ್ರದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದ ಕೊಪ್ಪಳ ಗವಿಸಿದ್ದೇಶ್ವರ ಮಹಾವಿದ್ಯಾಲಯದ ರುಷಬ್‌ಕುಮಾರ್‌ ಮೆಹ್ತಾ ಅವರ ತಂದೆ ಉದ್ಯಮಿಯಾಗಿದ್ದು, ನಾನು ಅವರ ಜತೆಯಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವೆ ಎಂದರು.

ಪೋಷಕರ ಸಂಭ್ರಮ:

ಬಳ್ಳಾರಿ ವಿವಿ ಆವರಣ ಗುರುವಾರ ವಿವಿಧ ವಿಭಾಗಗಳ ಚಿನ್ನದ ಪದಕಗಳು, ಪಿಎಚ್‌ಡಿ ಪದವಿ ಹಾಗೂ ರಾರ‍ಯಂಕ್‌ಗಳನ್ನು ಗಳಿಸಿದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಹಾದಿ ಕ್ರಮಿಸಿದ ಸಂಭ್ರಮದಲ್ಲಿದ್ದರೆ, ಪೋಷಕರು, ಸಂಬಂಧಿಕರು ಮಕ್ಕಳ ಸಾಧನೆಗೆ ಸಾಕ್ಷಿಯಾದ ಸಂತಸದಲ್ಲಿದ್ದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಘಟಿಕೋತ್ಸವ ಸಮಾರಂಭ ಮುಗಿಯುತ್ತಿದ್ದಂತೆಯೇ ಸಾಧಕ ವಿದ್ಯಾರ್ಥಿಗಳೊಂದಿಗೆ ಪೋಷಕರು ವೇದಿಕೆಗೆ ತೆರಳಿ ಸೆಲ್ಫಿ ತೆಗೆಸಿಕೊಂಡರು. ಕೆಲವರು ಮಕ್ಕಳನ್ನು ಬಿಗಿದಪ್ಪಿಕೊಂಡು ಆನಂದಬಾಷ್ಪ ಸುರಿಸಿದರು. ಸಮಾರಂಭ ಮುಗಿದ ಎರಡು ತಾಸಾದರೂ ಪೋಷಕರು- ಮಕ್ಕಳ ಉತ್ಸಾಹ ತಗ್ಗಿರಲಿಲ್ಲ.

click me!