ಅಮೆರಿಕದ ಆರೋಗ್ಯ ಯೋಜನೆಗೆ ಸ್ಪೂರ್ತಿಯಾಗಿದ್ದು ಸಿಎನ್‌ ಮಂಜುನಾಥ್‌ ನೀಡಿದ್ದ 92 ರೂಪಾಯಿಯ ಹೃದಯ ಚಿಕಿತ್ಸೆ!

By Santosh NaikFirst Published Mar 19, 2024, 3:58 PM IST
Highlights

ಅಮೆರಿಕದ ಆರೋಗ್ಯ ಯೋಜನೆ ಒಬಾಮಾ ಕೇರ್‌ಗೆ ಸ್ಫೂರ್ತಿಯಾಗಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ.ಸಿಎನ್‌ ಮಂಜುನಾಥ್‌ ಅಮೆರಿಕದ ವ್ಯಕ್ತಿಯೊಬ್ಬರಿಗೆ ನೀಡಿದ್ದ ಕೇವಲ 92 ರೂಪಾಯಿಯ ಚಿಕಿತ್ಸೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು (ಮೇ.19): ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಸಿಎನ್‌ ಮಂಜುನಾಥ್‌ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಎನ್‌ ಮಂಜುನಾಥ್‌ ಅವರು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಮಾಡಿದ್ದ ಕೆಲಸಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ವೇಳೆ ರಾಕೇಶ್‌ ಶೆಟ್ಟಿ ಎನ್ನುವವರು ಸರಣಿ ಟ್ವೀಟ್‌ಅನ್ನು ಪೋಸ್ಟ್‌ ಮಾಡಿ, ಅಮೆರಿಕದ ಆರೋಗ್ಯ ಯೋಜನೆ ಎನಿಸಿಕೊಂಡಿರುವ ಒಬಾಮ ಕೇರ್‌ಗೆ ಸ್ಪೂರ್ತಿಯಾಗಿದ್ದ ಡಾ.ಸಿಎನ್‌ ಮಂಜುನಾಥ್‌ ಅವರು ಅಮೆರಿಕದ ಪ್ರಜೆಯೊಬ್ಬರಿಗೆ ನೀಡಿದ್ದ 92 ರೂಪಾಯಿಯ ಟ್ರೀಟ್‌ಮೆಂಟ್‌ ಎಂದು ನೆನಪಿಸಿಕೊಂಡಿದ್ದಾರೆ. 2010ರಲ್ಲಿ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಯೋಜನೆ ಎನಿಸಿಕೊಂಡ ಒಬಾಮ ಕೇರ್‌ಅನ್ನು ಜಾರಿ ಮಾಡಲಾಗಿತ್ತು. ಅದಕ್ಕೂ ಮುನ್ನವೇ ಭಾರತದಲ್ಲಿ ಪಡೆದುಕೊಂಡ ಈ ರೀತಿಯ ಟ್ರೀಟ್‌ಮೆಂಟ್‌ನ ಬಗ್ಗೆ ಅವರು ಅಮೆರಿಕದ ಅಧ್ಯಕ್ಷರಿಗೆ ಈ ಮೇಲ್‌ ಮೂಲಕ ತಿಳಿಸಿದ್ದರು. ಬಳಿಕ ಸ್ವತಃ ಅಮೆರಿಕದ ಅಧ್ಯಕ್ಷ ಜಯದೇವ ಆಸ್ಪತ್ರೆಗೆ ಈ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದರು.

ರಾಕೇಶ್‌ ಶೆಟ್ಟಿ ಹಂಚಿಕೊಂಡ ಟ್ವೀಟ್‌ನಲ್ಲಿರೋದೇನು: 'ಇದು 15 ವರ್ಷಗಳ ಹಿಂದಿನ ಕತೆ. ಅಮೇರಿಕಾದ ಪ್ರಜೆ ಕ್ರಿಸ್ ಮೂರ್ತಿಯವರು ಭಾರತದ ಪ್ರವಾಸದಲ್ಲಿದ್ದಾಗ, ತಡರಾತ್ರಿ ಅವರಿಗೆ ಧಿಡೀರ್ ಎದೆನೋವು ಆರಂಭವಾಗುತ್ತದೆ. ಸಮೀಪದ ನರ್ಸಿಂಗ್ ಹೋಮಿನ ವೈದ್ಯರ ಸೂಚನೆ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಮಧ್ಯರಾತ್ರಿಯ ವೇಳೆ ಸೇರುತ್ತಾರೆ.  ಇಂತಹ ಸಮಯದಲ್ಲಿ, ಭಾರತದಂತಹ ದೇಶದಲ್ಲಿ ಏನು ಚಿಕಿತ್ಸೆ ಸಿಗಬಹುದು ಎನ್ನುವುದು ಅಮೇರಿಕನ್ ಪ್ರಜೆಯ ಲೆಕ್ಕಾಚಾರವಾಗಿತ್ತೋ ಏನೋ. ಆದರೆ, ಅವರನ್ನು ಆ ರಾತ್ರಿಯ ವೇಳೆಯಲ್ಲೂ ಅಟೆಂಡ್ ಮಾಡಿದ್ದು ಹೃದ್ರೋಗ ತಜ್ಞರು. ಎಲ್ಲಾ ಪರೀಕ್ಷೆಗಳನ್ನು ಮುಗಿಸಿದ ನಂತರ ಕ್ರಿಸ್ ಕಟ್ಟಿದ ಬಿಲ್ 92 ರೂಪಾಯಿ.

ಕ್ರಿಸ್‌ ಮೂರ್ತಿ ಬರೆದ ಪತ್ರ

ಅಮೇರಿಕಾದಲ್ಲಿ ಸಾಧಾರಣ ಜ್ವರ ಬಂದರೂ ಇದಕ್ಕಿಂತ ಹೆಚ್ಚು ಕಟ್ಟಬೇಕಾಗಿ ಬಂದಿರಬಹುದು.   ಜಯದೇವ ಸಂಸ್ಥೆಯಲ್ಲಿ ಸಿಕ್ಕಿದ Quality ಹಾಗೂ Affordable Treatmentನಿಂದಾಗಿ ಅಮೇರಿಕನ್ ಪ್ರಜೆ ಬಹಳ ಖುಷಿ ಪಟ್ಟರು. ಖುಷಿ ಪಟ್ಟು ಸುಮ್ಮನಾಗಲಿಲ್ಲ.  ಅಂದಿನ ಅಮೇರಿಕಾದ ಅಧ್ಯಕ್ಷರಾಗಿದ್ದ ಒಬಾಮ ಅವರಿಗೆ ಇಮೇಲ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು. ಭಾರತದಂತಹ ಬೃಹತ್ ಜನಸಂಖ್ಯೆಯ, ಲಿಮಿಟೆಡ್ ರಿಸೋರ್ಸ್ ಇರುವಂತಹ ದೇಶ ಇಂತಹ ಅತ್ಯದ್ಭುತ ವೈದ್ಯಕೀಯ ಸೇವೆಯನ್ನು ಅದರ ಜನರಿಗೆ ನೀಡಬಹುದಾದರೆ, ಅಮೇರಿಕಾದಂತಹ ದೇಶಕ್ಕೆ ಇದು ಸಾಧ್ಯವಾಗದಿರುವುದು ನಾಚಿಕೆಗೇಡು. ಅಮೇರಿಕಾದ ವೈದ್ಯಕೀಯ ಚಿಕಿತ್ಸಾ ಖರ್ಚು ಜನರ ಕೈಗೆಟುಕುವಂತೆ ಕ್ರಮ ಕೈಗೊಳ್ಳಿ ಎಂದು ಬರೆದಿದ್ದರು.

ಇದರಿಂದ ಸ್ಪೂರ್ತಿ ಪಡೆದೋ ಏನೋ, 1964ರಿಂದ ಯಾರೂ ಮುಟ್ಟದ ಅಮೇರಿಕಾದ ಆರೋಗ್ಯ ಕ್ಷೇತ್ರವನ್ನು ಒಬಾಮ ಮುಟ್ಟಿದ್ದರು. ಅದೀಗ 'ಒಬಾಮ ಕೇರ್' ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ.  ಅಮೇರಿಕಾದಂತಹ ಸಂಪದ್ಭರಿತ ದೇಶದ ಅಧ್ಯಕ್ಷರೇ ಬೆರಗಾಗುವಂತಹ ಆರೋಗ್ಯ ಸೇವೆಯನ್ನು ನೀಡುವ ಸಂಸ್ಥೆಯನ್ನು ಕಟ್ಟಿಬೆಳೆಸಿದವರು ಡಾ.ಮಂಜುನಾಥ್ ಅವರು ಎಂದು ಅವರು ಬರೆದಿದ್ದಾರೆ.

ಅತಿಯಾದ ಒತ್ತಡ, ವ್ಯಾಯಾಮ ನವಯುಗದ ತಂಬಾಕು: ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಮಂಜುನಾಥ್‌

ಇದಕ್ಕೆ ಸ್ವತಃ ಸಿಎನ್‌ ಮಂಜುನಾಥ್‌ ಪ್ರತಿಕ್ರಿಯೆ ನೀಡಿದ್ದು,ಈ ಘಟನೆಯನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು  ರಾಕೇಶ್‌ ಶೆಟ್ಟಿ ಅವರೇ...ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತಿರಬೇಕು ಎನ್ನುವುದು ನಮ್ಮ ಆಶಯ. ಈ ಗುರಿಯೊಂದಿಗೆ ಸಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕಳೆದ 10 ವರ್ಷದ ಅವಧಿಯಲ್ಲಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅನೇಕ ಆರೋಗ್ಯ ಸೌಲಭ್ಯಗಳು, ಜನೌಷಧದಂತಹ ಉಪಕ್ರಮಗಳು ಬಡ, ಮಧ್ಯಮ ವರ್ಗದ ಜನರಿಗೆ ಅತ್ಯಂತ ಉಪಕಾರಿಯಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಬರೆದಿದ್ದಾರೆ.

News Hour: ದೇಶ ತುಂಡು ಮಾಡುವ ಮಾತನಾಡಿದ್ದ ಡಿಕೆಸು ವಿರುದ್ಧ ಹೃದಯ ಒಂದು ಮಾಡುವ ಡಾ.ಸಿಎನ್‌ ಮಂಜುನಾಥ್‌ ಫೈಟ್‌

ಈ ಘಟನೆಯನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು ಅವರೇ...

ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತಿರಬೇಕು ಎನ್ನುವುದು ನಮ್ಮ ಆಶಯ. ಈ ಗುರಿಯೊಂದಿಗೆ ಸಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿ ಅತಿ… https://t.co/cAK8UYCvar

— Dr.C.N.Manjunath (@DrCNManjunath)
click me!