ಅನಧಿಕೃತ ಹೋರ್ಡಿಂಗ್ ವಿರುದ್ಧ ಹೈಕೋರ್ಟ್ ಗರಂ

Published : Aug 03, 2023, 04:52 AM IST
ಅನಧಿಕೃತ ಹೋರ್ಡಿಂಗ್ ವಿರುದ್ಧ ಹೈಕೋರ್ಟ್ ಗರಂ

ಸಾರಾಂಶ

ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಳಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ, ಇನ್ನು ಮುಂದೆ ನಗರದಲ್ಲಿ ಅಳವಡಿಸುವ ಪ್ರತಿ ಅನಧಿಕೃತ ಜಾಹೀರಾತು ಫಲಕಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ .50 ಸಾವಿರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕಾಗುತ್ತದೆ ಎಂದು ತಾಕೀತು ಮಾಡಿದೆ.

ಬೆಂಗಳೂರು (ಆ.3) :  ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಳಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ, ಇನ್ನು ಮುಂದೆ ನಗರದಲ್ಲಿ ಅಳವಡಿಸುವ ಪ್ರತಿ ಅನಧಿಕೃತ ಜಾಹೀರಾತು ಫಲಕಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ(BBMP) ತಲಾ .50 ಸಾವಿರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕಾಗುತ್ತದೆ ಎಂದು ತಾಕೀತು ಮಾಡಿದೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತ ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಪಾರದರ್ಶಕತೆಗೆ ಹೈಕೋರ್ಟ್‌ ಸೂಚನೆ

ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಪ್ರಕರಣಗಳ ಸಂಬಂಧ ದಾಖಲಿಸಿರುವ ದೂರು ಹಾಗೂ ಎಫ್‌ಐಆರ್‌ಗಳ ಕುರಿತು ಮಾಹಿತಿ ಸಲ್ಲಿಸಬೇಕು. ಅಕ್ರಮ ಜಾಹೀರಾತು ಫಲಕಗಳನ್ನು ಅಳವಡಿಕೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿಯೂ ಏಕೆ ದಂಡ ವಿಧಿಸಿಲ್ಲ. 59,413 ಅಕ್ರಮ ಜಾಹೀರಾತುಗಳ ಅಳವಡಿಕೆ ಪ್ರಕರಣಗಳಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್‌ ಏಕೆ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಯಾವೆಲ್ಲಾ ಕ್ರಮ ಜರುಗಿಸಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಿ ಮೂರು ವಾರದಲ್ಲಿ ವರದಿ ಸಲ್ಲಿಸಬೇಕು. ಮೂರು ವಾರಗಳ ನಂತರ ಅನಧಿಕೃತವಾಗಿ ಹೋರ್ಡಿಂಗ್‌್ಸ, ಬ್ಯಾನರ್‌ ಹಾಗೂ ಫ್ಲೆಕ್ಸ್‌ ಸೇರಿದಂತೆ ಇನ್ನಿತರ ಜಾಹೀರಾತು ಫಲಕ ನಗರದಲ್ಲಿ ಅಳವಡಿಕೆಯಾದರೆ, ಆ ಪ್ರತಿಯೊಂದು ಜಾಹೀರಾತು ಫಲಕ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ .50 ಸಾವಿರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ಅಕ್ರಮ ಜಾಹೀರಾತು ಫಲಕಗಳ ಹಾವಳಿ ತಡೆಯುವ ಮತ್ತು ಅವುಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಚ್‌ ನಿರ್ದೇಶನಗಳ ಪಾಲನೆ ಮಾಡಿರುವ ಬಗ್ಗೆ ಬಿಬಿಎಂಪಿ ಸಲ್ಲಿಸಿದ ಅನುಪಾಲನಾ ವರದಿಯನ್ನು ಹೈಕೋರ್ಟ್ ತಳ್ಳಿಹಾಕಿತು.

ಕಾಗದದ ಕುದುರೆ ಓಡಿಸಿದಂತೆ:

ಅನುಪಾಲನಾ ವರದಿಯ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಯಾವುದೇ ಕ್ರಮ ಜರುಗಿಸದೆ ಅನುಪಾಲನಾ ವರದಿಯೆಂದು ಸಲ್ಲಿಸಿರುವ ಪಾಲಿಕೆ ಅಧಿಕಾರಿಗಳ ದಿಟ್ಟತನ ಬಹಳ ಆಶ್ಚರ್ಯ ಮೂಡಿಸಿದೆ. ಈ ನಡವಳಿಕೆ ಪಾಲಿಕೆ ಅಧಿಕಾರಿಗಳಿಗೆ ಅನಧಿಕೃತವಾಗಿ ಜಾಹೀರಾತು ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಜರುಗಿಸುವ ಯಾವುದೇ ಆಸಕ್ತಿ ಇಲ್ಲವೆಂಬುದು ತೋರಿಸುತ್ತದೆ. ವರದಿಯನ್ನು ಪರಿಶೀಲಿಸಿದರೆ ಅಧಿಕಾರಿಗಳು ಕೇವಲ ಕಾಗದಗಳ ಕುದುರೆ ಓಡಿಸಿದಂತಿದೆ ಎಂದು ತರಾಟೆಗೆ ತೆಗೆದುಕೊಂಡಿತು.

ಜಾಹೀರಾತು ತೆರವು ಪಂಚ ವಾರ್ಷಿಕ ಯೋಜನೆಯೇ?

ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ಯಾವಾಗ ತೆರವುಗೊಳಿಸಲಾಗುತ್ತದೆ ಎಂಬ ಬಗ್ಗೆ ಬಿಬಿಎಂಪಿ ವಕೀಲರು ನಿರ್ದಿಷ್ಟಉತ್ತರ ನೀಡದಕ್ಕೆ ಬೇಸರಗೊಂಡ ನ್ಯಾಯಪೀಠ, ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿ ಪಂಚವಾರ್ಷಿಕ ಯೋಜನೆ ರೂಪಿಸಲು ನಿರ್ಧರಿಸಿದೆಯೇ? ಶುಭಮಹೂರ್ತ ನಿಗದಿಪಡಿಸಲು ಪರಿಣಿತರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆಯೇ? ಬೆಂಗಳೂರು ನಗರ ಸುಂದರವಾಗಿ ಕಾಣುವುದು ಬಿಬಿಎಂಪಿ ಸರ್ಕಾರಕ್ಕೆ ಇಷ್ಟವಿಲ್ಲವೇ? ನಗರ ಸುಂದರವಾಗಿ ಕಾಣುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಲ್ಲವೇ? ನಗರದಲ್ಲಿ ಜಾಹೀರಾತು ಹಾವಳಿಯಿದ್ದರೆ ಹೊರ ಪ್ರದೇಶಗಳಿಂದ ಬರುವವರಿಗೆ ಯಾವ ಭಾವನೆ ಮೂಡುತ್ತದೆ ಎಂದು ನ್ಯಾಯಪೀಠ ಪ್ರಶ್ನಿಸಿತು.

 

ಡಿಕೆಶಿ ಕೇಸ್‌ ಡೈರಿ ಮುಚ್ಚಿದ ಲಕೋಟೆಯಲ್ಲಿ ಆ.2ರೊಳಗೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ

ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲು ಪಾಲಿಕೆ ತನ್ನ ಹಣ ಖರ್ಚು ಮಾಡುತ್ತಿದೆ. ಆದರೆ, ಅಕ್ರಮ ಜಾಹೀರಾತುಗಳ ಅಳವಡಿಕೆದಾರರಿಗೆ ದಂಡ ವಿಧಿಸುತ್ತಿಲ್ಲ. ಪಾಲಿಕೆ ವ್ಯಯಿಸುತ್ತಿರುವುದು ತೆರಿಗೆದಾರರ ಹಣವಾಗಿದೆ. ಇದರಿಂದ ಆರ್ಥಿಕ ಹೊರೆ ಬೀಳುತ್ತಿದೆ. ಅನಧಿಕೃತ ಜಾಹೀರಾತುಗಳ ಸಂಖ್ಯೆ, ಹಾಕಿರುವ ಎಫ್‌ಐಆರ್‌ ಸಂಖ್ಯೆಗಳು ನಿಜಕ್ಕೂ ನ್ಯಾಯಾಲಯಕ್ಕೆ ಆಘಾತ ಉಂಟು ಮಾಡಿದೆ. ಬೆಂಗಳೂರು ನಗರ ಸಮಸ್ಯೆಯನ್ನು ಎದುರಿಸುತ್ತಿದ್ದು, ನ್ಯಾಯಾಲಯವೇ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಆ್ಯಕ್ಷನ್‌ ಮೋಡ್‌ಗೆ ತರಬೇಕಿದೆ ಎಂದು ನ್ಯಾಯಪೀಠ ನುಡಿಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್