
ಕಾರ್ಕಳ (ಅ.02): ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜಾತಿ ಜನಗಣತಿ ಕ್ರಮವು ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವುದರಲ್ಲದೆ, ಸಮಾಜದಲ್ಲಿ ಭಿನ್ನತೆ ಉಂಟುಮಾಡಲು ಕಾರಣವಾಗಲಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. "ಈ ಜನಗಣತಿ ವೈಜ್ಞಾನಿಕವಾಗಿಲ್ಲ, ಪಾರದರ್ಶಕತೆಯಿಲ್ಲ. ಸರಿಯಾದ ಸಮಯದಲ್ಲಿ, ಸೂಕ್ತ ಸಿದ್ಧತೆಗಳೊಂದಿಗೆ ಗಣತಿ ನಡೆಸಬಹುದಾಗಿದ್ದರೂ, ತರಾತುರಿಯಲ್ಲಿ ಹಾಗೂ ಹಬ್ಬದ ಸಮಯದಲ್ಲಿ ಈ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಸರ್ಕಾರದ ನಿಜಸ್ವಭಾವವನ್ನು ಬಹಿರಂಗಪಡಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಜಮಖಂಡಿ (ಅ.02): ಉತ್ತರ ಕರ್ನಾಟಕದ ಬಹುದೊಡ್ಡ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ತಾಲೂಕಿನ ತುಂಗಳ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಂತೆ ಯುಕೆಪಿ ಮೂರನೇ ಹಂತದ ಯೋಜನೆ ಜಾರಿಗೊಳಿಸಲಾಗುವುದು.
3.ಉಡ್ತಾ ಪಂಜಾಬ್: ಡ್ರಗ್ ಓವರ್ ಡೋಸ್ ಆಗಿ 4 ಯುವಕರು ಸಾವು: ಮಕ್ಕಳ ಶವ ಬೀದಿಯಲ್ಲಿರಿಸಿ ಪೋಷಕರ ಆಕ್ರೋಶ
ಪಂಜಾಬ್ ಈಗಾಗಲೇ ವ್ಯಾಪಕವಾದ ಮಾದಕವಸ್ತುವಿನ ಸಮಸ್ಯೆಯಿಂದ ಬಳಲುತ್ತಿದೆ. ಯುವ ಸಮೂಹದ ಕೈಗೆ ಸುಲಭವಾಗಿ ಸಿಗುವ ಡ್ರಗ್ಸ್ನಿಂದಾಗಿ ಇಲ್ಲಿ ಮಾದಕವ್ಯಸನಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ಈ ನಡುವೆ ಪಂಜಾಬ್ನ ಫಿರೋಜ್ಪುರದ ಲಖೋ ಕೆ ಬೆಹ್ರಾಮ್ ಗ್ರಾಮದಲ್ಲಿ ಕೇವಲ ಎರಡು ದಿನದಲ್ಲಿ ನಾಲ್ವರು ಯುವಕರು ಮಾದಕ ದ್ರವ್ಯ ಸೇವನೆಯಿಂದ ಸಾವನ್ನಪ್ಪಿದ ನಂತರ ಗಡಿ ಜಿಲ್ಲೆ ಬೆಚ್ಚಿಬಿದ್ದಿದೆ. ಹರೆಯದ ಮಕ್ಕಳು ಡ್ರಗ್ಗೆ ದಾಸರಾಗಿ ಸಾವನ್ನಪ್ಪಿದ ನಂತರ ಈ ಘಟನೆ ಇಲ್ಲಿನ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ದುಃಖಕ್ಕೆ ಕಾರಣವಾಗಿದೆ. ಹೋಶಿಯಾರ್ಪುರದಲ್ಲಿ ಮತ್ತೊಂದು ಸಾವು ವರದಿಯಾಗಿದ್ದು, ಈ ವಾರ ಡ್ರಗ್ ಓವರ್ಡೋಸ್ನಿಂದಾಗಿ ಮೃತರಾದವರ ಸಂಖ್ಯೆ ಐದಕ್ಕೆ ಏರಿದೆ.
4.2 ವರ್ಷದ ಆರ್ಯತಾರಾ ಶಕ್ಯಾ ನೇಪಾಳದ ಹೊಸ ಕನ್ಯಾದೇವತೆಯಾಗಿ ಆಯ್ಕೆ
ಕಠ್ಮಂಡು: ನೇಪಾಳದಲ್ಲಿ 2 ವರ್ಷದ ಹೆಣ್ಣು ಮಗುವನ್ನು ಹೊಸ ಜೀವಂತ ದೇವತೆಯಾಗಿ ನೇಮಕ ಮಾಡಲಾಗಿದೆ. ಹಿಂದೆ ದೇವತೆಯಾಗಿ ಅಥವಾ ಕುಮಾರಿಯಾಗಿ ನೇಮಿಸಲ್ಪಟ್ಟಿದ್ದ ಮಗುವ ಇತ್ತೀಚೆಗೆ ಪ್ರೌಢಾವಸ್ಥೆಗೆ ಕಾಲಿಟ್ಟ ಹಿನ್ನೆಲೆಯಲ್ಲಿ ಈಗ ಹೊಸ ದೇವತೆಯನ್ನು ನೇಮಕ ಮಾಡಲಾಗಿದೆ. ಇಲ್ಲಿ ಜೀವಂತ ಹೆಣ್ಣು ಮಗುವನ್ನು ದೇವಿಯಂತೆ ಪೂಜಿಸಲಾಗುತ್ತದೆ. ಎರಡು ವರ್ಷ 8 ತಿಂಗಳ ಮಗು ಅರ್ಯತಾರಾ ಶಕ್ಯಾ ನೇಪಾಳದ ಹೊಸ ಕುಮಾರಿ ದೇವತೆಯಾಗಿದ್ದಾರೆ.
5.ಕತಾರ್ ಮುಟ್ಟಿದರೆ ಹುಷಾರ್, ಸೇನಾ ಕ್ರಮ ಖಚಿತ; ಟ್ರಂಪ್ ಮಹತ್ವದ ಆದೇಶಕ್ಕೆ ಸಹಿ, ನೆತನ್ಯಾಹು ಪ್ರತಿಕ್ರಿಯೆ ಏನು?
ವಾಷಿಂಗ್ಟನ್ : ಕತಾರ್ ಅನ್ನು ರಕ್ಷಿಸಲು ಅಮೆರಿಕವು ಮಿಲಿಟರಿ ಕ್ರಮ ಸೇರಿದಂತೆ ಎಲ್ಲಾ ವಿಧಾನಗಳನ್ನು ಬಳಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಗಾಜಾ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಜೊತೆಗಿನ ಕದನ ವಿರಾಮವನ್ನು ಸ್ವೀಕರಿಸಲು ದೇಶವು ಪರಿಗಣಿಸುತ್ತಿರುವಾಗ, ಕತಾರ್ನಲ್ಲಿ ಹಮಾಸ್ ನಾಯಕರ ಮೇಲೆ ಇಸ್ರೇಲ್ ನಡೆಸಿದ ಅನಿರೀಕ್ಷಿತ ದಾಳಿಯ ನಂತರ ಅಮೆರಿಕದ ರಕ್ಷಣೆಯನ್ನು ಖಾತರಿಪಡಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ