ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕಾನೂನುಗಳು ಅನುಷ್ಠಾನವಾಗುವುದರಿಂದ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಬೆಂಗಳೂರು (ಮೇ.18) : ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕಾನೂನುಗಳು ಅನುಷ್ಠಾನವಾಗುವುದರಿಂದ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಆಡುಗೋಡಿಯ ಸಿಎಆರ್ ದಕ್ಷಿಣ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಜಾರಿಯಿದ್ದ ಐಪಿಸಿ, ಸಿಆರ್ಪಿಸಿ ಹಾಗೂ ಸಾಕ್ಷ್ಯ ಕಾಯ್ದೆಗಳು ಬದಲಾಗಿವೆ. ಈ ಮೂರು ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ರಚಿಸಲಾಗಿದೆ. ಈ ಮೂರು ಕಾಯ್ದೆಗಳು ಜು.1ರಿಂದ ಅನುಷ್ಠಾನಗೊಳ್ಳಲಿವೆ ಎಂದರು.
ದೇಶದಾದ್ಯಂತ ಬಾಂಬ್ ಬೆದರಿಕೆ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ
ಹೊಸ ಕಾಯ್ದೆಯಂತೆ ಪ್ರಕರಣ ದಾಖಲು:
ಸಾರ್ವಜನಿಕರು ಜುಲೈ 1ರಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ, ನೂತನ ಕಾನೂನುಗಳ ಅನ್ವಯ ಎಫ್ಐಆರ್ ದಾಖಲಿಸಬೇಕಾಗುತ್ತದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲದೆ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಫ್ಐಆರ್ ದಾಖಲಿಸಬೇಕು. ನ್ಯಾಯಾಲಯಗಳಲ್ಲಿ ಇಲಾಖೆಗೆ ಮುಜುಗರವಾಗದಂತೆ ಎಸಿಪಿ ಮಟ್ಟದ ಅಧಿಕಾರಿಗಳಿ ಗಮನಹರಿಸಬೇಕು ಎಂದು ಬಿ.ದಯಾನಂದ್ ಸೂಚಿಸಿದರು.
ಗೂಂಡಾಗಿರಿ ಮಟ್ಟಹಾಕಿ: ಸೂಚನೆ: ನಗರದಲ್ಲಿ ರೌಡಿ ಚಟುವಟಿಕೆ ಹಾಗೂ ಗೂಂಡಾಗಿರಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.ಪೊಲೀಸ್ ಇಲಾಖೆಯು ಸಾರ್ವಜನಿಕರ ಆಕ್ಷೇಪಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಪ್ರಮುಖವಾಗಿ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವುದರ ಜತೆಗೆ ಅವುಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ರೌಡಿಪಟ್ಟಿಯಲ್ಲಿರುವವರು ಸಾಕಷ್ಟು ಮಂದಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ. ಇವರು ಸಾರ್ವಜನಿಕರಿಗೆ ಮತ್ತು ಅಮಾಯಕರಿಗೆ ತೊಂದರೆ ಕೊಡುತ್ತಿದ್ದಾರೆ. ಅಂತಹವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಈ ಬಗ್ಗೆ ಪ್ರತಿನಿತ್ಯವೂ ನಮಗೆ ದೂರುಗಳು ಬರುತ್ತಿವೆ. ಇನ್ನೂ ನಾವು ಸಂಪೂರ್ಣವಾಗಿ ರೌಡಿ ಚಟುವಟಿಕೆಗಳನ್ನು ತಡೆಗಟ್ಟುವಿಕೆಯಲ್ಲಿ ವಿಫಲರಾಗಿದ್ದೇವೆ ಎಂದರ್ಥ. ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು, ಡಿಸಿಪಿಗಳು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಹೇಳಿದರು.
ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ರೌಡಿಗಳು ತಮ್ಮನ್ನು ತೊಡಗಿಸಿಕೊಂಡು ಅಮಾಯಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಪೊಲೀಸರು ಸಾರ್ವಜನಿಕ ವಲಯಗಳಲ್ಲಿ ಲಭ್ಯವಿರಬೇಕು. ಈ ಕುರಿತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಇದರಿಂದಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು. ಚೀತಾ, ಹೊಯ್ಸಳ ವಾಹನಗಳು, ಸಂಚಾರ ಪೊಲೀಸರು ಮತ್ತು ನೈಟ್ ಬೀಟ್ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಠಾಣೆಗೆ ಬಂದಾಗ ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಡಿಸಿಪಿ, ಎಸಿಪಿ ಹಾಗೂ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳು ಸಾರ್ವಜನಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಕರೆ ಮಾಡಿದಾಗ ಅದನ್ನು ತಕ್ಷಣ ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ: ಸಚಿವ ಡಿ ಸುಧಾಕರ್
ಬಾಂಬ್ ಬೆದರಿಕೆ ಮಾಹಿತಿ ನೀಡಲು ಸಂಸ್ಥೆ ನಿರಾಕರಣೆ
ಬೆಂಗಳೂರು: ವಿಪಿನ್ ಸಂಸ್ಥೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸುತ್ತಿರುವುದರಿಂದ ಹುಸಿಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳ ತನಿಖೆಯಲ್ಲಿ ಈವರೆಗೆ ಯಾವುದೇ ಮಹತ್ವದ ಪ್ರಗತಿ ಸಾಧ್ಯವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಆಸ್ಪತ್ರೆಗಳು ಹಾಗೂ ಶಾಲೆಗಳಿಗೆ ಇ-ಮೇಲ್ ಮುಖಾಂತರ ಹುಸಿಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಪ್ರಕರಣಗಳ ಸಂಬಂಧ ತನಿಖೆ ಮುಂದುವರೆದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಪಿಎನ್ ಮುಖಾಂತರ ಇ-ಮೇಲ್ಗಳು ಬಂದಿವೆ ಎಂಬುದು ಗೊತ್ತಾಗಿದೆ. ಆದರೆ, ವಿಪಿಎನ್ ಸಂಸ್ಥೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸುತ್ತಿವೆ ಎಂದು ಹೇಳಿದರು.