ಬಾಡಿಗೆ ಮನೆಗೂ ಬೆಂಗಳೂರಿನಲ್ಲಿ ಇಂಟರ್ವ್ಯೂ, ಇದು ಸಿಲಿಕಾನ್‌ ಸಿಟಿಯಲ್ಲಿ ಮಾತ್ರ ಸಾಧ್ಯ!

Published : Jul 17, 2023, 07:38 PM IST
ಬಾಡಿಗೆ ಮನೆಗೂ ಬೆಂಗಳೂರಿನಲ್ಲಿ ಇಂಟರ್ವ್ಯೂ, ಇದು ಸಿಲಿಕಾನ್‌ ಸಿಟಿಯಲ್ಲಿ ಮಾತ್ರ ಸಾಧ್ಯ!

ಸಾರಾಂಶ

ಬೆಂಗಳೂರಿನ ಸ್ಟಾರ್ಟಪ್ ಸಂಸ್ಥಾಪಕ ನೀರಜ್ ಮೆಂಟಾ ಅವರು ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲಾಟ್ ಹುಡುಕುವ ಪ್ರಯತ್ನದ ಬಗ್ಗೆ ಟ್ವಿಟರ್‌ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.  

ಬೆಂಗಳೂರು (ಜು.17): ಬೆಂಗಳೂರು ಮೊದಲಿನ ರೀತಿ ಇಲ್ಲ. ಕೊರೋನಾ ಕಾಲಕ್ಕಿಂತ ಹಿಂದಿನ ಬೆಂಗಳೂರು ಒಂದು ರೀತಿಯದ್ದಾಗಿದ್ದರೆ, ಕೊರೋನಾ ಹಾಗೂ ಕೊರೋನಾ ನಂತರದ ಕಾಲದ ಬೆಂಗಳೂರು ದಿನಗಳು ಬಾರಿ ದುಬಾರಿಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ ಸೂಕ್ತವಾದ ನೆಮ್ಮದಿಯಾದ ಮನೆ ಹುಡುಕೋದು ಎಂದರೆ ಅದಕ್ಕಿಂತ ಮಹಾಸಾಹಸ ಇನ್ನೊಂದಿಲ್ಲ. ಹೇಗೋ ಕಷ್ಟಪಟ್ಟು ನಿಮ್ಮ ದುಡಿಮೆಗೆ ಸೂಕ್ತವಾದ, ನಿಮ್ಮ ಅರ್ಹತೆಗೆ ಅನುಗುಣವಾದ ಫ್ಲ್ಯಾಟ್‌ಗಳನ್ನು ಕಂಡುಕೊಂಡರೂ, ಅದಕ್ಕಿಂತ ದೊಡ್ಡದಾದ ಸವಾಲು ಮನೆ ಮಾಲೀಕರನ್ನು ಒಪ್ಪಿಸೋದೇ ಆಗಿರುತ್ತದೆ. ಬೆಂಗಳೂರಿನ ಮನೆ ಮಾಲೀಕರು ಅದು ಅಗತ್ಯವೋ ಇಲ್ಲವೋ, ತಮ್ಮ ಬಾಡಿಗೆದಾರರ ಪ್ರತಿಯೊಂದು ಸಣ್ಣ ವಿವರವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆ ಮಾಲೀಕರು ಬಾಡಿಗೆ ಕೊಡೋಕೆ ಮುನ್ನ ಬಾಡಿಗೆದಾರರ ಇಂಟರ್ವ್ಯೂ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಸ್ಟಾರ್ಟ್‌ಅಪ್‌ ಸಂಸ್ಥಾಪಕರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಚಿನವರು ಬಹುಶಃ ಇದು ಸಿಲಿಕಾನ್‌ ಸಿಟಿಯಲ್ಲಿ ಮಾತ್ರ ಸಾಧ್ಯ ಎಂದು ಕಾಮೆಂಟ್‌ ಮಾಡಿದ್ದಾರೆ.

ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥಾಪಕ ನೀರಜ್ ಮೆಂಟಾ ಅವರು ಬೆಂಗಳೂರಿನಲ್ಲಿ ಫ್ಲಾಟ್ ಹುಡುಕುತ್ತಿರುವಾಗ ತಮ್ಮ ಸಂಕಟವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಇದು ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ನೀರಜ್‌ ಮೆಂಟಾ, ಬೆಂಗಳೂರಿನಲ್ಲಿ ಫ್ಲ್ಯಾಟ್‌ಅನ್ನು ಬಾಡಿಗೆಗೆ ಹುಡುಕುವುದು ಅತ್ಯಂತ ದೊಡ್ಡ ದುಃಸ್ವಪ್ನ ಎಂದಿರುವ ಅವರು, ನನ್ನ ಕಂಪನಿಗೆ ಆರಂಭದ ಸೀಡ್‌ ರೌಂಡ್‌ಗಿಂತಲೂ (ಹೂಡಿಕೆದಾರರ ಆಕರ್ಷಣೆ ಮಾಡುವ ಸುತ್ತು) ಇದು ಬಹಳ ಕಠಿಣವಾಗಿತ್ತು ಎಂದಿದ್ದಾರೆ.

ನನ್ನ ಬಾಡಿಗೆ ಮನೆಯ ಮಾಲೀಕರ ಇಂಟರ್ವ್ಯೂ, ನನ್ನ ಕಂಪನಿಯ ಸೀಡ್‌ ರೌಂಡ್‌ ಸಮಯಕ್ಕಿಂತಲೂ ಹೆಚ್ಚು ಕಠಿಣವಾಗಿತ್ತು. ಇತ್ತೀಚೆಗೆ ನಾನು ಬೆಂಗಳೂರಿನಲ್ಲಿ ಮನೆ ಹುಡುಕುವ ಪ್ರಕ್ರಿಯೆ ಆರಂಭಿಸಿದ್ದೆ. ಇತ್ತೀಚೆಗೆ ಒಬ್ಬ ಮನೆ ಮಾಲೀಕರು ನನಗೆ ಮನೆಯನ್ನು ನೀಡುವ ಮುನ್ನ ನನ್ನ ಸಂದರ್ಶನ ಮಾಡಲು ಬಯಸಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

ಮನೆಯನ್ನು ಹುಡುಕಿಕೊಟ್ಟ ಬ್ರೋಕರ್‌ಗೆ ನನ್ನ ಹಿನ್ನಲೆಯನ್ನು ತಿಳಿಸುವ ಅಂಶಗಳು ಹಾಗೂ ಲಿಂಕ್ಡ್‌ಇನ್‌ ಫ್ರೊಫೈಲ್‌ಗಳನ್ನು ನೀಡಬೇಕಿತ್ತು. ಅದನ್ನು ನೋಡಿ ಅವರು ಬಾಡಿಗೆ ಮನೆಗೆ ಶಾರ್ಟ್‌ಲಿಸ್ಟ್‌ ಮಾಡುತ್ತಿದ್ದರು. ಆ ಬಳಿಕ ಬ್ರೋಕರ್‌ ಅವರೊಂದಿಗೆ ನನ್ನ ಮಾತುಕತೆ ಏರ್ಪಡಿಸುತ್ತಿದ್ದ ಎಂದು ಮೆಂಟಾ ಬರೆದಿದ್ದಾರೆ. ಸಂದರ್ಶನದ ವೇಳೆ ನನ್ನ ಹಿನ್ನಲೆಯ ಬಗ್ಗೆ ಸಂಪೂರ್ಣವಾಗಿ ಕೇಳಿದ್ದ ಮನೆ ಮಾಲೀಕ, ನಮ್ಮದು ಎಷ್ಟು ದೊಡ್ಡ ಕುಟುಂಬ ಎನ್ನುವುದನ್ನು ವಿಚಾರಿಸಿದ್ದರು ಎಂದು ರಿಟೇಲ್‌ ಸ್ಟಾರ್ಟ್‌ಅಪ್‌ ಆಗಿರುವ ಸೂಪರ್‌ಕೆ ಸ್ಟೋರ್ಸ್‌ ಮಾಲೀಕ ಮೆಂಟಾ ಬರೆದುಕೊಂಡಿದ್ದಾರೆ.

'ಸಂದರ್ಶನದಲ್ಲಿ ನನಗೆ ಸಂಪೂರ್ಣ ಹಿನ್ನಲೆಯನ್ನು ಕೇಳಲಾಗಿತ್ತು. ಅದರೊಂದಿಗೆ ನಮ್ಮ ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಸೇರಿದಂತೆ ಇನ್ನೂ ಕೆಲವು ಮಾಹಿತಿಯನ್ನು ಕೇಳಲಾಗಿತ್ತು. ಆ ಬಳಿಕ ಅವರು ನನ್ನ ಸ್ಟಾರ್ಟ್‌ಅಪ್‌ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಟಾರ್ಟ್‌ಅಪ್‌ನ ಬ್ಯುಸಿನೆಸ್‌ ಮಾಡೆಲ್‌, ಖರ್ಚು-ವೆಚ್ಚ, ಹೂಡಿಕೆದಾರರ ಬಗ್ಗೆ ಮಾಹಿತಿ ಕೇಳಿದರು' ಎಂದು ಮೆಂಟಾ ಹೇಳಿದ್ದಾರೆ. ಅದಲ್ಲದೆ, ಕ್ರಂಚ್‌ಬೇಸ್‌ ಮೂಲಕ ನನ್ನ ಕಂಪನಿಯ ಸಂಪೂರ್ಣ ಮಾಹಿತಿಯನ್ನೂ ಮನೆ ಮಾಲೀಕರು ಅದಾಗಲೇ ಪಡೆದಿದ್ದರು ಎಂದೂ ತಿಳಿಸಿದ್ದಾರೆ.

ಮೊದಲ ದಿನ, ಮೊದಲ ಪೋಸ್ಟಿಂಗ್‌, ಮೊದಲ ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿ!

ಅದಲ್ಲದೆ, ಮನೆಯ ಬಾಡಿಗೆ ನೀಡಲು ನಾನು ಶಕ್ತನೇ ಎಂದು ತಿಳಿದುಕೊಳ್ಳಲು ಸ್ಟಾರ್ಟ್‌ಅಪ್‌ನ ಹಣಕಾಸು ವ್ಯವಹಾರದ ಬಗ್ಗೆಯೂ ಕೇಳಿದ್ದರು. ಈ ವೇಳೆ ಮನೆಯ ಬಾಡಿಗೆಯನ್ನು ತಮ್ಮ ಪತ್ನಿ ಪಾವತಿ ಮಾಡುತ್ತಾರೆ ಎಂದು ಮೆಂಟಾ, ಮಾಲೀಕರಿಗೆ ತಿಳಿಸಿದ್ದರು. ಆ ಬಳಿಕ ಮನೆ ಮಾಲೀಕ ನನ್ನ ಪತ್ನಿಯ ಲಿಂಕ್ಡ್‌ ಇನ್‌ ಮಾಹಿತಿಯನ್ನೂ ಪಡೆದುಕೊಂಡಿದಲ್ಲದೆ, ಅದು ಹೆಚ್ಚಾಗಿ ಅಪ್‌ಡೇಟ್‌ ಆಗಿಲ್ಲ ಎನ್ನುವ ಮಾಹಿತಿಯನ್ನೂ ನೀಡಿದ್ದರು. ಉನ್ನತ ಜನರಿಗೆ ಮಾತ್ರವೇ ತಮ್ಮ ಮನೆಯನ್ನು ಬಾಡಿಗೆ ನೀಡುವುದಾಗಿ ಅವರು ಈ ವೇಳೆ ತಿಳಿಸಿದ್ದರು ಎಂದು ಬರೆದುಕೊಂಡಿದ್ದಾರೆ.

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

ಇದೆ ವೇಳೆ ವ್ಯವಹಾರ ನಡೆಸುವಾಗ ಹುಷಾರಾಗಿರಿ ಎನ್ನುವ ಸಲಹೆಯನ್ನೂ ಸಂದರ್ಶನದ ಸಮಯದಲ್ಲಿ ಮನೆ ಮಾಲೀಕರು ನೀಡಿದ್ದರು ಎಂದು ನೀರಜ್‌ ಮೆಂಟಾ ಬರೆದಿದ್ದಾರೆ. ಇಷ್ಟೆಲ್ಲಾ ಆದ ಬಳಿಕ, ಒಂದೆರಡು ದಿನದಲ್ಲಿ ನಿಮಗೆ ಕರೆ ಮಾಡುತ್ತೇನೆ ಎಂದ ಮಾಲೀಕ, ಈ ಅವಧಿಯಲ್ಲಿ ಇದೇ ಮನೆ ಬೇಕು ಎಂದಿರುವ ಕೆಲವರ ಸಂದರ್ಶನ ಮಾಡೋದಾಗಿ ತಿಳಿಸಿದ್ದರು. ಇಡೀ ಸಂದರ್ಶನವನ್ನು ನೋಡುತ್ತಿದ್ದ ನನ್ನ ಪತ್ನಿ ಬಹುಶಃ ಯಾವುದೋ ಹೂಡಿಕೆದಾರರ ಜೊತೆಗಿನ ಮೀಟಿಂಗ್‌ ಎಂದು ಭಾವಿಸಿದ್ದಳು ಎಂದಿದ್ದಾರೆ. ಕೊನೆಯಲ್ಲಿ ತಾವು ಈ ಫ್ಲ್ಯಾಟ್‌ಅನ್ನು ಪಡೆದುಕೊಂಡಿದ್ದು, ಅದಕ್ಕೆ ಶಿಫ್ಟ್‌ ಆಗಿದ್ದಾಗಿಯೂ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

BGS ಕಾಲೇಜು ವಿದ್ಯಾರ್ಥಿಯ ಅದ್ಭುತ ಸಂಶೋಧನೆ: 'HybridEcoISA' ತಂತ್ರಜ್ಞಾನಕ್ಕೆ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ!
Internal Reservation Row: ಸಿಎಂ ನೇತೃತ್ವದಲ್ಲಿ ದಲಿತ ಸಚಿವರ ಮಹತ್ವದ ಸಭೆ, ಮೂರು ಮಹತ್ವದ ನಿರ್ಧಾರ, ರಾಜಭವನಕ್ಕೆ ಸಚಿವರ ನಿಯೋಗ ದೌಡು!