
ಮಂಗಳೂರು (ಸೆ.9) ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಉಪಮೇಯರ್ ಆಗಿ ಸುನಿತಾ ಅವಿರೋಧ ಆಯ್ಕೆಯಾಗಿದ್ದಾರೆ. ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸ್ಥಾನಕ್ಕೆ ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಚುನಾವಣೆ ನಡೆಯಿತು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಪಾಲಿಕೆಯ ಒಟ್ಟು 60 ಸದಸ್ಯರ ಪೈಕಿ 44 ಮಂದಿ ಸದಸ್ಯ ಬಲದೊಂದಿಗೆ ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿದಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ಮೀಸಲಿನ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಾಂಗ್ರೆಸ್ನಿಂದ ನವೀನ್ ಡಿ’ಸೋಜಾ ನಾಮಪತ್ರ ಸಲ್ಲಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ ಮತ್ತು ಬಿಜೆಪಿ 44 ಸದಸ್ಯರ ಮತಗಳನ್ನು ಒಳಗೊಂಡಂತೆ ಒಟ್ಟು 47 ಮತಗಳನ್ನು ಪಡೆದ ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಆಗಿ ಆಯ್ಕೆಯಾದರು. ನವೀನ್ ಡಿಸೋಜಾ ಅವರು 14 ಮತಗಳನ್ನು ಪಡೆದುಕೊಂಡರು.
ಧರ್ಮಗಳ ಸಂದೇಶ ಒಗ್ಗಟ್ಟೇ ವಿನಾಃ ಬಿಕ್ಕಟ್ಟು ಅಲ್ಲ: ಸ್ಪೀಕರ್ ಖಾದರ್
ಪರಿಶಿಷ್ಟ ಜಾತಿ ಮೀಸಲು ಸ್ಥಾನದ ಉಪಮೇಯರ್ ಸ್ಥಾನಕ್ಕೆ ಸುನೀತಾ ಅವಿರೋಧವಾಗಿ ಆಯ್ಕೆಯಾದರು.
ವಿವಿಧ 4 ಸ್ಥಾಯಿ ಸಮಿತಿಗಳಿಗೆ ತಲಾ 7 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಪ್ರಾದೇಶಿಕ ಆಯುಕ್ತರು ಘೋಷಿಸಿದರು. ಎಸ್ಡಿಪಿಐನ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದೆ ತಟಸ್ಥವಾಗುಳಿದರು. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹುದ್ದೆ, ಮಂಗಳೂರು ಉತ್ತರಕ್ಕೆ ಉಪಮೇಯರ್ ಹುದ್ದೆ ಸಿಕ್ಕಿದೆ.
ಪಾಲಿಕೆಯೆಂಬ ದೇವಸ್ಥಾನದಲ್ಲಿ ಧರ್ಮದರ್ಶಿಯಂತೆ ಕೆಲಸ: ಸುಧೀರ್ ಶೆಟ್ಟಿ ಕಣ್ಣೂರು
ಮಂಗಳೂರು ಮಹಾನಗರ ಪಾಲಿಕೆಯನ್ನು ಜನಸ್ನೇಹಿಯಾಗಿಸಲು ಹೆಚ್ಚಿನ ಒತ್ತು ನೀಡವಾಗುವುದು. ಪಾಲಿಕೆ ಎಂಬ ದೇವಸ್ಥಾನದಲ್ಲಿ ಧರ್ಮದರ್ಶಿಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ನೂತನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಗರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದರೊಂದಿಗೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಲಾಗುವುದು. ಮಂಗಳೂರು ಮಹಾನಗರ ಪಾಲಿಕೆಯನ್ನು ಆದರ್ಶ ಪಾಲಿಕೆಯಾಗಿಸುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ಪಾಲಿಕೆಯಲ್ಲಿ ಪ್ರತಿದಿನ ಸಂಜೆ 3.30ರಿಂದ ಸಂಜೆ 6.30ರ ವರೆಗೆ ಇದ್ದು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಾಗುವುದು. ಜನಸೇವೆಯೇ ನನ್ನ ಗುರಿ. ಪ್ರಧಾನ ಸೇವಕನಂತೆ ಜನತೆಯ ಕೆಲಸ ಮಾಡುತ್ತೇನೆ. ಪ್ರಗತಿ ಪರಿಶೀಲನಾ ಸಭೆ ನಡೆಸುವುದರೊಂದಿಗೆ ನೂರಕ್ಕೆ ನೂರು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಸ್ಮಾರ್ಟ್ ಸಿಟಿ ಮತ್ತು ಅಮೃತ್ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ಸುಧೀರ್ ಶೆಟ್ಟಿ ತಿಳಿಸಿದರು.
ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ: ವಿಸಿ ಭೇಟಿಯಾದ ನಿಯೋಗ !
ನಗರದ ಒಳಚರಂಡಿ ಸಮಸ್ಯೆ ಬಗೆಹರಿಸುವುದು ಮತ್ತು ಅಡ್ಯಾರ್ ಡ್ಯಾಂನಿಂದ ನಗರಕ್ಕೆ ನೀರು ಪೂರೈಸುವ ವ್ಯಸ್ಥೆಯನ್ನು ಆದ್ಯತೆಯ ನೆಲೆಯಲ್ಲಿ ಮಾಡಲಾಗುವುದು ಎಂದವರು ಹೇಳಿದರು.
ನೂತನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸತತ ಮೂರನೇ ಬಾರಿಗೆ ಮಂಗಳೂರು ಮಹಾ ನಗರ ಪಾಲಿಕೆಗೆ ಆಯ್ಕೆಯಾಗಿದ್ದು, ಕೊಡಿಯಾಲ್ಬೈಲ್ ವಾರ್ಡ್ನಿಂದ ಸ್ಪರ್ಧಿಸಿ ಮೂರನೇ ಬಾರಿಗೆ ಆಯ್ಕೆಯಾದರು. ಪಾಲಿಕೆಯ ಪ್ರತಿಪಕ್ಷ ನಾಯಕನಾಗಿ, ಮುಖ್ಯ ಸಚೇತಕನಾಗಿ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ದ.ಕ.ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಆರ್ಎಸ್ಎಸ್ನಲ್ಲಿ ಬೆಳೆದು ಬಂದಿರುವ ಸುಧೀರ್ ಶೆಟ್ಟಿಯವರು ಪ್ರಾಮಾಣಿಕವಾಗಿ ನಗರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ. ಉಪಮೇಯರ್ ಆಗಿರುವ ಸುನೀತಾ ಅವರು ಆಶಾ ಕಾರ್ಯಕರ್ತೆಯಾಗಿ, ಸಮಾಜಸೇವಕಿಯಾಗಿ ಕೆಲಸ ಮಾಡಿದವರು. ಅಭಿವೃದ್ಧಿಯಲ್ಲಿ ಅವರ ಸಹಕಾರವೂ ದೊರೆಯಲಿದೆ. ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷವೆಂಬುದಿಲ್ಲ, ಆಡಳಿತ ಮತ್ತು ಪ್ರತಿಪಕ್ಷಗಳು ಜೊತೆಯಾಗಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕು.
-ನಳಿನ್ ಕುಮಾರ್ ಕಟೀಲ್, ಸಂಸದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ