
ಬೆಂಗಳೂರು (ಡಿ.4): ಉಪನಗರ ರೈಲ್ವೆ ಯೋಜನೆಯನ್ನು ಅಕ್ಕಪಕ್ಕದ ಜಿಲ್ಲೆ, ನಗರಗಳಿಗೆ ಸಂಪರ್ಕಿಸುವ ಕುರಿತ ಪೂರ್ವ ಕಾರ್ಯಸಾಧ್ಯತೆ ವರದಿ ರೂಪಿಸುವ ಪ್ರಸ್ತಾವನೆ ತಿರಸ್ಕರಿಸಿರುವ ನೈಋತ್ಯ ರೈಲ್ವೆ ವಲಯದ ಧೋರಣೆ ಖಂಡಿಸಿರುವ ಸಿಟಿಜನ್ಸ್ ಫಾರ್ ಸಿಟಿಜನ್ಸ್ (ಸಿ4ಸಿ) ಸಂಸ್ಥೆ, ಪ್ರಸ್ತಾವನೆಗೆ ಒಪ್ಪಿಗೆ ನೀಡುವಂತೆ ರೈಲ್ವೆ ಮಂಡಳಿಗೆ ಪತ್ರ ಬರೆದಿದೆ.
ಬೆಂಗಳೂರು ಮಹಾನಗರ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕ ಬೆಸೆಯುವ ಉದ್ದೇಶ ಹೊಂದಿರುವ ಉಪನಗರ ರೈಲ್ವೆ ಯೋಜನೆಗೆ ನೈಋತ್ಯ ರೈಲ್ವೆ ಅಡ್ಡಗಾಲು ಹಾಕುವುದು ಸರಿಯಲ್ಲ. ಅಲ್ಲದೆ ನೈಋತ್ಯ ರೈಲ್ವೆ ಸ್ಥಳೀಯ ಸಂಪರ್ಕ ಒದಗಿಸಲು ಮೆಮು ರೈಲುಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ದೇವನಹಳ್ಳಿವರೆಗೆ ಓಡುವ ಮೆಮು ರೈಲು ಖಾಲಿ ಸಂಚರಿಸುತ್ತದೆ. ಆದರೆ, ವಿದ್ಯುದೀಕರಣ ಆಗಿದ್ದರೂ ಚಿಕ್ಕಬಳ್ಳಾಪುರದವರೆಗೆ ಅದನ್ನು ಓಡಿಸುತ್ತಿಲ್ಲ. ಇದರಿಂದ ಬೆಂಗಳೂರಿನ ಕಡೆಗೆ ಬರುವ ಸಾವಿರಾರು ವಿದ್ಯಾರ್ಥಿಗಳು, ರೈತರಿಗೆ ಅನುಕೂಲವಿದ್ದರೂ ನೈಋತ್ಯ ರೈಲ್ವೆ ಇದನ್ನು ವಿಸ್ತರಿಸದೆ ನಿರ್ಲಕ್ಷ್ಯ ತೋರುತ್ತಿದೆ. ದಂಡು ರೈಲ್ವೆ ನಿಲ್ದಾಣದಿಂದ ಹೀಲಲಿಗೆವರೆಗೆ ರೈಲು ಸಂಚರಿಸಲು ಮುಂದಾಗುತ್ತಿಲ್ಲ.
ಮುಂದಿನ 3 ತಿಂಗಳು ರಾಜ್ಯದ ಈ ಜಿಲ್ಲೆಗಳ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರ ರದ್ದು
ಹೀಗಿರುವಾಗ, ಸ್ಥಳೀಯ ರೈಲ್ವೆ ಮಾರ್ಗ ಅಭಿವೃದ್ಧಿಗೆ ಕೆ ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಕಂಪನಿ) ಮಾಡಲು ಹೊರಟಿರುವ ಕೆಲಸಕ್ಕೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡದಿರುವುದು ತಪ್ಪು ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ. ಯೋಜನೆಯ ಕುರಿತ ನೈಋತ್ಯ ರೈಲ್ವೆಯ ವಾದ ಸರಿಯಲ್ಲ, 2-3 ಕಿ.ಮೀ.ಗೆ ಒಂದರಂತೆ ನಿಲ್ದಾಣ ಇರುವಾಗ ಸ್ಥಳೀಯ ರೈಲುಗಳನ್ನು 120-130 ಕಿ.ಮೀ. ವೇಗದಲ್ಲಿ ಓಡಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನೈಋತ್ಯ ರೈಲ್ವೆಯ ಅತೀವೇಗದ ರೈಲುಗಳು ಕೂಡ ಅಷ್ಟು ವೇಗದಲ್ಲಿ ಸಂಚರಿಸುತ್ತಿಲ್ಲ.
ಹುಬ್ಬಳ್ಳಿ ಮತ್ತು ಕೊಟ್ಟಾಯಮ್ ನಡುವೆ ವಿಶೇಷ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ, ಶಬರಿಮಲೆ ಹೋಗೋರಿಗೆ ಅನುಕೂಲ
ಹೀಗಾಗಿ ರೈಲ್ವೆ ಮಂಡಳಿ ನೈಋತ್ಯ ರೈಲ್ವೆಯ ವಾದವನ್ನು ತಳ್ಳಿಹಾಕಿ ನೇರವಾಗಿ ಕೆ-ರೈಡ್ ಮನವಿಗೆ ಸ್ಪಂದಿಸಿ ಪೂರ್ವ ಕಾರ್ಯಸಾಧ್ಯತೆ ವರದಿಗೆ ಅಧ್ಯಯನ ನಡೆಸಲು ಅನುಮತಿ ನೀಡಬೇಕು ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥೆಯ ರಾಜ್ಕುಮಾರ್ ದುಗರ್ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ