
‘ಏನ್ರಪ್ಪಾ ಇವತ್ತು ವೈಕುಂಠ ಏಕಾದಶೀನಾ? ಗೋವಿಂದಾ..ಗೋವಿಂದ ಎಂದು ಹೇಳ್ತಾ ಇದ್ದೀರಾ?’
ಮಂಗಳವಾರ ವಿಧಾನಸಭೆಯಲ್ಲಿ ಪೂರಕ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುವ ವೇಳೆ ಆಡಳಿತ ಪಕ್ಷದ ಸದಸ್ಯರು ಗೋವಿಂದಾ ಗೋವಿಂದ ಎಂದಿದ್ದಕ್ಕೆ ಸಭಾಧ್ಯಕ್ಷ ರಮೇಶ್ಕುಮಾರ್ ತುಸು ಗರಂ ಆಗಿ ಹೇಳಿದ್ದು ಹೀಗೆ.
ಸಭಾತ್ಯಾಗ ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಬಿಜೆಪಿ ಸದಸ್ಯರು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಕೇಳಿದರು. ಆಗ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದಾಗ ನಿಮಗೆ ಮತ್ತೇಕೆ ಉತ್ತರ ಕೊಡಬೇಕು ಎಂದು ಹೇಳುತ್ತಾ ಗೋವಿಂದಾ ಗೋವಿಂದ.. ಎಂದು ಕೂಗಲು ಆರಂಭಿಸಿದರು. ಅದಕ್ಕೆ ಸ್ಪೀಕರ್ ರಮೇಶಕುಮಾರ್ ಗರಂ ಆಗಿ ಮೇಲಿನಂತೆ ಹೇಳಿದರು.
ಇದು ವಿಧಾನಸಭೆ. ತಿರುಪತಿ ಅಲ್ಲ. ತಿರುಪತಿಯಾಗಿದ್ದರೆ ನನಗೂ ನಿಮಗೂ ಪುಣ್ಯ ಬರುತ್ತಿತ್ತು. ಪ್ರಜಾಪ್ರಭುತ್ವದಲ್ಲಿ ಗೋವಿಂದ ಗೋವಿಂದ ಎಂದರೆ ಮಾರಾಮಾರಿ ನಡೆಯುತ್ತೆ. ಎಲ್ಲರೂ ಸುಮ್ಮನೆ ಕುಳಿತುಕೊಳ್ಳಿ. ವಿಪಕ್ಷದವರು ಸಭಾತ್ಯಾಗ ಮಾಡಿದ್ದಾರೆ. ಅವರ ಸಂಖ್ಯೆ ದೊಡ್ಡದು. ಹೊರಗೆ ಹೋಗಲು ಬಿಡಿ ಎಂದು ಹೇಳಿದರು. ಆಗ ಎಲ್ಲ ಸದಸ್ಯರು ಸುಮ್ಮನೆ ಕುಳಿತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ