
ಬೆಂಗಳೂರು(ನ.15): ರಾಜ್ಯ ಸರ್ಕಾರವು ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಶಾಕ್ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಕೊರೋನಾ ಭ್ರಷ್ಟಾಚಾರದ ಕುರಿತು ನ್ಯಾ. ಮೈಕಲ್ ಡಿ ಕುನ್ಹಾ ಆಯೋಗದ ವರದಿ ಆಧರಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ನಿರ್ಧಾರ ಮಾಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ತನಿಖೆಗೆ ಐಜಿಪಿ ದರ್ಜೆ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ. 'ಕುನ್ಹಾ ಆಯೋಗವು ಬಿಜೆಪಿಯ ಅವಧಿಯ ಕೊರೋನಾ ಭ್ರಷ್ಟಾ ಚಾರವನ್ನು ಎಳೆಎಳೆಯಾಗಿ ತನ್ನ ಮಧ್ಯಂತರ ವರದಿಯಲ್ಲಿ ಬಿಡಿಸಿಟ್ಟಿದೆ.
ಕೋವಿಡ್ನಲ್ಲಿ ಹಗರಣ ಆಗಿದ್ದರೆ ತನಿಖೆ ಮಾಡಲಿ: ಪ್ರಹ್ಲಾದ್ ಜೋಶಿ
ಕೋಟ್ಯಂತರ ರು. ಲೂಟಿ ಜತೆಗೆ 1.24 ಲಕ್ಷ ಜನರ ಸಾವನ್ನು ಮುಚ್ಚಿಟ್ಟು ಘೋರ ಅಪರಾಧ ಎಸಗಿರುವುದು ಬಹಿರಂಗಗೊಂಡಿದೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಬಿದ್ದರೆ ಎಫ್ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಎಸ್ ಐಟಿ ರಚನೆ ಮಾಡಲಾಗಿದೆ' ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಟೀಲ್, 'ಕೊರೋನಾ ಅವಧಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಜನ ಸಾಯುತ್ತಿದ್ದರೆ ಬಿಜೆಪಿ ಸರ್ಕಾರ ಹಣ ಲೂಟಿಯಲ್ಲಿ ಮಗ್ನವಾಗಿತ್ತು. ಈ ಬಗ್ಗೆ ಸಾರ್ವಜನಿಕರ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿ ಪರಿಶೀಲನೆಗೆ ಮುಂದಾದಾಗ ಅಡ್ಡಿ ಉಂಟು ಮಾಡಿತ್ತು. ಇದೀಗ ಕುನ್ಹಾ ವರದಿ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ' ಎಂದು ಹೇಳಿದರು.
ಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರ: ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ
330 ರಿಂದ 400 ರು. ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್ ಗಳನ್ನು 2117 ರು. ನೀಡಿ 3 ಲಕ್ಷ ಕಿಟ್ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಜತೆಗೆ ಖಾಸಗಿ ಲ್ಯಾಬ್ ಗಳಿಗೆ ಅಕ್ರಮವಾಗಿ 6.93 ಕೋಟಿ ರು. ಅಕ್ರಮವಾಗಿ ಸಂದಾಯ ಮಾಡಲಾಗಿದೆ. ಪ್ರಚಾರಕ್ಕಾಗಿ ಇಟ್ಟಿದ್ದ 7.03 ಕೋಟಿ ರು.ಗಳಲ್ಲೂ ಅಕ್ರಮ ನಡೆಸಿದ್ದು ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ 68 ಲಕ್ಷ 85 ಸಾವಿರ ನಿಯಮ ಬಾಹಿರವಾಗಿ ಪಾವತಿ ಮಾಡಲಾಗಿದ್ದು, ೬5 ಕೋಟಿ ವೆಚ್ಚದ ಬಗ್ಗೆ ದಾಖಲೆಗಳೇ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಸಾವಿನ ಬಗ್ಗೆ ಸರಿಯಾಗಿ ಲೆಕ್ಕ ಕೊಡದೇ ಸಾವಿನ ಲೆಕ್ಕ ಪರಿಶೋಧನೆ ನಡೆಸದೇ ನೈಜ ಸಾವಿನ ಸಂಖ್ಯೆಗಳನ್ನು ಮುಚ್ಚಿಡಲಾಗಿದೆ. ಈ ಎಲ್ಲಾ ಅವ್ಯವಹಾರಗಳಲ್ಲಿನ ಅಪರಾಧಿ ಅಂಶಗಳನ್ನು ತನಿಖೆ ಮಾಡಿ ಎಫ್ಐಆರ್ ದಾಖಲಿಸಿ, ದೋಷಾರೋಪಪಟ್ಟಿಮತ್ತು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಮಾಡಲು ಸಚಿವ ಸಂಪುಟ ಈ ತೀರ್ಮಾನ ಮಾಡಿದೆ' ಎಂದು ವಿವರಿಸಿದರು. '
ಚೀನಾ ಕಂಪನಿಗಳೊಂದಿಗೆ ನಡೆಸಿದ ಅಕ್ರಮ ವ್ಯವಹಾರದ ಬಗ್ಗೆ ರಾಜ್ಯ ಪೊಲೀಸರು ಹೇಗೆ ತನಿಖೆ ನಡೆಸುತ್ತಾರೆ?' ಎಂಬ ಪ್ರಶ್ನೆಗೆ, 'ಅಕ್ರಮದ ಬಗ್ಗೆ ತನಿಖೆ ನಡೆಸಲು ಚೀನಾಗೆ ಹೋಗಬೇಕಾಗಿಲ್ಲ. ಚೀನಾದಿಂದ ಪಿಪಿಇ ಕಿಟ್ ಖರೀದಿಸಿರುವ ಮಾಹಿತಿ ಹಾಗೂ ಅಕ್ರಮವಾಗಿ ಮುಂಗಡ ಹಣ ಪಾವತಿಸಿರುವ ವಿವರಗಳೆಲ್ಲವೂ ಇಲ್ಲೇ ಲಭ್ಯವಾಗುತ್ತವೆ. ಹೀಗಾಗಿ ಪೊಲೀಸ್ ಎಸ್ಐಟಿಯೇ ಸಮರ್ಥವಾಗಿ ತನಿಖೆ ನಡೆಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ