ಬಡವರು ಸೈಟ್‌ ಖರೀದಿಗೆ ಸರಳ ಕಾನೂನು: ಸಿಎಂ ಬೊಮ್ಮಾಯಿ ಭರವಸೆ

By Kannadaprabha NewsFirst Published Feb 1, 2023, 7:46 AM IST
Highlights

ಬಡವರು ನಿವೇಶನ ಖರೀದಿಗೆ ಹಾಗೂ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಬೆಂಗಳೂರು (ಫೆ.01): ಬಡವರು ನಿವೇಶನ ಖರೀದಿಗೆ ಹಾಗೂ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಯಲಹಂಕ ತಾಲೂಕಿನ ಅಗ್ರಹಾರಪಾಳ್ಯದಲ್ಲಿ ಮಂಗಳವಾರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿ ಹಸ್ತಾಂತರ ಮಾಡಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. 

ಭೂಮಿಯ ಬೇಡಿಕೆ ಹೆಚ್ಚಾಗಿದೆ. ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿ ಇಲ್ಲ. ಹೀಗಾಗಿ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ಸರಳೀಕರಣ ಮಾಡಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲಾ ಕಾನೂನನ್ನು ಸರಳೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉತ್ಸವಕ್ಕೆ ಕೋಟಿ ಖರ್ಚು ಮಾಡುವಿರಿ: ಶಾಲಾ ಸಮವಸ್ತ್ರ ಕೊಡದ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ತಾನು ಹಾಗೂ ತನ್ನ ಕುಟುಂಬ ಒಂದು ಸೂರಿನಡಿ ಗೌರವದಿಂದ ಬದುಕಬೇಕೆನ್ನುವುದು ಪ್ರತಿ ಮನುಷ್ಯನ ಬಯಕೆ ಆಗಿದೆ. ಮನುಷ್ಯ ಮಾತ್ರವಲ್ಲದೇ ಪಕ್ಷಿಗಳು ಒಂದು ಗೂಡು ಕಟ್ಟಿ, ಸಂಸಾರ ಮಾಡುವುದು ಕಾಣುತ್ತೇವೆ. ಪಕ್ಷಿಗಳಿಗೆ ಇರುವ ಸೌಭಾಗ್ಯ ಮನುಷ್ಯರಿಗೂ ಇರಬೇಕು ಎಂದರು. ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಶಾಸಕ ಸಿದ್ದು ಸವದಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನಾಗರಾಜ್‌, ವಸತಿ ಇಲಾಖೆ ಕಾರ್ಯದರ್ಶಿ ಡಾ ಜೆ.ರವಿಶಂಕರ್‌, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಉಪಸ್ಥಿತರಿದ್ದರು.

5 ಲಕ್ಷ ಮನೆಗಳು ಅಂತಿಮ ಹಂತದಲ್ಲಿ: ಘೋಷಣೆಗಳು ಬಹಳಷ್ಟುಆಗುತ್ತವೆ. ಅದಕ್ಕೆ ಹಣ ಮೀಸಲಿಡಬೇಕು. ಆರು ವರ್ಷಗಳ ಹಿಂದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಣೆಯಾಯಿತು. ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು. .5 ಸಾವಿರ ಕೋಟಿ ಅಗತ್ಯವಿದ್ದರೆ, .3 ಸಾವಿರ ಕೋಟಿ ಮೀಸಲಿಟ್ಟರು. ಅಗತ್ಯವಿರುವಷ್ಟುಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಪ್ರಸ್ತುತ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ವಿ.ಸೋಮಣ್ಣ ವಸತಿ ಸಚಿವರಾದ ಬಳಿಕ ಗೃಹ ನಿರ್ಮಾಣಕ್ಕೆ ಒಂದು ರೂಪುರೇಷೆ ನೀಡಿ, ಬಾಕಿ ಇರುವ ಮನೆಗಳ ನಿರ್ಮಾಣ ಮಾಡುತ್ತಿದ್ದಾರೆ. ಆಯ್ಕೆಯಾಗಿದ್ದ ಅನರ್ಹರನ್ನು ತೆಗೆಯಲು ವಿಶೇಷ ಸಾಫ್ಟ್‌ವೇರ್‌ ಅಳವಡಿಸಿದ್ದರು. ಗ್ರಾಮೀಣ ಪ್ರದೇಶದ ಮನೆಗಳ ನಿರ್ಮಾಣಕ್ಕೆ ಕೈಗೊಂಡು ಈ ವರ್ಷ 5 ಲಕ್ಷ ಮನೆಗಳ ನಿರ್ಮಾಣ ಮಾಡಿ ಅಂತಿಮ ಹಂತಕ್ಕೆ ತಂದಿದ್ದಾರೆ ಎಂದು ಹೇಳಿದರು. ಇನ್ನು ವಿಶ್ವನಾಥ ಶಾಸಕರಾದ ಮೇಲೆ ಯಲಹಂಕ ಚಿತ್ರಣವೇ ಬದಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಆಗುವ ಕೆಲಸವನ್ನು ಈಗಲೇ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಪುಕ್ಕಟ್ಟೆ ಕೊಟ್ಟರೆ ಜನ ನಂಬುವುದಿಲ್ಲ: ಎಲ್ಲವನ್ನೂ ಪುಕ್ಕಟ್ಟೆಯಾಗಿ ನೀಡಿದ್ದೇವೆ ಎಂದರೆ ಜನ ನಂಬುವ ಸ್ಥಿತಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಪಕ್ಷದಿಂದ ಉಚಿತ ಯೋಜನೆ ಘೋಷಣೆಗೆ ಟಾಂಗ್‌ ನೀಡಿದ್ದಾರೆ. ಜನರನ್ನು ಭ್ರಮಾ ಲೋಕದಲ್ಲಿಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಜನರು ಬುದ್ಧಿವಂತರಿದ್ದಾರೆ, ಜಾಗೃತರಾಗಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. 

ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು. ಎಲ್ಲಾ ಸಮಯದಲ್ಲಿ ಎಲ್ಲರನ್ನೂ ಮೋಸ ಮಾಡಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ತೆರಿಗೆ ಮೂಲಕ ಬರುವ ಹಣವನ್ನು ಎಲ್ಲಿ ಉಪಯೋಗಿಸಬೇಕು. ದೀನ ದಲಿತರಿಗೆ ವಿಶೇಷವಾಗಿರುವ ಕಾರ್ಯಕ್ರಮ ರೂಪಿಸಬೇಕು. ಜನಪ್ರಿಯತೆಗಾಗಿ, ಅಧಿಕಾರಕ್ಕೆ ಬರಬೇಕೆಂದು ಹತಾಶರಾಗಿ ಇಡೀ ವ್ಯವಸ್ಥೆಯನ್ನು ನಾವು ಕೆಡಿಸುವ ಲೆಕ್ಕದಲ್ಲಿ ಮಾತನಾಡಬಾರದು. ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯಿಂದ ಹಣ ಸುಲಿದ ಹೋಮ್ ಗಾರ್ಡ್ ಜೈಲಿಗೆ

ಬೆಳೆಯುತ್ತಿರುವ ನಾಗರಿಕತೆಯಲ್ಲಿ ಬಡವರಿಗೆ ಪುಟ್ಟಮನೆ ಕಟ್ಟಿಕೊಡುವ ಅವಕಾಶ ಸಮಾಜ ಮಾಡಬೇಕು. ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ, ಪರಿಹಾರ ಕೊಟ್ಟು ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಕೆಲಸ ಮಾಡಲಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಹಿಂದಿನ ಸರ್ಕಾರದ ಯೋಜನೆಗಳು ಕೇವಲ ಕಾಗದ ಮಾತ್ರ ಇದ್ದವು. ವಸತಿ ಇಲಾಖೆಯಲ್ಲಿ ಯಾವುದೇ ಕೆಲಸ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 52 ಸಾವಿರ ಮನೆ ನಿರ್ಮಾಣ ಕಾರ್ಯದ ಅಂತಿಮ ಹಂತಕ್ಕೆ ತಲುಪಿದ್ದೇವೆ. ಇಂದು 5 ಸಾವಿರ ಮನೆ ಹಂಚಿ ಮಾಡುತ್ತಿದ್ದೇವೆ.
-ವಿ.ಸೋಮಣ್ಣ, ವಸತಿ ಸಚಿವ.

click me!