Vijayapura: ಆಶ್ರಮದಲ್ಲೇ ತಾಯಿಗೆ ಪೂಜೆ ಸಲ್ಲಿಸಿದ್ದ ಸಿದ್ದೇಶ್ವರ ಶ್ರೀ!

By Govindaraj SFirst Published Jan 4, 2023, 8:26 AM IST
Highlights

ಸಿದ್ದೇಶ್ವರ ಶ್ರೀಗಳಿಗೆ ತಂದೆ ಹಾಗೂ ಬಂಧು ಬಳಗವಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಅವರ ಕುಟುಂಬದ ಮನೆಯೂ ಇದೆ. ವಿಜಯಪುರದಿಂದ ಅವರ ಊರಿಗೆ ಕೇವಲ 40 ನಿಮಿಷಗಳಲ್ಲಿ ಹೋಗಿ ಬರಬಹುದು. 

ವಿಜಯಪುರ (ಜ.04): ಸಿದ್ದೇಶ್ವರ ಶ್ರೀಗಳಿಗೆ ತಂದೆ ಹಾಗೂ ಬಂಧು ಬಳಗವಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಅವರ ಕುಟುಂಬದ ಮನೆಯೂ ಇದೆ. ವಿಜಯಪುರದಿಂದ ಅವರ ಊರಿಗೆ ಕೇವಲ 40 ನಿಮಿಷಗಳಲ್ಲಿ ಹೋಗಿ ಬರಬಹುದು. ಆದರೂ ಅವರು ತಮ್ಮ ಪೂರ್ವಾಶ್ರಮದ ಕುಟುಂಬದ ಕಡೆಗೆ ಹೊರಳಿ ಕೂಡ ನೋಡಿದವರಲ್ಲ. ಅವರ ತಾಯಿ ಮೃತಪಟ್ಟಸಂದರ್ಭದಲ್ಲೂ ಬಿಜ್ಜರಗಿ ಗ್ರಾಮಕ್ಕೆ ಹೋಗಿರಲಿಲ್ಲ. ಆಶ್ರಮದಲ್ಲೇ ಪೂಜೆ ಸಲ್ಲಿಸಿ ತಾಯಿಗೆ ನಮನ ಸಲ್ಲಿಸಿದ್ದರು. 

ಸಿದ್ದೇಶ್ವರ ಶ್ರೀಗಳ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಕಾಲಾವಧಿಯಲ್ಲಿ ಭಕ್ತರು 20 ಎಕರೆ ಜಾಗ ಖರೀದಿಸಿ ಆಶ್ರಮ ಸ್ಥಾಪಿಸಿದ್ದರು. ಈ ಆಶ್ರಮದಲ್ಲಿ ಅಂಥ ಭಾರೀ ಹವಾನಿಯಂತ್ರಿತ ಕಟ್ಟಡಗಳಿಲ್ಲ. ಒಂದೆರಡು ವಾಸಿಸಲು ಹಾಗೂ ಪ್ರಸಾದ ಸಿದ್ದಪಡಿಸಲು ಕೋಣೆಗಳಿವೆ. ಇವುಗಳನ್ನು ಹೊರತುಪಡಿಸಿದರೆ ಅಲ್ಲಿ ದೊಡ್ಡ ದೊಡ್ಡ ಕೋಣೆಗಳಿಲ್ಲ. ಈ ಜಾಗದಲ್ಲಿ ಎಲ್ಲವೂ ನಾನಾ ರೀತಿಯ ಗಿಡ ಮರಗಳನ್ನು ಬೆಳೆಸಲಾಗಿದೆ. 

ಕೊಪ್ಪಳ ಗವಿಮಠಕ್ಕೂ ಉಂಟು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ನಂಟು

ಸಿದ್ದೇಶ್ವರ ಶ್ರೀಗಳು ತಮ್ಮ ಗುರುಗಳಾದ ವೇದಾಂತ ಕೇಸರಿ ಕಾಲವಾದ ನಂತರವೂ ಅದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಟ್ಟಡ ಕಟ್ಟಲು ಗಮನ ಹರಿಸಲಿಲ್ಲ. ಸರ್ಕಾರ ನೀಡಿದ ಹಣವನ್ನು ನಯವಾಗಿಯೇ ತಿರಸ್ಕಾರ ಮಾಡುವ ಮೂಲಕ ಆದರ್ಶ ಮೆರೆದಿದ್ದರು. ಆದರೆ, ಶ್ರೀಗಳು ಪರಿಸರಪ್ರಿಯರಾಗಿದ್ದರಿಂದ ಜ್ಞಾನಯೋಗಾಶ್ರಮದಲ್ಲಿ ಗಿಡ, ಮರಗಳನ್ನು ಬೆಳೆಸಿದ್ದಾರೆ. ಕಿರಿಯ ಸ್ವಾಮಿಗಳಿಗೆ ದಿನಂಪ್ರತಿ ಒಂದು ತಾಸು ಇಂಗ್ಲಿಷ್‌ನಲ್ಲಿ ಪಾಠ ಪ್ರವಚನ ಹೇಳುತ್ತಿದ್ದರು. ಕನ್ನಡದಲ್ಲಿಯೂ ಕಿರಿಯ ಶ್ರೀಗಳಿಗೆ ಪ್ರವಚನದ ಮೂಲಕ ಜ್ಞಾನದ ಹಸಿವನ್ನು ಹಿಂಗಿಸುತ್ತಿದ್ದರು. ಆಶ್ರಮಕ್ಕೆ ಬರುವ ಭಕ್ತರಿಗೆ ನಿರಂತರ ಅನ್ನದಾಸೋಹಕ್ಕೆ ಸಿದ್ದೇಶ್ವರ ಶ್ರೀಗಳು ವ್ಯವಸ್ಥೆ ಮಾಡಿದ್ದರು.

ನಾನಾ ಭಾಷೆಗಳಲ್ಲಿ ಪ್ರವಚನ: ದೇಶ, ವಿದೇಶಗಳಿಗೆ ತೆರಳಿ ಕನ್ನಡ, ಮರಾಠಿ, ಆಂಗ್ಲ ಮತ್ತಿತರ ಭಾಷೆಗಳಲ್ಲಿ ನಿರರ್ಗಳವಾಗಿ ಅವರು ಪ್ರವಚನ ಹೇಳುತ್ತಿದ್ದರು. ಸಿದ್ದೇಶ್ವರ ಶ್ರೀಗಳು ಪ್ರವಚನದ ಮೂಲಕ ಜನ ಸಾಮಾನ್ಯರಲ್ಲಿ ಜ್ಞಾನದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಅಂಧಕಾರ ಮುಳುಗಿದ ಲಕ್ಷಾಂತರ ಮನಗಳಲ್ಲಿ ಜ್ಞಾನ ದೀವಿಗೆ ಕೊಟ್ಟು ಹೋಗಿದ್ದಾರೆ. ಮನುಷ್ಯ ಜೀವನ ಪಡೆದುಕೊಂಡು ಮನುಷ್ಯರಾಗಿ ಬದುಕುವುದು ಹೇಗೆ ಎಂದು ತೋರಿಸಿಕೊಟ್ಟವರು ಶ್ರೀಗಳು. ಸಿದ್ದೇಶ್ವರ ಶ್ರೀಗಳಿಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದರೂ ಅದನ್ನು ನಯವಾಗಿ ನಿರಾಕರಿಸಿದರು. ಪ್ರವಚನ ಪ್ರಭಾವಕ್ಕೆ ಒಳಗಾದ ಭಕ್ತರು ಹಣ ನೀಡಲು ಮುಂದೆ ಬಂದರೂ ಅದನ್ನು ಮುಟ್ಟುತ್ತಿರಲಿಲ್ಲ. ಪ್ರೀತಿಯಿಂದಲೇ ಅದನ್ನು ಹಿಂತಿರುಗಿಸುತ್ತಿದ್ದ ವಿರಾಗಿ ಸಂತರಾಗಿದ್ದರು.

ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

ಶ್ರೀಗಳ ಕುಟುಂಬದ ಪರಿಚಯ: ತಿಕೋಟಾ ತಾಲೂಕಿನ ಬಿಜ್ಜರಗಿ ಶ್ರೀಗಳ ಹುಟ್ಟೂರು. ಶ್ರೀಗಳಿಗೆ ಇಬ್ಬರು ಸಹೋದರರು ಇದ್ದಾರೆ. ಇವರಿಬ್ಬರೂ ಕಿರಿಯ ಸಹೋದರರು. ಒಬ್ಬರು ಬೆಳ್ಳಿಮೋಡ ಪತ್ರಿಕೆಯ ವರದಿಗಾರ ಸೋಮಲಿಂಗ ಪಾಟೀಲ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಮರೇಶ ಇನ್ನೊಬ್ಬರು. ಶ್ರೀಗಳ ಇಬ್ಬರೂ ಕಿರಿಯ ಸಹೋದರರು ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿದ್ದಾರೆ. ಸಿದ್ದೇಶ್ವರರ ಬಳಿಕ ಜನಿಸಿದ ಬಾಳವ್ವ ಲಕ್ಷ್ಮಣ ತೇಲಿ ಜನಿಸಿದರು. ಇವರು ಮಹಾರಾಷ್ಟ್ರದ ಜತ್‌ನಲ್ಲಿ ನೆಲೆಸಿದರೆ, ಸುಮಿತ್ರಾಬಾಯಿ ಮಲಕಪ್ಪ ಸವದಿ ಹಾಗೂ ಲಕ್ಷ್ಮೇಬಾಯಿ ಮದಗೊಂಡ ಮಾಳೇದ ಬಿಜ್ಜರಗಿ ಗ್ರಾಮದಲ್ಲೇ ವಾಸ್ತವ್ಯ ಇದ್ದಾರೆ.

click me!