Corona Crisis: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ

By Govindaraj SFirst Published Jan 4, 2023, 6:42 AM IST
Highlights

ಅಮೆರಿಕದಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಸ್ಫೋಟಕ್ಕೆ ಕಾರಣವಾಗಿದ್ದ ರೂಪಾಂತರಿ ವೈರಸ್‌ ಎಕ್ಸ್‌ಬಿಬಿ.1.5ರ 1 ಪ್ರಕರಣ ಕರ್ನಾಟದಲ್ಲೂ ಪತ್ತೆಯಾಗಿದೆ. ಭಾರತದಲ್ಲಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. 

ನವದೆಹಲಿ (ಜ.04): ಅಮೆರಿಕದಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಸ್ಫೋಟಕ್ಕೆ ಕಾರಣವಾಗಿದ್ದ ರೂಪಾಂತರಿ ವೈರಸ್‌ ಎಕ್ಸ್‌ಬಿಬಿ.1.5ರ 1 ಪ್ರಕರಣ ಕರ್ನಾಟದಲ್ಲೂ ಪತ್ತೆಯಾಗಿದೆ. ಭಾರತದಲ್ಲಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಗುಜರಾತ್‌ನಲ್ಲಿ 3, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ 1 ಕೇಸು ಪತ್ತೆಯಾಗಿದೆ ಎಂದು ಕೋವಿಡ್‌ ವೈರಸ್‌ಗಳ ರೂಪಾಂತರಿಗಳ ಪತ್ತೆಗೆ ಪರೀಕ್ಷೆ ನಡೆಸುವ ‘ಇಂಡಿಯನ್‌ ಸಾ​ರ್‍ಸ್ ಕೋವ್‌ 2 ಜಿನೋಮಿಕ್ಸ್‌ ಕನ್ಸೋರ್ಷಿಯಂ’ (ಇನ್ಸಾಕೋಗ್‌) ಮಂಗಳವಾರ ಹೇಳಿದೆ.

ಎಕ್ಸ್‌ಬಿಬಿ 1.5 ತಳಿಯು, ಒಮಿಕ್ರೋನ್‌ ಎಕ್ಸ್‌ಬಿಬಿ ತಳಿಯ ಉಪತಳಿಯಾಗಿದೆ. ಒಮಿಕ್ರೋನ್‌ನ ಬಿಎ 2.10.1 ಮತ್ತು ಬಿಎ 2.75 ಉಪತಳಿಗಳ ಸಮ್ಮಿಲನದಿಂದ ಎಕ್ಸ್‌ಬಿಬಿ 1.5 ಸೃಷ್ಟಿಯಾಗಿದೆ. ಇದು ತೀವ್ರ ಸೋಂಕುಕಾರಕ. ಅಮೆರಿಕದಲ್ಲಿ ಹೊಸದಾಗಿ ಕಾಣಿಸಿಕೊಂಡ ಕೋವಿಡ್‌ ಪ್ರಕರಣಗಳಲ್ಲಿ ಎಕ್ಸ್‌ಬಿಬಿ ಮತ್ತು ಎಕ್ಸ್‌ಬಿಬಿ.1.5 ಶೇ.44ರಷ್ಟು ಪಾಲು ಹೊಂದಿದ್ದವು ಎಂದು ಇನ್ಸಾಕೋಗ್‌ ಹೇಳಿದೆ.

ಕೋವಿಡ್ ರೂಲ್ಸ್ ಮರೆತ ಬೆಂಗಳೂರು ಜನತೆ: ಸಿಲಿಕಾನ್ ಸಿಟಿ ಬಸ್‌ಗಳಲ್ಲಿ ಮಾಸ್ಕ್ ಮಾಯ

ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಚೀನಾದಲ್ಲಿ ಕೋವಿಡ್‌ ತಾರಕಕ್ಕೇರಿದ ಬೆನ್ನಲ್ಲೇ ಭಾರತ ಸೇರಿ ಹಲವು ದೇಶಗಳು ಚೀನಾದಿಂದ ಬರುವ ಎಲ್ಲ ಪ್ರಯಾಣಕರಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ನಿಯಮಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಪ್ರತಿಯಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. 

‘ಚೀನಾವನ್ನು ಗುರಿಯಾಗಿಸಿಕೊಂಡು ಕೆಲ ದೇಶಗಳು ಅಳವಡಿಸಿಕೊಂಡಿರುವ ಪ್ರವೇಶ ನಿರ್ಬಂಧವು ಯಾವುದೇ ವೈಜ್ಞಾನಿಕ ಆಧಾರ ಹೊಂದಿಲ್ಲ ಹಾಗೂ ಅತಿಯಾದ ವರ್ತನೆಗಳು ಹೆಚ್ಚು ಸ್ವೀಕಾರಾರ್ಹವಲ್ಲ ಎಂದು ನಾವು ನಂಬುತ್ತೇವೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್‌ ಮಂಗಳವಾರ ಹೇಳಿದ್ದಾರೆ. ಅಲ್ಲದೇ ‘ಕೋವಿಡ್‌-19 ನಿಯಮಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ ಹಾಗೂ ಪರಸ್ಪರ ತತ್ವದ ಆಧಾರದ ಮೇಲೆ ಇದಕ್ಕೆ ಪ್ರತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ರಾಜ್ಯದ 25 ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್‌ ಕೇಸ್‌: ರಾಜ್ಯದಲ್ಲಿ ಮಂಗಳವಾರ 19 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 6 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 10,104 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.2 ರಷ್ಟು ದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು ಏಳು ಸಾವಿರ ಹೆಚ್ಚು ನಡೆಸಲಾಗಿದೆ. ಹೊಸ ಪ್ರಕರಣಗಳು 2 ಏರಿಕೆಯಾಗಿದೆ (ಸೋಮವಾರ 17 ಪ್ರಕರಣ, ಶೂನ್ಯ ಸಾವು). 

ಖಾಸಗಿ ಶಾಲೆಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಗೆ ಸೂಚನೆ

ಬೆಂಗಳೂರಿನಲ್ಲಿ 14, ಚಿತ್ರದುರ್ಗ, ಕೊಡಗು, ಮೈಸೂರು ಹಾಗೂ ರಾಮನಗರದಲ್ಲಿ ತಲಾ ಒಬ್ಬರಿಗೆ ಒಬ್ಬರಿಗೆ ಸೋಂಕು ತಗುಲಿದೆ. 25 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಪ್ರಸ್ತುತ 308 ಸಕ್ರಿಯ ಸೋಂಕಿತರಿದ್ದು, ಈ ಪೈಕಿ ನಾಲ್ಕು ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 304 ಮಂದಿ ಮನೆಯ ಆರೈಕೆಯಲ್ಲಿದ್ದಾರೆ.

click me!