ಸಿಎಂಗೆ ಸಿದ್ದರಾಮಯ್ಯ ಸುದೀರ್ಘ ಪತ್ರ : ಸೋಂಕು ನಿಯಂತ್ರಣದ ಗಂಭೀರ ಸಲಹೆ

By Suvarna NewsFirst Published Apr 28, 2021, 12:12 PM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ದಿನದಿನವೂ ಸಾವು ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಜನರನ್ನು ಮತ್ತಷ್ಟು ಕಂಗೆಡಿಸಿದ್ದು ಈ ವೇಳೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. 

ಬೆಂಗಳೂರು (ಏ.28): ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸಾವು, ಸೋಂಕಿನ ಪ್ರಮಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.  ಈ ಸಂಬಂಧ  ಮುಖ್ಯಮಂತ್ರಿ ‌ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 

ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗೆ ಸರ್ಕಾರ ಯಾವ ರೀತಿ ಮುಂದಾಗಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ್ದು,  ಎರಡನೆ ಅಲೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ಸಾವು-ನೋವುಗಳಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ ಮತ್ತು ನಿರ್ಲಕ್ಷ್ಯಗಳೇ ಕಾರಣ ಎಂದಿದ್ದಾರೆ.

'ಭೀಕರ ಸಾವು ನೋವಿಗೆ ಸರ್ಕಾರ ಹೊಣೆ : 10 ಕೆಜಿ ಅಕ್ಕಿ ಕೊಡಿ' ...

ರಾಜ್ಯದಲ್ಲಿ ಈಗ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಕನಿಷ್ಟ 50 ಪಟ್ಟು ಹೆಚ್ಚಿಸಬೇಕು. ಅವಶ್ಯವಿದ್ದರೆ ಶಾಲೆ, ಕಾಲೇಜುಗಳ ಹಾಸ್ಟೆಲ್, ಹೋಟೆಲ್, ಕಲ್ಯಾಣ ಮಂಟಪ, ಸಮುದಾಯ ಭವನ ಮುಂತಾದ ಕಡೆ ತಾತ್ಕಾಲಿಕವಾಗಿ ಬೆಡ್ ಗಳ ವ್ಯವಸ್ಥೆ ಮಾಡಬೇಕು.  ಸೋಂಕಿತರನ್ನು ನೋಡಿಕೊಳ್ಳಲು ನುರಿತ ತಜ್ಞರ ತಂಡದ ಜೊತೆಗೆ ವೈದ್ಯಕೀಯ ವ್ಯಾಸಂಗದ ಅಂತಿಮ ವರ್ಷಗಳಲ್ಲಿರುವ ವೈದ್ಯಕೀಯ, ಅರೆವೈದ್ಯಕೀಯ ವಿದ್ಯಾರ್ಥಿಗಳನ್ನು, ದಾದಿಯರನ್ನು ನೇಮಿಸಬೇಕು.  ಸ್ವ-ಇಚ್ಛೆಯಿಂದ ಮುಂದೆ ಬರುವ ರಾಜಕೀಯೇತರ ಸ್ವಯಂ ಸೇವಕರಿಗೆ ಕ್ಷಿಪ್ರ ತರಬೇತಿಗಳನ್ನು ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ತಜ್ಞ ವೈದ್ಯರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಚಿಕಿತ್ಸೆ ನೀಡಲು ಪ್ರಾರಂಭಿಸಬೇಕು.  ಇದರ ಜೊತೆಗೆ ನಿವೃತ್ತ ವೈದ್ಯರು, ದಾದಿಯರನ್ನೂ ಸಹ ತಾತ್ಕಾಲಿಕವಾಗಿ ಮರುನೇಮಕ ಮಾಡಿಕೊಳ್ಳಬೇಕು.  ಎಲ್ಲಾ ವೈದ್ಯ ಸಿಬ್ಬಂದಿಗಳಿಗೆ ಆಕರ್ಷಕವಾದ ಸಂಬಳ, ಸಾರಿಗೆ, ಜೀವ ವಿಮೆ ವ್ಯವಸ್ಥೆ ಕಲ್ಪಿಸಬೇಕು.  ಪ್ರಸ್ತುತ ರಾಜ್ಯದಲ್ಲಿ ಲಭ್ಯವಿರುವ ವೆಂಟಿಲೇಟರ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಮತ್ತು ಬೆಡ್ ಗಳನ್ನು ಸಹ ಕನಿಷ್ಟವೆಂದರೂ 30-40 ಪಟ್ಟು ಹೆಚ್ಚಿಸಬೇಕು.  ರಾಜ್ಯ, ಕೇಂದ್ರಗಳಲ್ಲಿ ಲಭ್ಯವಿಲ್ಲದಿದ್ದರೆ, ಲಭ್ಯವಿರುವ ದೇಶಗಳಿಂದ ಆಮದು ಮಾಡಿಕೊಳ್ಳಬೇಕು ಎಂದಿದ್ದಾರೆ. 

ರೆಮ್ಡಿಸಿವಿರ್ ಸೇರಿದಂತೆ ಎಲ್ಲಾ ಜೀವ ರಕ್ಷಕ ಔಷಧಗಳನ್ನು ಕೇಂದ್ರದಿಂದ ಒತ್ತಾಯ ಮಾಡಿ ಪಡೆದುಕೊಳ್ಳಬೇಕು. ಅಗತ್ಯವಿರುವಷ್ಟು ರೆಮ್ಡಿಸಿವಿರ್ ಔಷಧಗಳನ್ನು ಒದಗಿಸುವಂತೆ ಕೇಂದ್ರವನ್ನು ಆಗ್ರಹಿಸಿ, ಲಸಿಕೆಗಳನ್ನು ಪಡೆದು ಚಿಕಿತ್ಸೆ ನೀಡಬೇಕು.  ರಾಜ್ಯದಲ್ಲಿ ಪ್ರತಿದಿನ ಎಷ್ಟು ಆಕ್ಸಿಜನ್ ವ್ಯವಸ್ಥೆಯುಳ್ಳ ಬೆಡ್ಗಳನ್ನು ಹೆಚ್ಚಿಸಲಾಯಿತು? ಎಷ್ಟು ವೆಂಟಿಲೇಟರ್ ವ್ಯವಸ್ಥೆಯುಳ್ಳ ಹಾಸಿಗೆಗಳನ್ನು ಹೆಚ್ಚಿಸಲಾಯಿತು? ಎಂದು ಪ್ರತಿದಿನ ಪ್ರಕಟಣೆ ಹೊರಡಿಸಬೆಕು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಪರಿಸ್ಥಿತಿ ಭೀಕರವಾಗುತ್ತಿದೆ.   ಹೀಗಾಗಿ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲೂ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಬೇಕು.  ಏನು ಮಾಡಲಾಗಿದೆ ಎಂದು ಪ್ರಕಟಣೆಗಳನ್ನು ಹೊರಡಿಸಿ, ಜನರಲ್ಲಿ ಧೈರ್ಯ ಹುಟ್ಟಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.

'ಬಿಎಸ್‌ವೈ ನೋಡಿದ್ರೆ ಕನಿಕರ ಮೂಡುತ್ತಿ, ಸಂಸದರನ್ನು ದೆಹಲಿಗೆ ಅಟ್ಟಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ' ..

ರಾಜ್ಯದಲ್ಲಿ ಅನೇಕ ಜೀವ ರಕ್ಷಕ ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿಗಳು ಬರುತ್ತಿವೆ. ಈ ಕುರಿತಂತೆ ಔಷಧ ನಿಯಂತ್ರಣ ಮಂಡಳಿ, ಪೊಲೀಸರು ನಿರಂತರ ದಾಳಿಗಳನ್ನು ನಡೆಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.  ಹಾಸನ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಪ್ರತಿ ರೋಗಿಯಿಂದ ದಿನಕ್ಕೆ 40-50 ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ದೂರುಗಳು ಬರುತ್ತಿವೆ. ಸರ್ಕಾರ ಈ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು.

 ಅವುಗಳನ್ನು ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.  ಕೋವಿಡ್ ಸೋಂಕಿಗೆ ನೀಡಲಾಗುತ್ತಿರುವ ಲಸಿಕೆಗಳ ವಿಚಾರದಲ್ಲಿಯೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜನರಿಗೆ ದ್ರೋಹ ಮಾಡುತ್ತಿವೆ.  ತಜ್ಞರ ಸಲಹೆ ಮೇರೆಗೆ ಅರ್ಹರಾಗಿರುವ ಎಲ್ಲಾ ವಯೋಮಾನದವರಿಗೂ ಸಹ ಉಚಿತವಾಗಿ ಲಸಿಕೆಗಳನ್ನು ನೀಡಬೇಕು ಎಂದು ಪತ್ರದ ಮೂಲಕ  ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

click me!