ಜನತಾ ಕರ್ಫ್ಯೂ: ಕೋರ್ಟ್‌ಗಳಲ್ಲಿ ಆನ್‌ಲೈನ್‌ ಕಲಾಪ

By Kannadaprabha NewsFirst Published Apr 28, 2021, 10:27 AM IST
Highlights

ಪೊಲೀಸರು, ಆರೋಪಿಗಳಿಗೆ ಮಾತ್ರ ಕೋರ್ಟ್‌ಗೆ ಪ್ರವೇಶ| ಕಕ್ಷಿದಾರರಿಗೆ ಪ್ರವೇಶ ನಿಷಿದ್ಧ| ಏ.27ರಿಂದ ಮೇ 22ರವರೆಗೆ ಈ ನಿಯಮ ಅನ್ವಯ| ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಆರೋಪಿಗಳನ್ನು ವಿಡಿಯೋ ಕಾಲ್‌ ಮೂಲಕವೇ ಹಾಜರುಪಡಿಸಬೇಕು| 

ಬೆಂಗಳೂರು(ಏ.28): ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಹೈಕೋರ್ಟ್‌ ಮಾರ್ಗಸೂಚಿ ರಚಿಸಿದೆ.

ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಪ್ರಭಾರಿ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇಗೌಡ ಮಂಗಳವಾರ ನೋಟಿಫಿಕೇಷನ್‌ ಹೊರಡಿಸಿದ್ದಾರೆ. ಈ ಮಾರ್ಗಸೂಚಿಗಳು ಏ.27ರಿಂದ ಮೇ 22ರವರೆಗೆ ಅನ್ವಯವಾಗಲಿವೆ.
ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಸಿವಿಲ್‌ ಮತ್ತು ​ಕ್ರಿಮಿನಲ್‌ ಪ್ರಕರಣಗಳಲ್ಲಿ ಕೇವಲ ವಿಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕವಷ್ಟೇ ಸಾಕ್ಷ್ಯ ದಾಖಲಿಸಿಕೊಳ್ಳಬೇಕು. ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಪೀಠಗಳು ನಿರ್ದೇಶಿಸಿದ ಕ್ರಿಮಿನಲ್‌ ಪ್ರಕರಣಗಳಲ್ಲಿ ಮಾತ್ರ ಅಗತ್ಯವೆನ್ನಿಸಿದರೆ ಭೌತಿಕ ಹಾಜರಿ ಮೂಲಕವೂ ಸಾಕ್ಷ್ಯ ದಾಖಲು ಮಾಡಬಹುದು. ಪೊಲೀಸ್‌ ಅಧಿಕಾರಿಗಳು ಹಾಗೂ ಆರೋಪಿಗಳನ್ನು ಹೊರತುಪಡಿಸಿ ಕಕ್ಷಿದಾರರಿಗೆ ನ್ಯಾಯಾಲಯ ಪ್ರವೇಶ ನಿಷಿದ್ಧ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಆರೋಪಿಗಳನ್ನು ವಿಸಿ ಮೂಲಕವೇ ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.

ಕೋವಿಡ್‌ ಅನಾಹುತಕ್ಕೆ ಮೂಕ ಪ್ರೇಕ್ಷಕ ಆಗೋದಿಲ್ಲ: ಸುಪ್ರೀಂ!

ಜಾಮೀನು ಪಡೆದಿರುವ ಆರೋಪಿಗಳು ಹಾಗೂ ವಕೀಲರ ಗೈರು ಹಾಜರಿಯಲ್ಲಿ ನ್ಯಾಯಾಲಯಗಳು ಪ್ರತಿಕೂಲ ಆದೇಶ ನೀಡುವಂತಿಲ್ಲ. ರಜಾಕಾಲದ ನ್ಯಾಯಾಲಯಗಳು ತುರ್ತು ಪ್ರಕರಣಗಳನ್ನಷ್ಟೇವಿಸಿ ಮೂಲಕ ವಿಚಾರಣæ ನಡೆಸಬೇಕು. ಬೆಂಗಳೂರಿನಲ್ಲಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳು ಶೇ.50 ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಆವರ್ತನಾ ಕ್ರಮದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಗಿದೆ.
ಅಲ್ಲದೆ, ಸಿಎಂಎಂ ಹಾಗೂ ಎಸಿಎಂಎಂ ಕೋರ್ಟ್‌ಗಳು ಗುರುನಾನಕ್‌ ಭವನದ ರಿಮ್ಯಾಂಡ್‌ ಕೋರ್ಟ್‌ನಲ್ಲಿ ಆರೋಪಿಗಳನ್ನು ನೇರವಾಗಿ ಹಾಜರುಪಡಿಸಿಕೊಂಡು ವಿಚಾರಣೆ ನಡೆಸಬೇಕು. ಇತರ ಜಿಲ್ಲೆಗಳಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆರೋಪಿಗಳನ್ನು ಹಾಜರುಪಡಿಸಲು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಖಾಲಿಯಿರುವ ಪ್ರತ್ಯೇಕ ಕೋರ್ಟ್‌ ಹಾಲ್‌ಗಳನ್ನು ಬಳಸಿಕೊಳ್ಳಬೇಕು. ಈ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ.
 

click me!