ಕಾರು ತಡೆದ ಮಹಿಳೆಯರ ವಿರುದ್ಧ ಸಿದ್ದು ಗರಂ!

By Web DeskFirst Published Dec 29, 2018, 9:00 AM IST
Highlights

ಕಾರು ತಡೆದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಕುಟುಂಬವೊಂದರ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಗರಂ ಆಗಿದ್ದಾರೆ.

ಬಾಗಲಕೋಟೆ[ಡಿ.29]: ತಮ್ಮ ಕಾರು ಅಡ್ಡಗಟ್ಟಿಸಮಸ್ಯೆ ಹೇಳಿಕೊಳ್ಳಲು ಮುಂದಾದ ಕುಟುಂಬವೊಂದರ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಗರಂ ಆದ ಘಟನೆ ಶುಕ್ರವಾರ ಬಾದಾಮಿಯಲ್ಲಿ ನಡೆಯಿತು.

ಪಟ್ಟಣದ ಹೊರ ವಲಯದಲ್ಲಿರುವ ಕೃಷ್ಣಾ ಹೆರಿಟೇಜ್‌ನಿಂದ ಹೊರಡುವ ಸಂದರ್ಭದಲ್ಲಿ ಗೇಟ್‌ ಬಳಿ ಕಾರು ಅಡ್ಡಗಟ್ಟಿದ ಬಾದಾಮಿಯ ಕುಟುಂಬವೊಂದು ತಮ್ಮ ಸಮಸ್ಯೆ ಬಗೆಹರಿಸಿಯೇ ಹೋಗಬೇಕು ಎಂದು ಪಟ್ಟು ಹಿಡಿದರು. ಇದು ಸಿದ್ದರಾಮಯ್ಯ ಸಿಟ್ಟಿಗೇಳಲು ಕಾರಣವಾಯಿತು ಎಂದು ತಿಳಿದುಬಂದಿದೆ. ಬಾದಾಮಿಯ ಕನಕದಾಸ ಬ್ಯಾಂಕಿನಿಂದ ಸಾಲ ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ಈ ಕಿರುಕುಳವನ್ನು ತಪ್ಪಿಸಿ ಸಾಲಮನ್ನಾ ಮಾಡಿ ಎಂದು ಅನಿತಾ ಮತ್ತು ತಾಯಿ, ಅವರ ವರ್ತನೆಗೆ ಗರಂ ಆದ ಸಿದ್ದರಾಮಯ್ಯ, ಖಾಸಗಿ ಬ್ಯಾಂಕಿನ ವೈಯಕ್ತಿಕ ಸಾಲವನ್ನು ಬಗೆಹರಿಸುವುದು ಹೇಗೆ ಎಂದರು.

ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆಯಿತು. ನೊಂದ ಕುಟುಂಬದ ಸದಸ್ಯರು ಒಂದು ಹಂತದಲ್ಲಿ ನೀವು ಬಾದಾಮಿ ಶಾಸಕರಿದ್ದೀರಿ ಎಂದು ಜೋರು ಧ್ವನಿಯಲ್ಲಿ ಹೇಳಿದ ಪ್ರಸಂಗವೂ ನಡೆಯಿತು. ಮೂಲ ಸಮಸ್ಯೆಗಳಿದ್ದರೆ ಹೇಳಿ ಈಗಲೇ ಬಗೆಹರಿಸುವೆ ಎಂದು ಹೇಳಿದ ಸಿದ್ದರಾಮಯ್ಯ, ಸ್ಥಳದಲ್ಲಿಯೇ ಬಾದಾಮಿ ತಹಸೀಲ್ದಾರರನ್ನು ಕರೆಸಿ ಇವರಿಗೆ ಮೂಲ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿ, ಮುಂದೆ ಹೋದರು.

click me!