
ಉಡುಪಿ (ಮಾ.31): ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪ ಅವರು ಬೈಂದೂರಿನಲ್ಲಿ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಆದರೆ, ಸಮಾವೇಶಕ್ಕೆ ಬಂದ ಕಾರ್ಯಕರ್ತರಿಗೆ ಬಿರಿಯಾನಿ ಮಾಡಿ ಬಡಿಸಲು ಮುಂದಾದರೆ, ಚುನಾವಣಾ ಆಯೋಗದ ವಿಚಕ್ಷಣಾ ದಳ (ಫ್ಲೈಯಿಂಗ್ ಸ್ಕ್ವಾಡ್) ಸಿಬ್ಬಂದಿ ಬಿರಿಯಾನಿಯನ್ನೇ ಎತ್ತಾಕಿಕೊಂಡು ಹೋಗಿದ್ದಾರೆ. ಇನ್ನು ಬಿರಿಯಾನಿ ಸಿಗದೇ ಕಾರ್ಯಕರ್ತರು ಉಪವಾಸವಾಗಿಯೇ ಮನೆಗೆ ತೆರೆಳಿದರು.
ರಾಜ್ಯದಲ್ಲಿ ಯಾವುದೇ ಚುನಾವಣೆ ಬಂದರೂ ಹಣ, ಹೆಂಡ ಹಾಗೂ ಮಾಂಸದೂಟ ಮಾಡಿಸುವುದು ಸಾಮಾನ್ಯವಾಗಿರುತ್ತದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರವಂತೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಯ ಎಲ್ಲ ಖರ್ಚು ವೆಚ್ಚಗಳ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿರುತ್ತದೆ. ಆದರೆ, ಈ ಬಗ್ಗೆ ಮೈಮರೆತು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರಿನಲ್ಲಿ ಸಮಾವೇಶ ಏರ್ಪಡಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಗೆ ಸಜ್ಜಾಗುತ್ತಿರುವ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಕರ್ತರಿಗೆ ಬಿರಿಯಾನಿ ಊಟ ಬಡಿಸಲು ಮುಂದಾಗಿದ್ದರು. ಇನ್ನು ನೇರವಾಗಿ ಈಶ್ವರಪ್ಪ ಅವರು ಬಿರಿಯಾನಿ ಊಟ ಮಾಡಿಸದಿದ್ದರೂ, ಅವರ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದರು.
Lok Sabha Election 2024: ಈ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ
ಇನ್ನು ಈಶ್ವರಪ್ಪ ಅವರು ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಮಧ್ಯಾಹ್ನ ಬಿರಿಯಾನಿ ಬರುತ್ತದೆ ಎಂದು ಹೇಳಿದ್ದರು. ಹೀಗಾಗಿ, ಬಿರಿಯಾನಿ ತಯಾರಿಸುತ್ತಿದ್ದ ಸ್ಥಳಕ್ಕೆ ತೆರಳಿದ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಬಿರಿಯಾನಿ ಯಾವ ಉದ್ದೇಶಕ್ಕೆ ಮಾಡಲಾಗುತ್ತಿದೆ. ರಾಜಕೀಯ ಕಾರ್ಯಕ್ರಮಕ್ಕೆ ಬಳಕೆ ಮಾಡುತ್ತಿದ್ದರೆ ಯಾರು ಅಭ್ಯರ್ಥಿ, ಯಾರ ಪರವಾಗಿ ಮಾಡಲಾಗುತ್ತಿದೆ ಹೆಸರು ಕೊಡಿ. ಅವರ ಚುನಾವಣಾ ಖರ್ಚು ವೆಚ್ಚದಲ್ಲಿ ಬಿರಿಯಾನಿಗೆ ಮಾಡಲಾದ ಖರ್ಚನ್ನೂ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ. ಆಗ, ಬಿರಿಯಾನಿ ಯಾರಿಗೂ ಸೇರಿದ್ದಲ್ಲ ಎಂದು ಸುಮ್ಮನಾಗಿದ್ದಾರೆ. ಪ್ಲೈಯಿಂಗ್ ಸ್ಕ್ವಾಡ್ ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದು, ಕಾರ್ಯಕರ್ತರೆಲ್ಲರೂ ಉಪವಾಸವಾಗಿ ಮನೆಗೆ ತೆರಳಿದ್ದಾರೆ.
ಬೈಂದೂರಿನಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪನವರ ಹಿಡಿತದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂಬುದು ನನ್ನ ಉದ್ದೇಶ. ನನ್ನದು ಬಿಜೆಪಿಯನ್ನು ವಿರೋಧಿಸುವ ಹೋರಾಟ ಅಲ್ಲ. ಹಿಂದುತ್ವದ ಪರವಾಗಿ ಕುಟುಂಬ ರಾಜಕಾರಣದ ವಿರುದ್ಧವಾಗಿ ನನ್ನ ಹೋರಾಟ. ಪ್ರತಾಪ್ ಸಿಂಹ, ಸಿ.ಟಿ ರವಿ, ಯತ್ನಾಳ್ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಈಶ್ವರಪ್ಪನವರೇ ನಿಮ್ಮ ನಡೆ ಸರಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಗೆ ಹಿಂದುಳಿದ ವರ್ಗದ ಯುವಕರು ಸಿಗ್ತಾರೆ ಎಂದು ರಾಯಣ್ಣ ಬ್ರಿಗೇಡ್ ಮಾಡಲಾಗಿತ್ತು. ಸ್ವಂತ ದುಡ್ಡಿನಿಂದ ಯುವಕರು ಬಂದು ಕೂಡಲಸಂಗಮದಲ್ಲಿ ಸಮಾವೇಶ ಮಾಡಿದೆವು. ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಅಮಿತ್ ಶಾ ಗೆ ಕಂಪ್ಲೇಂಟ್ ಮಾಡಿದರು. ಕೇಂದ್ರದ ಆರ್ ಎಸ್ ಎಸ್, ಬಿಜೆಪಿ ನಾಯಕರಿಗೆ ಬಿಎಸ್ ವೈ ದೂರು ನೀಡಿದರು. ಹಿರಿಯ ನಾಯಕರು ಕೊಟ್ಟ ಸೂಚನೆಯಂತೆ ಆ ಬ್ರಿಗೇಡ್ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ನಾನು ಅಂದು ತೆಗೆದುಕೊಂಡು ನಿರ್ಧಾರ ತಪ್ಪಾ ಎಂದು ಈಗ ನನಗೆ ಅನಿಸುತ್ತಿದೆ ಎಂದು ಹೇಳಿದರು.
ಗಂಟೆ ಹೊಡೆದು ಪ್ರಮಾಣ ಮಾಡಲು ನಾನು ಸಿದ್ಧ: ಈಶ್ವರಪ್ಪ
ಲಾಲ್ ಚೌಕದಲ್ಲಿ ಪಾಕಿಸ್ತಾನದ ಧ್ವಜ ಕಿತ್ತಾಕಿ ಹಿಂದುಸ್ತಾನದ ಧ್ವಜ ಹಾರಿಸಿ ಬಂದೆವು. ಮೋದಿ ಕರೆಗೆ ಇಡೀ ಕರ್ನಾಟಕದಿಂದ ಸ್ಪೆಷಲ್ ಟ್ರೈನ್ ಓಡಿಸಿದ್ದೆವು. ಪ್ರಧಾನಿ ಮೋದಿಗೆ ನನ್ನ ಕೆಲಸದ ಬಗ್ಗೆ ಅರಿವಿದೆ. ನಿಮ್ಮ ಕುಟುಂಬ ರಾಜಕಾರಣವನ್ನು ಕ್ಲೀನ್ ಮಾಡುವ ಕೆಲಸಕ್ಕೆ ಮುಂದಾಗಿದ್ದೇನೆ. ಮನವೊಲಿಸಬೇಡಿ, ಹೋರಾಟಕ್ಕೆ ಅಡ್ಡಿ ಬರಬೇಡಿ ಎಂದು ಮೋದಿಗೇ ನಾನು ಮನವರಿಕೆ ಮಾಡುತ್ತೇನೆ. ಕಾಂಗ್ರೆಸ್ ವೀಕ್ ಮತ್ತು ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ. ನನಗೂ ಯಡಿಯೂರಪ್ಪನ ಮಗನಿಗೂ ಸ್ಪರ್ಧೆ ಇದೆ. ನಾನು ಯಾವನಿಗೂ ಹೆದರಲ್ಲ ನನ್ನ ಹೆಸರು ಹೇಳಿದ್ರೆ ಬೇರೆಯವರಿಗೆ ಬಿಪಿ ಶುಗರ್ ಬರುತ್ತದೆ. ರಾಷ್ಟ್ರವಾದಿ ಮುಸಲ್ಮಾನರ ಮತವನ್ನು ನಾನು ನಿರೀಕ್ಷೆ ಮಾಡುತ್ತೇನೆ. 1 ಲಕ್ಷ ಲೀಡ್ನಲ್ಲಿ ನಾನು ಗೆಲ್ಲುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ