Shivalli Protest: ಕೈಯಲ್ಲಿ ಸಸಿ ಹಿಡಿದು ಬೀದಿಗಿಳಿದ ಶಿವಳ್ಳಿ ಗ್ರಾಮಸ್ಥರು! ಬಯೋಗ್ಯಾಸ್ ಘಟಕದ ವಿರುದ್ಧ ಭುಗಿಲೆದ್ದ ಹಸಿರು ಹೋರಾಟ!

Published : Aug 10, 2026, 08:42 PM IST
Shivalli Protest

ಸಾರಾಂಶ

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಬಯೋಗ್ಯಾಸ್ ಘಟಕವನ್ನು ವಿರೋಧಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ವಿಷಕಾರಿ ಘಟಕದ ಬದಲು ಹಸಿರು ಸಸಿಗಳು ಬೇಕೆಂದು ಆಗ್ರಹಿಸಿ, ಕೈಯಲ್ಲಿ ಸಸಿಗಳನ್ನು ಹಿಡಿದು ಪಾದಯಾತ್ರೆ ಮೂಲಕ ವಿನೂತನ ಹಸಿರು ಹೋರಾಟಕ್ಕೆ ಮುಂದಾಗಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಒಡಲನ್ನು ಸೀಳುವ ಪ್ರಯತ್ನಗಳು ನಡೆದಾಗಲೆಲ್ಲಾ, ಜನಸಾಮಾನ್ಯರು ತಮ್ಮ ಜೀವದಾತವವವಾದ ಪರಿಸರವನ್ನು ಕಾಪಾಡಿಕೊಳ್ಳಲು ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆ. ಇಂತಹದ್ದೇ ಒಂದು ಭಾವನಾತ್ಮಕ, ಹಸಿರು ಹೋರಾಟಕ್ಕೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಹಸಿರು ಪರಿಸರವನ್ನು, ಶುದ್ಧ ಗಾಳಿ ನುಂಗಿ ಹಾಕಲು ಬರುತ್ತಿರುವ ಬಯೋಗ್ಯಾಸ್ ಘಟಕದ ಸ್ಥಾಪನೆ ವಿರೋಧಿಸಿ ಶಿವಳ್ಳಿ ಗ್ರಾಮಸ್ಥರು ತಮ್ಮ ನೆಲದ ಉಳಿವಿಗಾಗಿ ವಿನೂತನ ಹಾಗೂ ತೀವ್ರ ಸ್ವರೂಪದ ಹಸಿರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ವಿಷಕಾರಿ ಅನಿಲ ಘಟಕ ಬೇಡ!

ತಮಗೆ ವಿಷಕಾರಿ ಅನಿಲದ ಘಟಕ ಬೇಡ, ಬದಲಿಗೆ ಜೀವ ನೀಡುವ ಹಸಿರು ಸಸಿಗಳು ಬೇಕು ಎಂದು ಆಗ್ರಹಿಸಿ ಇಡೀ ಗ್ರಾಮವೇ ಒಕ್ಕೊರಲಿನಿಂದ ಧ್ವನಿ ಎತ್ತಿದೆ. ಪಾದಯಾತ್ರೆಯ ಮೂಲಕ ಹರಿದುಬಂದ ಜನಸಾಗರತಮ್ಮ ಹಳ್ಳಿಯ ಪಕ್ಕದಲ್ಲೇ ತಲೆಎತ್ತುತ್ತಿರುವ ಬಯೋಗ್ಯಾಸ್ ಘಟಕವು ಭವಿಷ್ಯದಲ್ಲಿ ತರಲಿರುವ ಗಂಡಾಂತರವನ್ನು ಅರಿತ ಶಿವಳ್ಳಿ ಗ್ರಾಮಸ್ಥರು ಜಿಲ್ಲಾಡಳಿತದ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ತೀವ್ರ ವಿರೋಧದ ಮಧ್ಯೆಯೂ ಜಿಲ್ಲಾಡಳಿತವು ಬಯೋಗ್ಯಾಸ್ ಘಟಕದ ಕಾಮಗಾರಿ ಆರಂಭಿಸಿರುವುದು ಅವರ ಆತಂಕ ಮತ್ತು ಆಕ್ರೋಶ ಇಮ್ಮಡಿಗೊಳಿಸಿದೆ. ಈ ಹಿನ್ನೆಲೆಯಲ್ಲಿ, ತಾಯ್ನೆಲದ ಮೇಲಿನ ಮಮತೆಯಿಂದ ಪ್ರೇರಿತರಾದ ವೃದ್ಧರು, ಮಹಿಳೆಯರು, ಯುವಕರು ಸೇರಿ ನೂರಾರು ಗ್ರಾಮಸ್ಥರು ಶಿವಳ್ಳಿ ಗ್ರಾಮದಿಂದ ಬಯೋಗ್ಯಾಸ್ ಘಟಕದವರೆಗೆ ಬೃಹತ್ ಪಾದಯಾತ್ರೆ ಕೈಗೊಂಡರು. ಕೈಯಲ್ಲಿ ಹಸಿರು ಸಸಿ ಹಿಡಿದು, ಪ್ರಕೃತಿ ರಕ್ಷಣೆಗಾಗಿ ಘೋಷಣೆ ಕೂಗುತ್ತಾ ಸಾಗಿದ ದೃಶ್ಯವು ನೋಡುಗರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದೆ.

ಪ್ರಕೃತಿ ರಕ್ಷಣೆಗಾಗಿ ಸಸಿ ಹಿಡಿದು ನಡೆದ ಗ್ರಾಮಸ್ಥರು!

ವಿಷಕಾರಿ ಘಟಕದ ಜಾಗದಲ್ಲಿ ಜೀವದ ಸಂಕೇತವಾದ ಸಸಿ ನೆಟ್ಟು ಹಸಿರು ಕ್ರಾಂತಿ ಮಾಡಲು ಗ್ರಾಮಸ್ಥರು ಸಜ್ಜಾಗಿದ್ದರು. ಪಾದಯಾತ್ರೆಯ ಮೂಲಕ ಘಟಕದ ಆವರಣ ತಲುಪಿದ ಜನರು, ಘಟಕದ ಒಳಗೆ ಪ್ರವೇಶಿಸಿ ಸಸಿಗಳನ್ನು ನೆಡಲು ಮುಂದಾದರು. ನಮಗೆ ಉಸಿರುಗಟ್ಟಿಸುವ ಕಾರ್ಖಾನೆ ಬೇಡ, ಉಸಿರು ನೀಡುವ ವನಸಿರಿ ಬೇಕು ಎಂಬುದು ಪ್ರತಿಭಟನಾಕಾರರ ಹಕ್ಕೊತ್ತಾಯವಾಗಿತ್ತು. ಪರಿಸರವನ್ನು ಕಾಪಾಡಿಕೊಳ್ಳುವ ಈ ಭಾವನಾತ್ಮಕ ಹೋರಾಟವು ಸದ್ಯ ಇಡೀ ಜಿಲ್ಲೆಯ ಗಮನ ಸೆಳೆದಿದೆ.

ಖಾಕಿ ಕೋಟೆಯಾದ ಗುಡ್ಡ!

ಈ ಹಸಿರು ಪ್ರತಿಭಟನೆ ಮತ್ತು ಅವರ ಆಕ್ರೋಶ ಹತ್ತಿಕ್ಕಲು ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಬೃಹತ್ ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಿತ್ತು. ಬಯೋಗ್ಯಾಸ್ ಘಟಕದ ಪ್ರಮುಖ ಗೇಟ್ ಮುಂದೆ ಅಧಿಕ ಪೊಲೀಸರನ್ನು ನಿಯೋಜಿಸಿ ಇಡೀ ಪ್ರದೇಶವನ್ನು ಖಾಕಿ ಕೋಟೆಯನ್ನಾಗಿ ಪರಿವರ್ತಿಸಲಾಗಿತ್ತು. ಪ್ರತಿಭಟನಾಕಾರರನ್ನು ಘಟಕದ ಒಳಗೆ ಹೋಗದಂತೆ ತಡೆಯಲು ಜಿಲ್ಲಾಡಳಿತವು ಎರಡು ಡಿ.ಎ.ಆರ್ ಪೊಲೀಸ್ ವಾಹನಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಿತ್ತು. ಸ್ಥಳದಲ್ಲೇ ಮೊಕ್ಕಾಂ ಹೂಡಿದ ಉನ್ನತಾಧಿಕಾರಿಗಳು ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಧಾರವಾಡ ತಹಶಿಲ್ದಾರ್ ಹಾಗೂ ಮಹಾನಗರ ಪಾಲಿಕೆ ಕಮಿಷನರ್ ಅವರು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಗ್ರಾಮಸ್ಥರು ಘಟಕದ ಒಳಗೆ ನುಗ್ಗಿ ಸಸಿ ನೆಡುವುದನ್ನು ತಡೆಯಲು ಅಧಿಕಾರಿಗಳು ಸ್ವತಃ ಮುಂಚೂಣಿಯಲ್ಲಿ ನಿಂತು ಪ್ರಯತ್ನಿಸಿದರು. ಅಧಿಕಾರಿಗಳ ತಡೆ ಹಾಗೂ ಪೊಲೀಸ್ ಬಲಪ್ರಯೋಗದ ಮಧ್ಯೆಯೂ ಶಿವಳ್ಳಿ ಗ್ರಾಮಸ್ಥರ ಪರಿಸರ ಕಾಳಜಿಯ ಈ ಹೋರಾಟವು ಆಡಳಿತಶಾಹಿಗೆ ಜನಶಕ್ತಿಯ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯ ಸ್ಪಷ್ಟ ಸಂದೇಶ ರವಾನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೃತ್ ಭಾರತ್ ಯೋಜನೆ: ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ
ದರ್ಶನ್‌ಗೆ ಭಯ ಹುಟ್ಟಿಸಿದ ಮಾಫಿ ಸಾಕ್ಷಿ, 11 ಪುಟಗಳ ಅರ್ಜಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಭಯಾನಕ ಮಾಹಿತಿ ಇದು!