Karnataka Shakti Scheme dues ‘ಶಕ್ತಿ’ ಯೋಜನೆಯ ಎಷ್ಟು ಹಣ ಬಾಕಿ ಇದೆ?: ಮಾಹಿತಿ ಕೇಳಿದ ಹೈಕೋರ್ಟ್‌

Kannadaprabha News, Ravi Janekal |   | Kannada Prabha
Published : Feb 19, 2026, 06:40 AM IST
Karnataka High court

ಸಾರಾಂಶ

ಕೋವಿಡ್‌ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ನೀಡಲು ಹಣವಿಲ್ಲವೆಂದು ನಿಗಮಗಳು ವಾದಿಸಿದಾಗ, ಹೈಕೋರ್ಟ್‌ ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಾದ ಬಾಕಿ ಹಣದ ಬಗ್ಗೆ ಪ್ರಶ್ನಿಸಿದೆ. ಈ ಹಣವನ್ನು ಪರಿಹಾರಕ್ಕೆ ಏಕೆ ಬಳಸಬಾರದು ಎಂದು ಕೇಳಿ, ಬಾಕಿ ಮೊತ್ತದ ವಿವರಗಳನ್ನು ಸಲ್ಲಿಸಲು ನಿರ್ದೇಶನ ನೀಡಿದೆ.

ಬೆಂಗಳೂರು (ಫೆ.19) ಮಹಿಳೆಯರಿಗೆ ಉಚಿತ ಬಸ್‌ ಸೇವೆ ಕಲ್ಪಿಸುತ್ತಿರುವ ಶಕ್ತಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಎಷ್ಟು ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಾರಿಗೆ ನಿಗಮಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಸಾವಿಗೀಡಾದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ತಲಾ 30 ಲಕ್ಷ ರು. ಪರಿಹಾರ ಬಿಡುಗಡೆಗೆ ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ತಾಹೀರ್‌ ಹುಸೇನ್‌ ಮತ್ತು ರಾಯಚೂರಿನ ಅಜೀಜ್‌ ಪಾಷಾ ಜಾಗೀರದಾರ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರ ವಕೀಲರು, ಕೋವಿಡ್‌ ಸಂದರ್ಭದಲ್ಲಿ ಸಾವಿಗೀಡಾದವರಿಗೆ ಪರಿಹಾರ ಪಾವತಿಸಲು ನಿಗಮಗಳ ಬಳಿ ಹಣವಿಲ್ಲ. ಯಾವುದೇ ಸಂಪನ್ಮೂಲವೂ ಇಲ್ಲ. ನಿಗಮಗಳು ನಷ್ಟದಲ್ಲಿ ನಡೆಯುತ್ತಿದೆ. ನೌಕರರಿಗೆ ವೇತನ ನೀಡುವುದೇ ಕಷ್ಟವಾಗಿದೆ. ಕೊರೊನಾ ಸಂದರ್ಭದಲ್ಲಿ ಸರ್ಕಾರ ನೆರವು ನೀಡಿದ್ದರಿಂದ ವೇತನ ಪಾವತಿಸಲು ಸಾಧ್ಯವಾಗಿತ್ತು. ಪರಿಹಾರ ಪಾವತಿ ಸಂಬಂಧ ಸರ್ಕಾರ ಹೊರಡಿಸಿದ್ದ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ನೇತೃತ್ವದ ವಿಭಾಗೀಯ ಪೀಠ, ಪರಿಹಾರ ಪಾವತಿಸಲು ಸಂಪನ್ಮೂಲ ಇಲ್ಲ ಎಂದು ಹೇಳುತ್ತಿದ್ದೀರಿ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಉಚಿತ ಬಸ್‌ ಸೇವೆ ನೀಡಲಾಗುತ್ತಿದೆ. ಉಚಿತ ಟಿಕೆಟ್‌ ನೀಡಲಾಗುತ್ತಿದೆಯಲ್ಲವೇ? ಅದು ಹೇಗೆ ಕೆಲಸ ಮಾಡುತ್ತಿದೆ? ಈವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ? ಈ ಹಣ ಪಡೆದು ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಬಹುದಲ್ಲವೇ, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಬಾಕಿ ಉಳಿಸಿಕೊಂಡಿದೆ, ಅದು ನಿಮ್ಮ ಸಂಪನ್ಮೂಲವೇ ಅಲ್ಲವೇ ಎಂದು ಪ್ರಶ್ನಿಸಿತು.

ಅಂತಿಮವಾಗಿ ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದ ಸರ್ಕಾರಿ ಉದ್ಯೋಗಿಗಳಿಗೆ ಪರಿಹಾರ ನೀಡುವ ಕುರಿತಾದ ಯೋಜನೆ ದಾಖಲೆಯಲ್ಲಿ ಸಲ್ಲಿಸಬೇಕು ಎಂದು ಸಾರಿಗೆ ನಿಗಮಗಳ ಪರ ವಕೀಲರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿತು.

- ಕೋವಿಡ್‌ ವೇಳೆ ಮೃತ ಸಿಬ್ಬಂದಿ ಪರಿಹಾರ ಕೇಸ್‌

- ಪರಿಹಾರ ನೀಡಲು ಹಿಂದೇಟು ಹಾಕಿದ ನಿಗಮಗಳು

- ನಾವು ನಷ್ಟದಲ್ಲಿದ್ದೇವೆ ಎಂದು ತಿಳಿಸಿದ ನಿಗಮಗಳು

- ಆಗ ಶಕ್ತಿ ಯೋಜನೆ ಕುರಿತು ಹೈಕೋರ್ಟ್‌ ಪ್ರಸ್ತಾಪ

- ಉಚಿತ ಪ್ರಯಾಣ ಹೇಗೆ ಕೆಲ್ಸ ಮಾಡ್ತಿದೆ ಎಂದು ಪ್ರಶ್ನೆ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Kanakapura Srinivas: ಪುನೀತ್‌, ದರ್ಶನ್‌ ಅಭಿಮಾನಿಗಳ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್‌ | ಏನಿದು ವಿವಾದ?
Child marriage hall owner case: ವಧು-ವರನ ವಯಸ್ಸು ಪರಿಶೀಲನೆ ಕಠಿಣ ನಿಯಮ ಚೌಲ್ಟ್ರಿಯವರಿಗಿಲ್ಲ: ಹೈಕೋರ್ಟ್