ರಾಮನಗರದಲ್ಲಿ ಜೀತಪದ್ದತಿ ಜೀವಂತ: ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿದ್ದ ಮಾಲೀಕ!

By Sathish Kumar KHFirst Published Dec 26, 2023, 7:57 PM IST
Highlights

ರಾಮನಗರದ ಸ್ಟೀಲ್‌ ಫ್ಯಾಕ್ಟರಿ ಮಾಲೀಕನೊಬ್ಬ ಮುಂಗಡ ಹಣವನ್ನು ಪಡೆದ ಕಾರ್ಮಿಕನ ಕಾಲಿಗೆ ಸರಪಳಿಯನ್ನು ಕಟ್ಟಿ ಹಗಲು ರಾತ್ರಿ ಜೀತದಾಳಿನಂತೆ ಕೆಲಸ ಮಾಡಿಸಿಕೊಂಡಿದ್ದಾನೆ.

ರಾಮನಗರ (ಡಿ.26): ಕಾನೂನು, ಕಟ್ಟಳೆ ಹಾಗೂ ಹೆಜ್ಜೆಗೊಬ್ಬ ಪೊಲೀಸರು ಓಡಾಡುತ್ತಿರುತ್ತಾರೆ. ಇದೆಲ್ಲದರ ಭಯವೇ ಇಲ್ಲದೇ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿಯೇ ಸ್ಟೀಲ್‌ ಫ್ಯಾಕ್ಟರಿಯಲ್ಲಿ ಕಾರ್ಮಿಕನೊಬ್ಬನ ಕಾಲಿಗೆ ಸರಪಳಿಯನ್ನು ಕಟ್ಟಿ ಹಗಲು ರಾತ್ರಿ ಜೀತದಾಳಿನಂತೆ ಕೆಲಸ ಮಾಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ರಾಮನಗರದ ತಹಸೀಲ್ದಾರ್ ನೇತೃತ್ವದಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ.

ಹೌದು, ಕಾರ್ಮಿಕರ ಕುಟುಂಬದವರು ಕಷ್ಟವಿದ್ದಾಗ ತಾವು ಕೆಲಸ ಮಾಡುವ ಮಾಲೀಕರ ಬಳಿ ಒಂದಿಷ್ಟು ಹಣವನ್ನು ಪಡೆದು ಕೆಲಸ ಮಾಡಿ ಸಾಲವನ್ನು ತೀರಿಸುವುದಾಗಿ ಹೇಳಿರುತ್ತಾರೆ. ಅದೇ ರೀತಿ 1.5 ಲಕ್ಷ ರೂ. ಮುಂಗಡ ಹಣವನ್ನು ಪಡೆದ ಕಾರ್ಮಿಕ ಕಳೆದ 5 ತಿಂಗಳಿಂದ ಮಾಲೀಕನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದಾನೆ. ಆದರೆ, ಕೆಲ ವೈಯಕ್ತಿಕ ಕೆಲಸಗಳಿದ್ದಾಗ ರಜೆ ಕೊಡದ ಹಿನ್ನೆಲೆಯಲ್ಲಿ ಅವರಿಗೆ ಹೇಳದೇ ಕೆಲವು ದಿನಗಳು ರಜೆ ತೆಗೆದುಕೊಂಡಿದ್ದಾನೆ. ಇದಕ್ಕೆ ಕೋಪಗೊಂಡ ಫ್ಯಾಕ್ಟರಿ ಮಾಲೀಕ ಮುಂಗಡ ಹಣ ಪಡೆದ ಯುವಕನನ್ನು ಎಳೆದುಕೊಂಡು ಬಂದು, ಫ್ಯಾಕ್ಟರಿಯಿಂದ ಹೊರಗೆ ಹೋಗದಂತೆ ಆತನನ್ನು ಸರಪಳಿಯಲ್ಲಿ ಕಟ್ಟಿಹಾಕಿ ಹಗಲು ರಾತ್ರಿ ಕೆಲಸ ಮಾಡಿಸಿಕೊಂಡಿದ್ದಾನೆ.

Breaking Teacher death: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಮುಖ್ಯ ಶಿಕ್ಷಕ

ಬೆಂಗಳೂರಿನ ನೆರೆ ಜಿಲ್ಲೆಯಾಗಿರುವ ರಾಮನಗರದ ಮೆಹೆಬೂಬ್ ನಗರದಲ್ಲಿರುವ ಎಸ್ ಐಯು ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆದಿದೆ. ಮೊಹಮ್ಮದ್ ವಸೀಂ (24) ಮಾಲೀಕನ ದಬ್ಬಾಳಿಕೆಗೆ ಒಳಗಾದ ಕಾರ್ಮಿಕನಾಗಿದ್ದಾನೆ. ಫ್ಯಾಕ್ಟರಿ ಮಾಲಿಕ ಸೈಯ್ಯದ್ ಇಸಾಮ್ ಜೀತಕ್ಕೆ ದುಡಿಸಿಕೊಂಡಿದ್ದಾನೆ. ಕಳೆದ ಐದು ತಿಂಗಳಿಂದ ಕೆಲಸ ಮಾಡುತ್ತಿದ್ದ ವಸೀಂ ಕೆಲವು ದಿನ ಕೆಲಸಕ್ಕೆ ಬಂದಿರಲಿಲ್ಲ. ಆದ್ದರಿಂದ ಆತನನ್ನು ಎಳೆದುಕೊಂಡು ಬಂದಿದ್ದ ಮಾಲೀಕ ಸೈಯದ್‌ ಇಸಾಮ್, ಕಾರ್ಮಿಕನನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದಾನೆ.  ಕಳೆದ 9 ದಿನಗಳಿಂದ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಲಾಗುತ್ತಿದೆ. ವಸೀಂ ಕಾಲಿಗೆ ಸರಪಳಿ ಕಟ್ಟಿ ಫ್ಯಾಕ್ಟರಿ ಮಾಲಿಕ ಚಿತ್ರಹಿಂಸೆಯನ್ನು ನೀಡಿದ್ದಾನೆ.

ರೈತರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಖಡಕ್‌ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ!

ಇನ್ನು ಕಾರ್ಮಿಕ ವಸೀಂ ಫ್ಯಾಕ್ಟರಿಯಲ್ಲಿ ಮಾಲೀಕನ ದೌರ್ಜನ್ಯ ಸಹಿಸಿಕೊಂಡು ಕೆಲಸ ಮಾಡುವುದನ್ನು ನೋಡಲಾಗದೆ ಆತನ ಸಹಚರ ಕಾರ್ಮಿಕರು ಪೊಲೀಸರಿಗೆ ಮಾಹಿತಿ ಈಡಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ನಂತರ, ತಹಸೀಲ್ದಾರ್ ಆದೇಶದ ಮೇರೆಗೆ ರಾಮನಗರದ ಪುರ ಪೊಲೀಸರಿಂದ ಫ್ಯಾಕ್ಟರಿ ಮೇಲೆ ದಾಳಿ ಮಾಡಲಾಗಿದೆ. ಫ್ಯಾಕ್ಟರಿ ಮಾಲಿಕ ಸೈಯದ್ ಇಸಾಮ್ ಹಾಗೂ ಕಾರ್ಖಾನೆ ಸೂಪರ್‌ವೈಸರ್ ಅಮ್ಜದ್‌ನನ್ನು ಪೊಲೀಸರು  ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!