
ಬೆಂಗಳೂರು (ಡಿ.1) : ಕೇಂದ್ರ ಬಿಜೆಪಿ ಸರ್ಕಾರವು ಏಕಾಏಕಿ 1ರಿಂದ 8ನೇ ತರಗತಿವರೆಗಿನ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿ ಹೊರಡಿಸಿರುವ ಆದೇಶ ದಲಿತ, ಆದಿವಾಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿರೋಧಿ ಕೃತ್ಯ. ಈ ಸಂವಿಧಾನ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೋದಿ ಸರ್ಕಾರದ ಈ ಶೂದ್ರ ವಿರೋಧಿ ನಿಲುವನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಮುಖ್ಯವಾಗಿ ಕೇಂದ್ರದ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಖಂಡಿಸಬೇಕು. ಜತೆಗೆ ವಿದ್ಯಾರ್ಥಿ ವಿರೋಧಿ ನಿಲುವು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಬೇಕು. ಲೋಕಸಭಾ ಸದಸ್ಯರು ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳೇ... ಈ ಸ್ಕಾಲರ್ಶಿಪ್ಗಳನ್ನು ಗಮನಿಸಿ!
1 ರಿಂದ 8ನೇ ತರಗತಿವರೆಗಿನ ಬಡ ಎಸ್ಸಿ,ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗೆ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25 ರಷ್ಟುಪಾಲುದಾರಿಕೆಯಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ತಿಂಗಳಿಗೆ ತಲಾ 225 ರು., ಹಾಸ್ಟೆನಲ್ಲಿರುವ ವಿದ್ಯಾರ್ಥಿಗಳಿಗೆ ತಲಾ 525 ರು. ವಿದ್ಯಾರ್ತಿವೇತನ ನೆರವು ನೀಡಲಾಗುತ್ತಿತ್ತು. ಕಾರ್ಪೊರೇಟ್ ವಂಚಕರ ಸಹಸ್ರಾರು ಕೋಟಿ ಸಾಲ ಕ್ಷಣಾರ್ಧದಲ್ಲಿ ಮಾಫಿ ಮಾಡುವ ನರೇಂದ್ರ ಮೋದಿ ಅವರು ವಿದ್ಯಾರ್ಥಿವೇತನ ಸ್ಥಗಿತಗೊಳಿಸಿದ್ದಾರೆ. ಇದರ ಹಿಂದೆ ಮನುಸ್ಮೃತಿ ಪ್ರೇರಿತ ತಾರತಮ್ಯ ಸಿದ್ಧಾಂತ ಜಾತಿ ಮಾಡುವ ಮನಸ್ಥಿತಿ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಶೇ.3ರಷ್ಟಿರುವ ಸಮುದಾಯಕ್ಕೆ ಆದ್ಯತೆ:
ಕೇಂದ್ರ ಸರ್ಕಾರ ಕೇವಲ ಶೇ.3 ರಷ್ಟುಜನಸಂಖ್ಯೆ ಹೊಂದಿರುವ ಜಾತಿ ಸಮುದಾಯದ ಮಂದಿಯ ವಾರ್ಷಿಕ ಆದಾಯ 8 ಲಕ್ಷ ರು. ಇದ್ದರೂ ಅವರನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ತೀರ್ಮಾನಿಸಿ ಶೇ.10 ರಷ್ಟುಮೀಸಲಾತಿ ಕೊಡಲು ಸಂಭ್ರಮಿಸುತ್ತಿದೆ. ಮತ್ತೊಂದೆಡೆ ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಶೇ.95 ರಷ್ಟುಜನಸಂಖ್ಯೆ ಇರುವ ಜನ ಸಮುದಾಯದ ಬಡ ಮಕ್ಕಳ ವಿದ್ಯಾರ್ಥಿವೇತನವನ್ನು ನಿಲ್ಲಿಸಿಬಿಟ್ಟಿದೆ. ಸಾಲದಕ್ಕೆ ಇಡಬ್ಲ್ಯೂಎಸ್ ಕೋಟಾದ ಮಕ್ಕಳಿಗೆ ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಂಪನಿಗಳೂ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಸಿಎಸ್ಆರ್ ನಿಧಿಯಡಿ ಹತ್ತಾರು ಕೋಟಿ ದೇಣಿಗೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಬಿಜೆಪಿಗೆ ಕೇವಲ ಶೇ.3 ರಷ್ಟುಜನಸಂಖ್ಯೆ ಇರುವ ಜನರ ಬಗ್ಗೆ ಮಾತ್ರ ಕಾಳಜಿ ಎಂದು ಟೀಕಾಪ್ರಹಾರ ಮಾಡಿದ್ದಾರೆ. ಬಿಜೆಪಿ ಸಂವಿಧಾನ ನಂಬಲ್ಲ: ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ