
ಚಿತ್ರದುರ್ಗ (ಸೆ. 29): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣದಡಿ ಬಂಧಿಯಾಗಿರುವ ಚುತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ಪೀಠದಿಂದ ಕೆಳಗಿಳಿಯಬೇಕು. ನೂತನ ಪೀಠಾಧಿಪತಿ ನೇಮಕವಾಗಬೇಕು ಎಂದು ಚಿತ್ರದುರ್ಗದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ, ಮಠದ ದೈನಂದಿಕ ಚಟುವಟಿಕೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಮುರುಘಾಶ್ರೀ ಪೀಠ ತ್ಯಾಗಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಸಂಪರ್ಕಿಸಲು ಮಾಜಿ ಸಚಿವ ಏಕಾಂತಯ್ಯ ಅವರಿಗೆ ಸಭೆ ಅಧಿಕಾರ ನೀಡಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಚ್. ಏಕಾಂತಯ್ಯ, 'ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಸಕ್ತ ಪೀಠಾಧೀಶರು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಿದೆ. ಇದರಿಂದ ಮಠದ ಧಾರ್ಮಿಕ, ಆಡಳಿತಾತ್ಮಕ ಚಟುವಟಿಕೆಗೆ ಅಡೆತಡೆ ಆಗಿದೆ. ಇಂಥ ಸಂದರ್ಭದಲ್ಲಿ ಹೊಸ ಪೀಠಾದ್ಯಕ್ಷರ ನೇಮಕ ಅಗತ್ಯ. ಸರ್ಕಾರ ವಿಶೇಷ ಸಂದರ್ಭವೆಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಮತ್ತು ನ್ಯಾಯಾಲಯಕ್ಕೆ ತೀರ್ಮಾನದ ಅಧಿಕಾರವಿದೆ. ಕಾನೂನಾತ್ಮಕ ಅಥವಾ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಹೊಸ ಪೀಠಾದ್ಯಕ್ಷರ ಆಯ್ಕೆಗೆ ಸರ್ಕಾರಕ್ಕೆ ಮನವಿ: ಸಮಯಾವಕಾಶ ನೋಡಿ ಸಿಎಂ ಭೇಟಿಗೆ ತೀರ್ಮಾನಿಸಿದ್ದೇವೆ. ಈಗಿನ ಪೀಠಾದ್ಯಕ್ಷರನ್ನು ವಜಾಗೊಳಿಸಿ ಹೊಸಬರ ನೇಮಕಕ್ಕೆ ಆಗ್ರಹಿಸುವುದಾಗಿ ಹೇಳಿದರು. ಇದೇ ವೇಲೆ ಮುರುಘಾ ಶ್ರೀ ಅವರು ನಿರ್ದೋಷಿಯಾಗಿ ಬಂದರೆ ಎನ್ನುವ ಪ್ರಶ್ನೆಗೆ ಏಕಾಂತಯ್ಯ ಉತ್ತರಿಸಲು ನಿರಾಕರಿಸಿದ್ದಾರೆ. ಅದೇ ವೇಳೆ ಈ ಹಿಂದೆಯೇ ಮುರುಘಾಶ್ರೀ ಉತ್ತರಾಧಿಕಾರಿಯನ್ನು ನೇಮಿಸಿದ್ದರು. ಆ ವ್ಯಕ್ತಿ ಪೀಠಾಧ್ಯಕ್ಷನಾಗಲು ಅರ್ಹನಲ್ಲವೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ಈ ಉತ್ತರಾಧಿಕಾರಿ ಆಯ್ಕೆ ಕಾನೂನು ಪ್ರಕಾರ ಆಗಿದೆಯೇ ಇಲ್ಲವೇ ನೋಡಬೇಕು.ಮುರುಘಾಶ್ರೀ ಉತ್ತರಾಧಿಕಾರಿ ನೇಮಿಸಿದ ಬಗ್ಗೆ ನಾವು ಚಿಂತನೆ ಮಾಡಿಲ್ಲ ಎಂದು ಹೇಳಿದರು.
ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ (Chitradurga) ನಡೆದ ಸಭೆಯ ಬಳಿಕ ಮಾತನಾಡಿರುವ ಬಿಜೆಪಿ ಎಂಎಲ್ಸಿ ಹಾಗೂ ಮುರುಘಾಮಠದ ಗವರ್ನಿಂಗ್ ಕಮಿಟಿ ಸದಸ್ಯರಾಗಿರುವ ಕೆಎಸ್ ನವೀನ್, ಮುರುಘಾಮಠ ಪ್ರಾಚೀನ ಕಾಲದ ಪ್ರಸಿದ್ಧ ಮಠ. ಮಠದ ಗೌರವಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಈ ಸಂದರ್ಭದಲ್ಲಿ ಸಂಕಷ್ಟ ಒದಗಿ ಬಂದಿದೆ. ಕಾನೂನಿನ ಚೌಕಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಮುಕ್ತವಾದ ರೀತಿಯಲ್ಲಿ ತನಿಖೆ ನಡೆಯುವಂತಾಗಬೇಕು. ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆಯ ಕೆಲಸ ಮಾಡುತ್ತಿದೆ. ಸಾವಿರಾರು ಕುಟುಂಬಗಳು ಮಠದ ಆಶ್ರಯದಲ್ಲಿವೆ ಎಂದು ಹೇಳಿದರು.
ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!
ಹೊಸ ಪೀಠಾದ್ಯಕ್ಷರ ನೇಮಕಕ್ಕೆ ಸಭೆ ಒತ್ತಾಯಿಸಿದೆ. ಸರ್ಕಾರ, ಸಿಎಂ, ಮಾಜಿ ಸಿಎಂ ಬಿಎಸ್ ವೈ ಈ ಪ್ರಕ್ರಿಯೆಗೆ ಸಾಥ್ ನೀಡಬೇಕು. ಈಗಾಗಲೇ ಮುರುಘಾಮಠದ ವಿಚಾರ ಸರ್ಕಾರ, ಬಿಎಸ್ ಯಡಿಯೂರಪ್ಪ (BS Yediyurappa) ಅವರ ಗಮನದಲ್ಲಿದೆ. ಎಲ್ಲಾ ಸಮಾಜದವರೂ ಮುರುಘಾಮಠದ (Murugha Mutt) ಭಕ್ತರಾಗಿದ್ದಾರೆ. ಹಿರಿಯ ಭಕ್ತರ ಸಮಿತಿ, ಹಿರಿಯ ಸ್ವಾಮೀಜಿಗಳ ಸಮಿತಿ ರಚಿಸುತ್ತೇವೆ. ಸರ್ಕಾರದ ಜತೆ ಚರ್ಚಿಸಿ ಕಾನೂನು ಕಗ್ಗಂಟಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
Coronary Angiogram ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್
ಪೋಕ್ಸೋ ಪ್ರಕರಣದಲ್ಲ ಜೈಲುಪಾಲಾಗಿರುವ ಮುರುಘಾ ಮಠದ ಮುರುಘಾ ಶ್ರೀಗಳನ್ನು (Shivamurthy Murugha Sharanaru) ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಮುರುಘಾಮಠ ಪರಂಪರೆ ಉಳಿಸಿ ಸಭೆ ಗುರುವಾರ ನಡೆಸಿತ್ತು. ಸಭೆಯು ಗದ್ದಲದೊಂದಿಗೆ ಆರಂಭವಾಯಿತು. ಶಿವಮೂರ್ತಿ ಮುರುಘಾಶರಣರ ಹೆಸರು ಹೇಳಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವವನ ಹೆಸರು ಹೇಳಬಾರದೆಂದು ಆಗ್ರಹ. ಲಿಂಗಾಯಿತರ ಮಾನ ಕಳೆದಿದ್ದಾನೆ. ಇಂತಹವರ ಹೆಸರು ಹೇಳಬಾರದು. ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಪೋಟೋ ತೆಗೆದುಹಾಕುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತಪಡಿಸಲಾಗಿದೆ. ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ವೀರಶೈವ ಸಮಾಜದ ಮುಖಂಡ ಸೈಟ್ ಬಾಬು, ಮುರುಘಾಮಠದ ಪರಂಪರೆ, ಸಂಸ್ಕೃತಿ ಉಳಿಯಬೇಕು. ಮಠಕ್ಕೆ ಹೊಸ ಸ್ವಾಮೀಜಿ ನೇಮಕ ಆಗಬೇಕು. ಮುರುಘಾಮಠದಲ್ಲಿ ಈಗಿರುವ ಸಮಿತಿಗಳು ರದ್ದಾಗಬೇಕು. ನಾವೆಲ್ಲಾ ಮಠಕ್ಕೆ ಹೋಗಿ ಮಠದಲ್ಲಿದ್ದವರನ್ನು ಹೊರ ಹಾಕೋಣ ಎಂದು ಕಿಡಿಕಾರಿದ್ದಾರೆ.
ಮುರುಘಾ ಶ್ರೀ ಅರ್ಜಿ ವಿಚಾರಣೆ: ಈ ನಡುವೆ ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದೆ. ಸೆಲ್ಫ್ ಚೆಕ್ ಗಳಿಗೆ ಸಹಿ ಹಾಕಲು ಶ್ರೀಗಳು ಅನುಮತಿ ಕೋರಿದ್ದರು. ಬಸವೇಶ್ವರ ಆಸ್ಪತ್ರೆ ಹೆಸರಿಗೆ 101 ಚೆಕ್ ಗೆ ಸಹಿ ಹಾಕಬೇಕೆಂದು ಅವರು ಉಲ್ಲೇಖ ಮಾಡಿದ್ದರು. ಇದನ್ನು ಪ್ರಶ್ನಿಸಿದ ಕೋರ್ಟ್, ಎಲ್ಲವೂ ಸೆಲ್ಫ್ ಚೆಕ್ ಗಳೇ ಏಕೆ ? ಸಂಸ್ಥೆ ಹೆಸರಿಗೆ ಏಕಿಲ್ಲ ? ಮೆಮೋ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ ಎಂದು ಹೇಳಿದೆ. ಸಮರ್ಪಕ ಮಾಹಿತಿಯುಳ್ಳ ಮೆಮೋ ಸಲ್ಲಿಸಲು ಹೈಕೋರ್ಟ್ ಈ ವೇಳೆ ಸೂಚಿಸಿದ್ದಲ್ಲದೆ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ