
ಬೆಂಗಳೂರು (ಆ.02): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬಕ್ಕಾಗಿ ‘ಮೈಸೂರು ಹುಲಿಯಾ...’ ಮತ್ತು ‘ಸೆಲ್ಫ್ ಮೇಡ್ ಸಿದ್ದಣ್ಣ..!’ ಎಂಬ ಸಿನಿಮಾ ಮಾದರಿಯ ಎರಡು ಹಾಡುಗಳು ಸಿದ್ಧಗೊಂಡಿದ್ದು, ಆ.3 ರಂದು ಬಿಡುಗಡೆಯಾಗುತ್ತಿವೆ. ಎರಡೂ ಹಾಡುಗಳಿಗೂ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಒಂದು ಹಾಡು ಸಲಗ ಸಿನಿಮಾದ ‘ಟಿಣಿಂಗ ಮಿಣಿಂಗ ಟಿಶ್ಯಾ’ ಖ್ಯಾತಿಯ ಗಿರಿಜಾ ಸಿದ್ದಿ, ಮತ್ತೊಂದು ಹಾಡು ‘ಚುಟುಚುಟು ಅಂತೈತಿ’ ಖ್ಯಾತಿಯ ರವೀಂದ್ರ ಸೊರಗಾವಿ ದನಿಯಲ್ಲಿ ಮೂಡಿಬರುತ್ತಿರುವುದು ವಿಶೇಷ.
ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐದಾರು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಈ ವೇದಿಕೆಯಲ್ಲಿ ಹಾಡಲು ಸಿದ್ದರಾಮಯ್ಯ ಅವರ ಜೀವನ ಕುರಿತ ಅಂಶಗಳನ್ನು ಒಳಗೊಂಡ ಎರಡು ಹಾಡುಗಳನ್ನು ಸಿದ್ಧಪಡಿಸಲಾಗಿದೆ. ಎರಡು ಕೂಡಾ ಲಿರಿಕಲ್ ವಿಡಿಯೋ ಹಾಡುಗಳಾಗಿದ್ದು, ಈಗಾಗಲೇ ರೆಕಾರ್ಡ್ ಮಾಡಲಾಗಿದೆ. ಎ2 ಎಂಟರ್ಟೈನ್ಮೆಂಟ್ ಯುಟ್ಯೂಬ್ ಚಾನೆಲ್ನಲ್ಲಿ ಕೂಡಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಸಿದ್ದರಾಮೋತ್ಸವ: ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ, ಇಲ್ಲಿದೆ ಊಟದ ಮೆನು
ಮೈಸೂರು ಹುಲಿಯಾ..! ಎಂಬ ಹಾಡನ್ನು ‘ಸಲಗ’ ಚಿತ್ರದ ಬಳಿಕ ಮನೆಮಾತಾಗಿದ್ದ ಗಿರಿಜಾ ಸಿದ್ದಿ ಅವರು ಹಾಡಿದ್ದು, ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ದನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ‘ಕೈ ಹಿಡಿಯೋ ಕೈ ಸಿದ್ದರಾಮಯ್ಯ...’ಎಂಬ ಸಾಲುಗಳು ಈ ಹಾಡಿನಲ್ಲಿವೆ. ‘ಸೆಲ್ಫ್ ಮೇಡ್ ಸಿದ್ದಣ್ಣ..!’ ಎಂಬ ಹಾಡಿಗೆ ರ್ಯಾಂಬೊ 2 ಸಿಮಿಮಾದ ‘ಚುಟುಚುಟು ಅಂತೈತಿ’ ಹಾಡು ಹಾಡಿದ್ದ ರವೀಂದ್ರ ಸೊರಗಾವಿ ದನಿ ನೀಡಿದ್ದಾರೆ. ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಥರ ಥರ ಟಗರು ಥರ ಎಂಬ ಸಾಲುಗಳು ಈ ಹಾಡಿನಲ್ಲಿವೆ.
ಸಿದ್ದು ಮನೆ ಮುಂದೆ ಕಟೌಟ್, ಫ್ಲೆಕ್ಸ್ ಅಬ್ಬರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಅದ್ದೂರಿ ಆಚರಣೆ ಹಿನ್ನೆಲೆ ಬೆಂಗಳೂರಿನ ಅವರ ನಿವಾಸದ ಮುಂಭಾಗ, ರಸ್ತೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಶುಭಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಒಂದು ವಾರದ ಹಿಂದಿನಿಂದಲೇ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯಅವರ ಅಧಿಕೃತ ನಿವಾಸದ ಬಳಿ ಹುಟ್ಟುಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್ ಹಾಕುವ ಕೆಲಸ ಆರಂಭವಾಗಿದ್ದು, ದಾವಣಗೆರೆ ಕಾರ್ಯಕ್ರಮ ದಿನ ಸಮೀಪಿಸುತ್ತಿದ್ದಂತೆ ಫ್ಲೆಕ್ಸ್ಗಳ ಸಂಖ್ಯೆ ಹೆಚ್ಚಾಗಿದೆ. ಜನ ನಾಯಕ, ಜನರ ಮೆಚ್ಚಿದ ನಾಯಕ ಎಂಬ ಸಾಲುಗಳನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಕಾರ್ಯಕರ್ತರು ಹಾಕಿದ್ದಾರೆ. ಜತೆಗೆ ಸಿದ್ದರಾಮಯ್ಯನವರ 20 ಅಧಿಕ ಎತ್ತರದ ದೊಡ್ಡ ಕಟೌಟ್ ಅನ್ನು ಮನೆಯ ಮುಂಭಾಗ ನಿಲ್ಲಿಸಲಾಗಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಐತಿಹಾಸಿಕ ಸಭೆ
ಸಿಎಂ ಘೋಷಣೆ: ಆ.3ರ ದಾವಣಗೆರೆ ಕಾರ್ಯಕ್ರಮದ ಕುರಿತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಸಿದ್ದರಾಮಯ್ಯನವರ ಮನೆಯ ಬಳಿ ಕಳೆದ ಎರಡು ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಶುಭ ಕೋರುತ್ತಿದ್ದಾರೆ. ಕೆಲ ಕಾರ್ಯಕರ್ತರು ಅಭಿಮಾನಿಗಳು ಮುಂದಿನ ಸಿಎಂ ಎಂದು ಘೋಷಣೆ ಕೂಗಿ ತಮ್ಮ ಸಂತಸ ವ್ಯಕ್ತಪಡಿಸಿದರು. ಸೋಮವಾರ ಸಂಜೆ ಬಳಿಕ ದೂರದ ಊರುಗಳಿಂದ ಕಾಂಗ್ರೆಸ್ ಶಾಸಕ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕೆಪಿಸಿಸಿ ವಿವಿಧ ವಿಭಾಗಗಳ ಮುಖ್ಯಸ್ಥರು, ಸದಸ್ಯರು, ಚಲನಚಿತ್ರ ವಾಣಿಜ್ಯ ನಿಯಂತ್ರಣ ಮಂಡಳಿ ಸಮಸ್ಯರು, ಸಿನಿಮಾ ಮಂದಿ, ಸಿದ್ದರಾಮಯ್ಯನವರ ಅಭಿಮಾನಿಗಳು ಆಗಮಿಸಿ ಶುಭಾಶಯಗಳ ಕೋರುತ್ತಿರುವ ದೃಶ್ಯ ಕಂಡುಬಂದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ