ಬಾರುಕೋಲಿನಿಂದ ಹೊಡೆಯುವ ಕಾರ್ಯಕ್ರಮವಿದೆಯಾ ಎಂದು ಶ್ರೀಗಳನ್ನು ಕೇಳಿದ್ದೆ: ಶಾಸಕ ಕಳಕಪ್ಪ ಬಂಡಿ

By Govindaraj SFirst Published Dec 5, 2022, 12:30 AM IST
Highlights

ಲಕ್ಷ್ಮೇಶ್ವರದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾವೇಶಕ್ಕೆ ಶ್ರೀಗಳು ಆಹ್ವಾನ ನೀಡಿದಾಗ, ಮೀಸಲಾತಿ ಕೊಡುವ ಸ್ಥಾನದಲ್ಲಿದ್ದವರನ್ನು ಬಾರುಕೋಲಿನಿಂದ ಹೊಡೆಯುವ ಕಾರ್ಯಕ್ರಮವಿದೆಯಾ ಎಂದು ಕೇಳಿದ್ದೆ. ಅದಕ್ಕೆ ಅವರು ಇಲ್ಲ ಎಂದು ಹೇಳಿದರು.

ಲಕ್ಷ್ಮೇಶ್ವರ (ಡಿ.05): ಲಕ್ಷ್ಮೇಶ್ವರದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾವೇಶಕ್ಕೆ ಶ್ರೀಗಳು ಆಹ್ವಾನ ನೀಡಿದಾಗ, ಮೀಸಲಾತಿ ಕೊಡುವ ಸ್ಥಾನದಲ್ಲಿದ್ದವರನ್ನು ಬಾರುಕೋಲಿನಿಂದ ಹೊಡೆಯುವ ಕಾರ್ಯಕ್ರಮವಿದೆಯಾ ಎಂದು ಕೇಳಿದ್ದೆ. ಅದಕ್ಕೆ ಅವರು ಇಲ್ಲ ಎಂದು ಹೇಳಿದರು. ನಮ್ಮ ಹೋರಾಟ ಪ್ರಾಮಾಣಿಕವಾಗಿದ್ದರೆ ನಾವು ಚೌಕಟ್ಟು ಮೀರಿ ಮಾತನಾಡುವ ಅಗತ್ಯವಿಲ್ಲ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.

ಅವರು ಭಾನುವಾರ ಪಟ್ಟಣದ ಸೋಮೇಶ್ವರ ತೇರಿನಮನೆ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಪಂಚಮಸಾಲಿ 2ಎ ಮೀಸಲಾತಿ ಹಾಗೂ ಕೇಂದ್ರ ಓಬಿಸಿ ಮೀಸಲಾತಿಗಾಗಿ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಹರಿಹರದ ಪಂಚಮಸಾಲಿ ಪೀಠದ ಶ್ರೀಗಳು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಚೆಪ್ಪಾಳೆ ಗಿಟ್ಟಿಸಿಕೊಳ್ಳಲು ಕೆಲವರು ನಮ್ಮಲ್ಲೆ ತಯಾರಾಗಿ ನಿಂತಿದ್ದಾರೆ. ಮೀಸಲಾತಿ ನೀಡದೇ ಇದ್ದಲ್ಲಿ ಬಾರುಕೋಲು ತಗೆದುಕೊಂಡು ಹೋಗಿ ಹೊಡಿತೀವಿ ಅಂತಾ ಬೆದರಿಕೆ ಹಾಕುತ್ತಾರೆ. ನಾವು ಹೇಳಿದಾಗ ಮೀಸಲಾತಿ ನೀಡದೇ ಇದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಾರೆ.

ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಕಳೆದ 2 ವರ್ಷಗಳ ಹಿಂದೆ ಹಾಲುಮತದ ಸಮಾಜದವರು ಎಸ್‌ಟಿ ಸೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಿದ್ದರು. ಆಗ ಕಾಗಿನೆಲೆ ಶ್ರೀಗಳು, ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ರಾಜನಿದ್ದಂತೆ ನಾವು ಕೇಳೋ ಸ್ಥಾನದಲ್ಲಿದ್ದೇವೆ, ನೀವು ಕೊಡೊ ಸ್ಥಾನದಲ್ಲಿದ್ದೀರಿ ಎಂದು ವಿನಂತಿ ಮಾಡಿಕೊಂಡರು. ಅದು ಮೀಸಲಾತಿ ಕೇಳುವ ಪದ್ಧತಿ. ಆದರೆ, ಮುಖ್ಯಮಂತ್ರಿಗಳ ಬಳಿ ಮನವಿ ಮಾಡೋದನ್ನ ಬಿಟ್ಟು ಮೀಸಲಾತಿ ಕೊಡದಿದ್ರೆ ಹೊಡೆದು ಬಿಡುತ್ತೇನೆ, ನಿನ್ನ ರುಂಡ ತೆಗೆಯುತ್ತೇನೆ ಅಂತಾ ಬೆದರಿಕೆ ಹಾಕಿದರೆ ಹೇಗೆ. ಹಾಗೆಲ್ಲ ಮಾಡಿದರೆ ಮೀಸಲಾತಿ ಅಲ್ಲ, ನೀರು ಸಹ ಕೋಡೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೆಸರು ಹೇಳದೇ ಶಾಸಕ ಕಳಕಪ್ಪ ಬಂಡಿ ಟಾಂಗ್‌ ನೀಡಿದರು.

ಚಳಿಗಾಲದ ಅಧಿವೇಶನದಲ್ಲೇ ಮೀಸಲಾತಿ ನೀಡಬೇಕು: ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು. ಕುಲಶಾಸ್ತ್ರ ಅಧ್ಯಯನ ಮಾಡಿ ಕಾನೂನು ಬದ್ಧವಾಗಿ ಮೀಸಲಾತಿ ನೀಡಬೇಕು ಎಂದು ಹರಿಹರದ ಪಂಚಮಸಾಲಿ ಪೀಠದ ಜ. ವಚನಾನಂದ ಶ್ರೀಗಳು ಆಗ್ರಹಿಸಿದರು. ಅವರು ಭಾನುವಾರ ಪಟ್ಟಣದ ಸೋಮೇಶ್ವರ ತೇರಿನಮನೆ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಪಂಚಮಸಾಲಿ 2ಎ ಮೀಸಲಾತಿ ಹಾಗೂ ಕೇಂದ್ರ ಓಬಿಸಿ ಮೀಸಲಾತಿಗಾಗಿ ಬೃಹತ್‌ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಬರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು. ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಬಗ್ಗೆ ಕುಲಸಾಶತ್ರ ಅಧ್ಯಯನ ಮಾಡಿ ಕಾನೂನು ಬದ್ಧವಾಗಿ ಮೀಸಲಾತಿ ನೀಡಬೇಕು. ಮೀಸಲಾತಿ ಸಿಗುವ ವರೆಗೆ ನಾವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಪಂಚಮಸಾಲಿ ಸಮಾಜದ ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡುವ ವಿಶ್ವಾಸವಿದೆ ಎಂದ​ರು. 

ಪ್ರಾಣಕೊಟ್ಟು ಹೋರಾಡಿ ಪಕ್ಷ ಗೆಲ್ಲಿಸುತ್ತೇವೆ: ಎಚ್‌.ಡಿ.ದೇವೇಗೌಡ

ಬಿಎಸ್‌ವೈ ಚೇರ್‌ ಬಿಟ್ಟು ಎದ್ದಾಗಲೇ ಪಂಚಮಸಾಲಿ ಸಮಾಜವೂ ಎದ್ದಿತು. ಈ ಹಿಂದೆ ಹರ ಜಾತ್ರೆಯಲ್ಲಿ ನಡೆದ ಘಟನೆ ನೆನಪು ಮಾಡಿಕೊಂಡು ಮಾತನಾಡಿದ ಶ್ರೀಗಳು, ಯಾವಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಚೇರ್‌ ಬಿಟ್ಟಿಎದ್ದರೋ ಆವಾಗಲೇ ಪಂಚಮಸಾಲಿ ಸಮುದಾಯ ಎದ್ದಿತು. 2020ರಲ್ಲಿ ನಡೆದ ಹರ ಜಾತ್ರೆಯಲ್ಲಿ ಬಿಎಸ್‌ವೈ ಚೇರ್‌ ಬಿಟ್ಟು ಎದ್ದಿದ್ರು. ಆಗಿನ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದೆವು. ಬಿಎಸ್‌ವೈ ಖುರ್ಚಿ ಬಿಟ್ಟು ಎದ್ರೋ ಆಗಲೇ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಎದ್ದಿತು.

click me!