ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ

By Govindaraj SFirst Published Dec 4, 2022, 11:59 PM IST
Highlights

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಜಾಯ್ನ್ ಸಿ.ಎಫ್.ಐ. ಎಂಬ ಬರಹಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. 

ಚಿಕ್ಕಮಗಳೂರು (ಡಿ.04): ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಜಾಯ್ನ್ ಸಿ.ಎಫ್.ಐ. ಎಂಬ ಬರಹಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. ಪಿ.ಎಫ್.ಐ, ಸಿ.ಎಫ್.ಐ ಬ್ಯಾನ್ ಆಗಿದ್ದರೂ ಕೂಡ ಆ ಮನಸ್ಥಿತಿಯ ಜನ ಇನ್ನೂ ಇದ್ದಾರೆ. ಇದು ಇಂದು-ನಿನ್ನೆಯದ್ದಲ್ಲ. ಏಳನೇ ಶತಮಾನದಿಂದಲೂ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂಬ ಮನೋಭಾವದವರು ಹೀಗೆ ಮಾಡುತ್ತಾರೆ. 

ಇದು ಗಜಾವಹಿಂದ್ ಹೆಸರಲ್ಲಿ 7ನೇ ಶತಮಾನದಲ್ಲಿ ಶುರುವಾದದ್ದು ಎಂದರು. ಆ ಮನಸ್ಥಿತಿಯ ಜನ ಇದ್ದಾರೆ ಎಂಬ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈಹಾಕಿದ್ದು. ಆ ಮನಸ್ಥಿತಿಯ ಜನ ಇರುವವರೆಗೂ ಈ ರೀತಿ ಮಾಡುತ್ತಲೇ ಇರುತ್ತಾರೆ. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದರೂ ಅವರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತಹಾಕಿದರೆ ಅವರು ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮುಲ್ಲಾ ಖಾನ್ ಹೇಳಿಕೆಗೆ ಸಿ ಟಿ ರವಿ ಮನೆಗೆ ಕಾಂಗ್ರೆಸ್ ಮುತ್ತಿಗೆ, ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ

ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಕಕ್ಕೆ ಕ್ರಮ: ದತ್ತಪೀಠದ ವಿಚಾರದಲ್ಲಿ ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷವು ಜನರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದು, ಸಚಿವ ಸಂಪುಟ ಉಪಸಮಿತಿಯ ನಿರ್ಣಯದ ಶಿಫಾರಸುಗಳನ್ನು ಅಂಗೀಕರಿಸಿ ಆಡಳಿತ ಮಂಡಳಿ ರಚನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಅರ್ಚಕರ ನೇಮಕಕ್ಕಿದ್ದ ಅಡೆತಡೆ ಈಗ ನಿವಾರಣೆಯಾಗಿದ್ದು, ಹಿಂದೂ ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ದತ್ತ ಜಯಂತಿ 4-5 ದಶಕಗಳ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಉಪಸಮಿತಿಗೆ ಧನ್ಯವಾದಗಳು ಎಂದು ಹೇಳಿದರು.

ಸರ್ಕಾರಿ ದಾಖಲೆಗಳ ಪ್ರಕಾರ ಉಳುವವನೇ ಹೊಲದೊಡೆಯ ಮಸೂದೆಗೆ ಮುಂಚೆ ದತ್ತಾತ್ರೇಯ ದೇವರ ಹೆಸರಲ್ಲಿ 1,861 ಎಕರೆ ಜಾಗ ಇತ್ತು. ಕಾಂಗ್ರೆಸ್‌ ಆಡಳಿತವಿದ್ದಾಗ ದತ್ತಾತ್ರೇಯ ದೇವರ ಹೆಸರಿನ ಜಮಿನನ್ನು ಗೇಣಿದಾರರೂ ಅಲ್ಲದವರಿಗೆ ಕಾಂಗ್ರೆಸ್‌ ಮುಖಂಡರು ಅಕ್ರಮವಾಗಿ ಮಂಜೂರು ಮಾಡಿದ್ದರೆಂಬ ಮಾಹಿತಿ ಮೇಲ್ನೋಟಕ್ಕೆ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಅಕ್ರಮ ಮಂಜೂರಾತಿ ರದ್ದು ಮಾಡಬೇಕು. ಕಾಂಗ್ರೆಸ್‌ ವಿರೋಧದ ಹಿಂದೆ ಮತೀಯ ಓಲೈಕೆ ಜತೆಗೆ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ ಆಸ್ತಿ ಹೊಡೆಯುವ ಸಂಚು ಇತ್ತು ಎಂದ ಅವರು ದತ್ತಾತ್ರೇಯ ದೇವರ ಹೆಸರಿಗೆ ಜಮೀನು ಕಾಯ್ದಿರಿಸಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಲು ರಾಜ್ಯಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ರಾಮುಲ್ಲಾ ಖಾನ್‌ ಬಂದ್ರೆ ಹಿಂದುಗಳ ಹತ್ಯೆ: ಸಿ.ಟಿ.ರವಿ

ಹಿಂದೆ ಸುಪ್ರೀಂಕೋರ್ಟ್‌ ದತ್ತಪೀಠದ ವಿಚಾರದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಇದು ಸೂಕ್ಷ್ಮ ವಿಚಾರ ಎಂದು ಹೇಳಿತ್ತು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಂಡಿದ್ದರು. ಹಿಂದೂ ಅರ್ಚಕರ ನೇಮಕಾತಿ ತಿರಸ್ಕರಿಸಿದ ಸಿದ್ದರಾಮಯ್ಯ ಅವರದು ಯಾವ ಸೀಮೆ ಜಸ್ಟಿಸ್‌, ಇನ್‌ಸಾನಿಯತ್‌ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಜಗದೀಶ್‌ ಹಿರೇಮಠ ಇತರರು ಉಪಸ್ಥಿತರಿದ್ದರು.

click me!