Anti Conversion Law in Karnataka: ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?: ಈಶ್ವರಪ್ಪ

Published : Dec 12, 2021, 06:37 AM IST
Anti Conversion Law in Karnataka: ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?: ಈಶ್ವರಪ್ಪ

ಸಾರಾಂಶ

*ಅಧಿವೇಶನ ಆರಂಭಕ್ಕೂ ಮುನ್ನ ಬಿಜೆಪಿ-ಪ್ರತಿಪಕ್ಷ ವಾಕ್ಸಮರ *ಕಾಯ್ದೆ ತಿದ್ದುಪಡಿಗೆ ಬದ್ಧ: ಈಶ್ವರಪ್ಪ *ಮಸೂದೆ ಮಂಡನೆಗೆ ಬಿಜೆಪಿ ಜನಪ್ರತಿನಿಧಿಗಳ ಒತ್ತಾಯ *ಮಸೂದೆ ಮಂಡಿಸಿದರೆ ವಿರೋಧ: ಡಿಕೆಶಿ ಎಚ್ಚರಿಕೆ *ಹೊಸ ಮಸೂದೆ ಬೇಡ: ಕ್ರೈಸ್ತರ ಮನವಿ

ಬೆಂಗಳೂರು(ಡಿ. 12): ಸೋಮವಾರ (ಡಿ. 13)ದಿಂದ ಬೆಳಗಾವಿಯಲ್ಲಿ ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ (Karnataka Assembly Session) ಮತಾಂತರ ನಿಷೇಧ ಕಾಯ್ದೆ (Anti Conversion Law) ಮಂಡನೆ ಮಾಡುವ ರಾಜ್ಯ ಸರ್ಕಾರದ ಘೋಷಣೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದೆ. ಮತಾಂತರ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲೇ ಮಂಡನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಆದರೆ ಬಿಜೆಪಿ ನಾಯಕರು ಸರ್ಕಾರದ ಸಮರ್ಥನೆಗೆ ಇಳಿದಿದ್ದಾರೆ. ಈ ನಡುವೆ, ಕ್ರೈಸ್ತ ಸಮುದಾಯದ ಮುಖಂಡ ರೊನಾಲ್ಡ್‌ ಕೊಲಾಸೋ ನೇತೃತ್ವದ ಕೈಸ್ತ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಮನವಿ ಮಾಡಿದೆ. ಕೆಲ ಮುಸ್ಲಿಂ ಸಂಘಟನೆಗಳು ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕೂಡ ಮತಾಂತರ ನಿಷೇಧ (ಕಾಯ್ದೆ) ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿಯಾಗದೇ ಹೋದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಧರ್ಮವನ್ನು ಬಲಿ ಕೊಡಬೇಕಾ?

ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಲು ಬದ್ಧವಿದೆ. ಬೆಳಗಾವಿ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಮಾಡಲಾಗುವುದು. ವೋಟಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತಾಂತರದ ಪರ ನಿಲ್ಲುತ್ತಾರೆ. ಇವರ ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ? ಎಂದು ಗ್ರಾಮೀಣಾಭಿವೃದ್ಧಿ ಸಚಿವ
ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದ್ದಾರೆ̤

Black Money : ಆರ್‌ಎಸ್‌ಎಸ್‌ ಭವನಗಳ ನಿರ್ಮಾಣಕ್ಕೆ ಕಪ್ಪುಹಣ ಬಳಕೆ - ಮೋಯ್ಲಿ

ಬಿಜೆಪಿಗರ ಸಮರ್ಥನೆ:

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಕಾಯ್ದೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ಅಧಿವೇಶನ ಅಥವಾ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆಯಾಗಲಿದೆ ಎಂದು ಹೇಳಿದರೆ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ರೇಣುಕಾಚಾರ್ಯ ಅವರು ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆಯಾಗಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ.

ಸಮುದಾಯ ಗುರಿ:

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ಇದು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾಡುತ್ತಿರುವ, ಸಂವಿಧಾನಕ್ಕೆ ವಿರುದ್ಧವಾದ ಕ್ರಮ ಎಂದು ಕಿಡಿಕಾರಿದ್ದಾರೆ.

Anti Conversion Bill: ಇದು ಸಂವಿಧಾನಕ್ಕೆ ವಿರುದ್ಧವಾದ ಪ್ರ್ರಕ್ರಿಯೆ: ವೀರಪ್ಪ ಮೊಯ್ಲಿ

ಬಿಜೆಪಿ ತರಾಟೆ:

ಇನ್ನು, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಟ್ವೀಟ್‌ ಮೂಲಕ ತರಾಟೆಗೆ ತೆಗೆದುಕೊಂಡಿದ್ದು, ನಿಮಗೆ ಸಮುದಾಯಕ್ಕಿಂತಲೂ ರಾಜಕೀಯ ಲಾಭವೇ ಮುಖ್ಯವಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೆ ಒಂದು ವರ್ಗದ ಜನರಿಗೆ ನೋವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹಂಗಾಮಿ ಅಧಿನಾಯಕಿಗೆ ನೋವಾಗಬಹುದು. ಹಿಂದುಗಳ ಭಾವನೆಗಳಿಗಿಂತಲೂ ಹೆಚ್ಚಾಗಿ ನಿಮಗೆ ರಾಜಕೀಯ ಲಾಭವೇ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ಸಿಗರ ಪೈಪೋಟಿ

ಮತಾಂತರ ನಿಷೇಧ ಕಾಯ್ದೆ ವಿರೋಧಿಸುವಲ್ಲಿಯೂ ಕಾಂಗ್ರೆಸ್‌ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಡಿ.ಕೆ.ಶಿವಕುಮಾರ್‌ ಸರದಿ. ಟಿಪ್ಪು ಜಯಂತಿ ಆಚರಣೆ ನಡೆಸಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ನೀವು ಯಾರನ್ನೋ ಮೆಚ್ಚಿಸಲು ಕನಕಪುರದಲ್ಲಿ ಅಕ್ರಮವಾಗಿ ಏಸುವಿನ ಏಕಶಿಲಾ ವಿಗ್ರಹ ಸ್ಥಾಪನೆಗೆ ಹೊರಟವರಲ್ಲವೇ? ನೀವು ವಿರೋಧಿಸುವುದರಲ್ಲಿ ಅತಿಶಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಸರ್ಕಾರ 2 ಯೋಜನೆ ರೂಪಿಸಿದೆ

ಸರ್ಕಾರವು ಹೆಚ್ಚುವರಿ ಮತಾಂತರ ನಿಷೇಧ ಕಾಯ್ದೆ ತರಲು 2 ಯೋಜನೆ ರೂಪಿಸಿದೆ. ಮೊದಲನೆಯದು ಅಧಿಕೃತವಾಗಿ ಮಸೂದೆ ತರುವುದು, ಮತ್ತೊಂದು ಖಾಸಗಿಯಾಗಿ ತರುವುದು. ಇದನ್ನು ವಿಶ್ವವೇ ಗಮನಿಸುತ್ತಿದೆ. ಸರ್ಕಾರವು ಬೆಳಗಾವಿಯ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾದರೆ ನಾವು ಸಂಪೂರ್ಣ ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Religious Conversion: ಮತಾಂತರ ನಿಷೇಧ ಮಸೂದೆಗೆ ವಿರೋಧ: ಡಿಕೆಶಿ

ಕಾಯ್ದೆ ತರದಿದ್ದರೆ ಹೋರಾಟ

ಯಾವುದೇ ಕಾರಣಕ್ಕೂ ಸರ್ಕಾರ ಒತ್ತಡಕ್ಕೆ ಮಣಿಯಬಾರದು. ಇತರೆ ಧರ್ಮೀಯರು ಮತಾಂತರ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲೇ ಇರುವ ಕಾಂಗ್ರೆಸ್ಸಿಗರು, ಜೆಡಿಎಸ್‌ನವರು ಈ ಸಂಬಂಧ ಆಟವಾಡಬಹುದು. ಇದಕ್ಕೆ ಸರ್ಕಾರ ಸೊಪ್ಪು ಹಾಕಬಾರದು. ಸರ್ಕಾರ ಕಾಯ್ದೆ ಜಾರಿಗೆ ತರದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಬಿಜೆಪಿಗೆ ರಾಜಕೀಯ ಲಾಭದಾಸೆ

ಮತಾಂತರ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ವಸುಧೈವ ಕುಟುಂಬಕಂ ಆದರ್ಶಕ್ಕೆ ವಿರುದ್ಧವಾದುದು. ಈ ಕಾಯ್ದೆಯಿಂದ ಒಂದು ಜಾತಿಯ ಮತ ಧ್ರುವೀಕರಣ ಆಗಿ ರಾಜಕೀಯ ಲಾಭ ಆಗುತ್ತದೆಂದು ಬಿಜೆಪಿ ಭಾವಿಸಿದೆ. ಆದರೆ ಇದು ಅವರಿಗೇ ತಿರುಗುಬಾಣ ಆಗಲಿದೆ. ನಾಡಿನ ಸಂಸ್ಕೃತಿಗೆ ವಿರುದ್ಧವಾಗಿರುವ ಈ ಕಾಯ್ದೆಯನ್ನು ಎಲ್ಲರೂ ವಿರೋಧ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ